ಚಿತ್ರದುರ್ಗ; ಹಿರಿಯೂರಿನಲ್ಲಿ ಮಳೆ ಆರ್ಭಟ, ಜನರ ಪರದಾಟ
ಚಿತ್ರದುರ್ಗ, ಜೂನ್ 14 : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಮಳೆರಾಯ ಅಬ್ಬರಿಸಿದ್ದಾನೆ. ದಿಢೀರ್ ಸುರಿದ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಹಿರಿಯೂರು ನಗರ ಸೇರಿದಂತೆ ಮ್ಯಾಕ್ಲೂರಹಳ್ಳಿ, ಆದಿವಾಲ, ಪಟ್ರೆಹಳ್ಳಿ, ಮಸ್ಕಲ್, ಕಸವನಹಳ್ಳಿ, ಬಬ್ಬೂರು ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಭರ್ಜರಿ ಮಳೆಯಾಗಿದೆ.
ಹಿರಿಯೂರಿನ ಹೊರವಲಯದಲ್ಲಿರುವ ಹಿರಿಯೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರೋಡ್ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದರು. ನೀರು ತುಂಬಿದ ಕಾರಣ ಕೆಲವು ವಾಹನಗಳು ಕೆಟ್ಟು ನಿಂತವು. ಅದರಲ್ಲಿದ್ದ ಪ್ರಯಾಣಿಕರು ವಾಹನಗಳನ್ನು ತಳ್ಳಿಕೊಂಡು ಮುಂದೆ ಸಾಗುತ್ತಿರುವ ದೃಶ್ಯ ಕಂಡುಬಂದಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

ಹಳ್ಳಿಗಳ ಕಡೆಯೂ ಗುಡುಗು ಸಹಿತ ಉತ್ತಮ ಹದ ಮಳೆಯಾಗಿದೆ. ಇದರಿಂದ ರೈತರಿಗೆ ಸಂತಸವಾಗಿದೆ. ಮಳೆ ನಂತರ ಕೃಷಿ ಚಟುವಟಿಕೆಗಳು ಗರಿಗೆದರಿಲಿವೆ. ಈಗಾಗಲೇ ಕೆಲವು ಕಡೆ ರೈತರ ಬಿತ್ತನೆ ಕಾರ್ಯ ಆರಂಭವಾಗಿದೆ.
ಈರುಳ್ಳಿ, ಸೂರ್ಯಕಾಂತಿ, ಶೇಂಗಾ, ಮೆಕ್ಕೆಜೋಳ ಇನ್ನಿತರೆ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಶೇಂಗಾ, ರಾಗಿ, ಮೆಕ್ಕೆಜೋಳ ಇತರೇ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಿದ್ದಾರೆ. ಸರಿಯಾದ ಸಮಯದಲ್ಲಿ ಮಳೆ ಬಂದರೆ ಬೆಳೆಗಳು ಸಮೃದ್ಧವಾಗಿ ಬರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲೂ ಮಳೆ : ರಾಜಧಾನಿ ಬೆಂಗಳೂರಿನಲ್ಲೂ ಮಂಗಳವಾರ ಮಳೆಯಾಗಿದೆ. ಬನ್ನೇರುಘಟ್ಟ, ನೆಲಮಂಗಲ, ರಿಚ್ಮಂಡ್ ಸರ್ಕಲ್, ಶಾಂತಿನಗರ, ಮೆಜೆಸ್ಟಿಕ್ ,ಎಂಜಿ ರೋಡ್, ಲಾಲ್ ಬಾಗ್ ಜಯನಗರ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಸಂಜೆ ಸಮಯದಲ್ಲಿ ಮಳೆ ಸುರಿದಿದ್ದರಿಂದ ಕೆಲಸ ಮುಗಿಸಿ ಮನೆಗೆ ತೆರಳುವವರು ರಸ್ತೆ ಮಧ್ಯೆ ಸಿಲುಕಿ ಬಸ್ಸ್ಟ್ಯಾಂಡ್ ಮತ್ತು ಅಂಗಡಿಗಳ ಕೆಳಗೆ ಆಶ್ರಯ ಪಡೆಯುತ್ತಿರುವುದು ಕಂಡು ಬಂದಿತು.

ಹವಾಮಾನ ಇಲಾಖೆ ಪ್ರಕಾರ ಇನ್ನೂ 3 ದಿನ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಹೀಗಾಗಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications