ಕೊಲೆಗೆ ಧೈರ್ಯವೇ ಮಾಡದಂತಹ ಕಾನೂನು ಜಾರಿಗೆ ತರಬೇಕು: ಈಶ್ವರಪ್ಪ
ಚಿತ್ರದುರ್ಗ, ಜುಲೈ 28 : ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಂಡು ನಿರಪರಾಧಿ ಹುಡುಗನ ಹಾಗೂ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರಿನಲ್ಲಿ ಮುಸ್ಲಿಂ ಗುಂಡಾಗಳಿಂದ ಈ ದುಷ್ಕೃತ್ಯ ನಡೆಸಲಾಗಿದೆ. ಮಾನಸಿಕ ಸ್ಥಿತಿಯನ್ನು ಅವರು ಬದಲಾವಣೆ ಮಾಡಿಕೊಂಡಿಲ್ಲ. ಹೇಡಿಗಳ ರೀತಿ ಪ್ರವೀಣ್ ನೆಟ್ಟಾರು ಹತ್ಯೆ ಓಡಿ ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮುದಾಯದ ಹಿರಿಯರು ಈ ರೀತಿಯ ಗುಂಡಾಗಳಿಗೆ ತಿಳಿ ಹೇಳಬೇಕು. ಇಡೀ ರಾಜ್ಯದ ಶಾಂತಿ, ವ್ಯವಸ್ಥೆ ಹಾಳು ಮಾಡ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿದ್ದೇನೆ, ಎಲ್ಲಾ ಹಿರಿಯ ನಾಯಕರು ತುಂಬಾ ನೋವಿನಲ್ಲಿದ್ದಾರೆ. ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ ಕಗ್ಗೊಲೆ ನಡೆಯುತ್ತಿರುವ ಬಗ್ಗೆ ಸೂಕ್ತ ಕ್ರಮದ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ರೀತಿಯ ಕೊಲೆ ಮಾಡದಂತೆ ಯಾವ ರೀತಿಯ ಕಾನೂನಿನ ಭಯ ತರಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಇದೇ ಕೊಲೆ ಕೊನೆಯಾಗಬೇಕು
"ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಅದೂ ಹಿಂದೂ ಸಮಾಜ ದುರ್ಬಲ ಅಲ್ಲ. ಹಿಂದೂ ಸಮಾಜದ ಶಕ್ತಿಯನ್ನು ದುರುಪಯೋಗ ಮಾಡಿಕೊಂಡು ನಿರಪರಾಧಿ ಹುಡುಗರ ಕೊಲೆ ಮಾಡಲಾಗಿದೆ. ಇದನ್ನು ಇಡೀ ರಾಜ್ಯ ದೇಶ ಗಮನಿಸುತ್ತಿದೆ. ಇದರಿಂದ ಯಾವ ಸಂಘಟನೆಗಳಿವೆ ಎನ್ನುವುದು ತನಿಖೆಯಿಂದ ಹೊರಬರಲಿದೆ. ರಾಜ್ಯದ ಸಿಎಂ, ಪ್ರಧಾನಿ, ಅಮಿತ್ ಶಾ ಅವರಲ್ಲಿ ಪ್ರಾರ್ಥನೆ ಮಾಡುತ್ತೇನೆ, ದಕ್ಷಿಣ ಕನ್ನಡದ ಯುವಕನ ಕೊಲೆ ಕೊನೆ ಕೊಲೆ ಆಗಬೇಕು, ರಾಜ್ಯದಲ್ಲಿ ಮತ್ತೊಂದು ಕೊಲೆ ಆಗಬಾರದು. ತುರ್ತಾಗಿ ಕಾನೂನು ರಚನೆ ಆಗಬೇಕು" ಎಂದು ಮಾಜಿ ಸಚಿವರು ತಿಳಿಸಿದರು.
ಕೊಲೆಗಾರರು ಯಾರೆಂದು ಪತ್ತೆ ಹಚ್ಚಿ, ಕೊಲೆ ಹಿಂದೆ ಯಾವ ರಾಷ್ಟ್ರದ್ರೋಹಿ ಸಂಘಟನೆಗಳ ಹಿಂದಿದೆ ಎಂಬುದನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಬೇಕೆಂದು ಪ್ರಾರ್ಥನೆ ಮಾಡುತ್ತೇನೆ ಎಂದರು.

ತಕ್ಷಣವೇ ಯೋಗಿ ಮಾದರಿ ಕ್ರಮ ಆಗದು
ಉತ್ತರ ಪ್ರದೇಶದ ಯೋಗಿ ಸರಕಾರದ ಮಾದರಿಯಲ್ಲಿ ಹೆಜ್ಜೆ ಇಡಬೇಕೆಂಬುದರ ಬಗ್ಗೆ ಚಿಂತನೆ ನಡೆಸಲಾಗುವುದು. ಉತ್ತರ ಪ್ರದೇಶ ಬೇರೆ, ಕರ್ನಾಟಕ ಬೇರೆ ಒಂದೇ ಸಲಕ್ಕೆ ಹಾಗೇ ಕ್ರಮ ಕೈಗೊಳ್ಳಲು ಆಗದು. ಯಾವುದೇ ಧರ್ಮದವರು ತಪ್ಪು ಮಾಡಿದರೂ ಕ್ರಮ ಕೈಗೊಳ್ಳಿ ಎಂದು ಸಿದ್ಧರಾಮಯ್ಯ ಹೇಳ್ತಾರೆ. ಆದರೆ ನೇರವಾಗಿ ಮುಸ್ಲಿಂ ಗುಂಡಾಗಳು ಎಂದು ಯಾಕೆ ಹೇಳಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿತ್ತು. ಆಗಲೂ ಕಾಂಗ್ರೆಸ್ ಯಾರ ಪರವಾಗಿ ನಿಂತಿತ್ತು ಗೊತ್ತೇ ಇದೆ. ಕಾಂಗ್ರೆಸ್ ನವರದ್ದು ಹಿಂದೂ ವಿರೋಧಿ ಸಂಸ್ಕೃತಿ, ಹಿಂದೂ ಕಾರ್ಯಕರ್ತನ ಕೊಲೆ ಮಾಡಿದವರ ವಿರುದ್ಧ ಆಕ್ರೋಶ ಇರಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದಂತೆ ಬುಲ್ಡೋಜರ್ ಮಾದರಿ ಸರಕಾರ
ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿಯಲೂ ಕಾನೂನು ತರಬೇಕೆಂಬುದರ ಬಗ್ಗೆ ಚಿಂತನೆ ಮಾಡಲಾಗಿದೆ. ಕೊಲೆಯಾದವರ ಮನೆಗೆ ಹೋಗಿ ಕಣ್ಣೀರು, ಸಾಂತ್ವನ ಸಹಜ ಆಗಿ ಹೋಗಿದೆ. ನಾನು ಒಬ್ಬನೇ ಹೋಗುವಾಗ ಹೇಡಿಗಳಿಂದ ಕೊಲೆ ಆದರೆ? ಗೃಹ ಮಂತ್ರಿಗಳು ಏನು ಮಾಡಲು ಆಗುತ್ತದೆ. ಹಿಂದಿನ ಸರಕಾರದಲ್ಲಿದ್ದ ಸಿಎಂ, ಗೃಹ ಸಚಿವರು ವೀಕ್ ಇದ್ದರೇ?. ಕೊಲೆ ಆಗದೇ ಇರುವಂತೆ ಮುನ್ನೆಚ್ಚರಿಕೆ ವಹಿಸುವ ಕಾನೂನು ಬೇಕು ಎಂದು ಹೇಳಿದರು. ಬಿಜೆಪಿ ಕೊಲೆಗೆ ಕೊಲೆ ಉತ್ತರ ಕೊಟ್ಟುಕೊಂಡು ಬಂದಿಲ್ಲ. ಬದಲಿಗೆ ಕಾರ್ಯಕರ್ತರನ್ನು ಬೆಳೆಸಿಕೊಳ್ಳುತ್ತ ಬಂದಿದೆ. ಕೊಲೆಗೆ ಮನ್ನಣೆ ಕೊಡುವ ಬದಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಿಂದೂಗಳ ತಂಟೆಗೆ ಬರದಂತ ಕಾನೂನು ಮುಖ್ಯ
ಆರೋಪಿ ಪತ್ತೆ ಮಾಡುವುದು ದೊಡ್ಡ ಮಾತಲ್ಲ. ಹಿಂದು ಸಮಾಜದ ಸುದ್ದಿಗೆ ಬರದಂತೆ ಕಾನೂನು ರೂಪಿಸಬೇಕು. ಕೊಲೆಗಡುಕರ ಮಟ್ಟ ಹಾಕಲು ಕಾನೂನು ಕ್ರಮ ಹಾಗೂ ಸೈದ್ಧಾಂತಿಕ ಕೊಲೆ ತಡೆಗೆ ಕಾನೂನು ರೂಪಿಸಬೇಕು. ಯುಪಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಮುಟ್ಟಿದರೆ ಏನಾಗುತ್ತದೆಂಬ ಭಯವಿದೆ. ಯೋಗಿ ಆದಿತ್ಯನಾಥ್ ಏನು ಮಾಡುತ್ತಾರೆಂದು ಗೊತ್ತಿದೆ, ಆ ರೀತಿಯಲ್ಲಿ ಚಿಂತನೆ ಮಾಡಬೇಕು ಎಂದು ಮಾಜಿ ಸಚಿವ ತಿಳಿಸಿದ್ದಾರೆ.
ಪ್ರವೀಣ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸರಣಿ ರಾಜೀನಾಮೆ ಸಲ್ಲಿಸುತ್ತಿರುವುದರ ಬಗ್ಗೆ ಮಾತನಾಡಿ, ರಾಜೀನಾಮೆ ಕೊಟ್ಟು ಬಳಿಕ ಮುಂದೇನು ಮಾಡುತ್ತೀರಿ ಎಂದು ರಾಜೀನಾಮೆ ನೀಡುತ್ತಿರುವವರಿಗೆ ಪ್ರಶ್ನಸಿದರು. ಹಿರಿಯ ನಾಯಕರೊಂದಿಗೆ ಕುಳಿತು ಚರ್ಚೆ ಮಾಡಬೇಕೆಂದು ಸಲಹೆ ನೀಡಿದರು.












Click it and Unblock the Notifications