ಪಠ್ಯ ಪುಸ್ತಕ ಪರಿಷ್ಕರಣೆ; ಸರ್ಕಾರದ ವಿರುದ್ಧ ರಮೇಶ್ ಕುಮಾರ್ ಗರಂ
ಚಿತ್ರದುರ್ಗ, ಜೂ 25: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರೆದಿದೆ. "ಎಳೆ ವಯಸ್ಸಿನ ಮಕ್ಕಳಿಗೆ ವಿಷ ಉಣ್ಣಿಸಲಾಗುತ್ತಿದೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ದಾರ್ಶನಿಕರಿಗೆ ಬಿಜೆಪಿ ಅಪಮಾನ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದರು.
"ಯಾವ ಮಾನವತಾವಾದಿಗಳು ಮಾರ್ಪಡಿಸಿರುವುದು. ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರ ಬೇಡ ಅಂದರೆ ಮಕ್ಕಳಿಗೆ ಇನ್ನೇನು ಹೇಳುವುದು. ಜನ ಮೌನವಾಗಿದ್ದಾಗ ಏನು ಮಾಡಲು ಸಾಧ್ಯವಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಜನರು ಪ್ರತಿಭಟಿಸಿದಾಗ ಸರ್ಕಾರಗಳಿಗೆ ಭಯ ಇರುತ್ತದೆ" ಎಂದರು.

"ರೋಹಿತ್ ಚಕ್ರತೀರ್ಥರನ್ನು ಪರಿಷ್ಕರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ನೋವಿನ ಸಂಗತಿ. ಮಹಾನ್ ಚೇತನ ಕುವೆಂಪು ಬಗ್ಗೆ ಅಗೌರವ ತೋರಿಸಿರುವ ಈ ವಿಕೃತರು ಸಮಿತಿಯ ಅಧ್ಯಕ್ಷರಾಗಿರುವುದು ಬೇಸರದ ವಿಷಯ. ಸಂವಿಧಾನದ ಆಶಯಗಳನ್ನು ಗೌರವಿಸುವ ದೃಷ್ಠಿಯಿಂದ ಮುಖ್ಯಮಂತ್ರಿಗಳು ಇತಿಶ್ರೀ ಹಾಡಬೇಕಿದೆ" ಎಂದು ತಿಳಿಸಿದರು.

ಆಪರೇಷನ್ ಕಮಲ; ಸಮ್ಮಿಶ್ರ ಸರ್ಕಾರ ಇರುವ ಕಡೆಗಳಲ್ಲಿ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರುತ್ತಿರುವ ಬಗ್ಗೆ ಮಾತನಾಡಿದ ರಮೇಶ್ ಕುಮಾರ್ ಅವರು "ಕರ್ನಾಟಕ ಆಯ್ತು, ಮಧ್ಯಪ್ರದೇಶ ಆಯ್ತು ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ವಾಮಮಾರ್ಗ ಹಿಡಿದು ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಲು ಮುಂದಾಗುತ್ತಿದೆ" ಎಂದರು.
"ಇದಕ್ಕೆ ನಾವೇನು ಹೊಸದಾಗಿ ಹೇಳಬೇಕಾದದ್ದು ಇರುವುದಿಲ್ಲ. ಜನರೇ ಸುಮ್ಮನಿರುವಾಗ ನಾವೇನು ಹೇಳುವುದು?. ಜನ ಹೇಳಬೇಕು, ಜನರು ಪ್ರತಿಕ್ರಿಯೆ ನೀಡಬೇಕು. ನಾವು ಹೇಳಿದರೆ ಪಕ್ಷದ ಅಭಿಪ್ರಾಯವಾಗುತ್ತದೆ. ಸಹಜವಾಗಿ ನಾವು ಬೇರೆ ಪಕ್ಷದವರು ಸರಿಯಿಲ್ಲ ಎಂದು ಹೇಳಬಹುದು" ಎಂದು ತಿಳಿಸಿದರು.

"ಆದರೆ ಇಂತಹ ಬೆಳವಣಿಗೆಗೆ ಜನರೇ ಇದಕ್ಕೆ ಪ್ರತಿಕ್ರಿಯಿಸಿದಿದ್ದಾಗ ಏನು ಮಾಡುವುದು?. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಅಂತಿಮವಾಗಿದ್ದಾಗ ಎಲ್ಲವನ್ನೂ ಜನರೇ ಹೇಳಬೇಕಾಗುತ್ತದೆ" ಎಂದರು.












Click it and Unblock the Notifications