ಹಿರಿಯೂರು: ಮದ್ವೆ ಹಾಗೂ ಕೋಳಿ ಮೊಟ್ಟೆಗಾಗಿ ತಂದೆಯನ್ನೇ ಹತ್ಯೆಗೈದ ಪಾಪಿ ಮಗ.!
ಹಿರಿಯೂರು, ಅಕ್ಟೋಬರ್, 27: ಸಾಮಾನ್ಯವಾಗಿ ಆಸ್ತಿ ವಿಚಾರವಾಗಿ ತಂದೆ-ಮಕ್ಕಳು ಅಥವಾ ಅಣ್ಣ-ತಮ್ಮಂದಿರು ಗಲಾಟೆ ನಡೆದಿರುವುದನ್ನು ಕೇಳಿರುತ್ತೇವೆ. ಆದರೆ ಇದೀಗ ವಿಚಿತ್ರ ಎಂಬಂತೆ ಮನೆಯಲ್ಲಿ ಊಟದ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ನಡುವೆ ಜಗಳ ಆರಂಭವಾಗಿ, ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಹಿರಿಯೂರು ತಾಲ್ಲೂಕಿನಲ್ಲಿ ಭಾನುವಾರ (ಅಕ್ಟೋಬರ್ 27) ನಡೆದಿದೆ.
ನನಗೆ ಮದುವೆ ಮಾಡಲಿಲ್ಲ ಮತ್ತು ಕೋಳಿ ಮೊಟ್ಟೆ ಎಲ್ಲಾ ನೀನೇ ತಿದಿಯಾ ಎಂದು ಮಗ ತಂದೆಯನ್ನು ಹತ್ಯೆಗೈದಿರುವ ವಿಚಿತ್ರ ಘಟನೆ ಹಿರಿಯೂರು ತಾಲ್ಲೂಕಿನ ಕುಂದಲಗುರ ಗ್ರಾಮದಲ್ಲಿ ನಡೆದಿದೆ.

ದೇವರಾಜ ತಂದೆಯನ್ನು ಕೊಂಡ ಆರೋಪಿ. ಊಟದ ವಿಚಾರಕ್ಕೆ ದೇವರಾಜ ಎಂಬಾತ 50 ವರ್ಷದ ತಂದೆ ರಂಗಸ್ವಾಮಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮನಿಸಿ ಸಿಪಿಐ ಗುಡ್ಡಪ್ಪ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿ ಆತ್ಮಹತ್ಯೆ: ಹದಿಹರೆಯದ ಮನಸ್ಸುಗಳು ಪ್ರೀತಿಯ ಬಲೆಗೆ ಬಿದ್ದು ಕೊನೆಗೆ ಮನಸ್ತಾಪದಿಂದ ಜೀವ ಕಳೆದುಕೊಂಡ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಹಾಗೆಯೇ ಇದೀಗ ಯುವಕನೊಬ್ಬ ಪ್ರೀತ್ಸೆ.. ಪ್ರೀತ್ಸೆ.. ಎಂದು ವಿದ್ಯಾರ್ಥಿನಿಯ ಬೆನ್ನು ಬಿದ್ದಿದ್ದು, ಈ ಕಾಟ ತಾಳಲಾರದೇ ವಿದ್ಯಾರ್ಥಿನಿ ಮನನೊಂದು ಕಟ್ಟಡ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಮೃತ ವಿದ್ಯಾರ್ಥಿಯನ್ನು (18) ಪ್ರೇಮಾ ಎಂದು ಗುರುತಿಸಲಾಗಿದೆ. ಯುವಕ ಇಟ್ಟ ಪ್ರೀತಿಯ ಬೇಡಿಕೆಯಿಂದ ಬೇಸತ್ತ ಈ ವಿದ್ಯಾರ್ಥಿನಿ ತಮ್ಮ ಕಾಲೇಜಿನ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಮೃತ ವಿದ್ಯಾರ್ಥಿನಿ ಚಳ್ಳಕೆರೆ ಮೂಲದವರಾಗಿದ್ದು, ಚಿತ್ರದುರ್ಗದ ಡಾನ್ ಬೋಸ್ಕೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಶುಕ್ರವಾರ (ಅಕ್ಟೋಬರ್ 18) ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಪ್ರೇಮಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರೇಮಾಗೆ ಯುವಕನೊಬ್ಬ ನನ್ನ ಪ್ರೀತಿಸು ಎಂದು ವಿಪರೀತ ಕಾಟ ಕೊಡುತ್ತಿದ್ದನಂತೆ. ಈ ಬಗ್ಗೆ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಇದೀಗ ಯುವಕನ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜೆಎಂಐಟಿ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಮತ್ತೊಂದೆಡೆ ಮಗಳ ಮೃತದೇಹ ಕಂಡು ಪ್ರೇಮಾ ತಂದೆ ಸುಧಾಕರ್ ಕಣ್ಣೀರಿಟ್ಟು ಗೋಳಾಡಿದ್ದಾರೆ.
"ಬೆಳಗ್ಗೆ ಮಗಳು ಕಾಲೇಜಿಗೆ ಹೋಗಿದ್ದಳು. ಆಗ ಫೋನ್ ಮಾಡಿ ಕಾಲೇಜು ತಲುಪಿದೆ ಎಂದು ಕರೆ ಮಾಡಿ ಹೇಳಿದ್ದಳು. ಇದಾದ ಕೆಲ ಕ್ಷಣಗಳಲ್ಲೇ ನಿಮ್ಮ ಮಗಳು ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ಕಾಲೇಜಿಂದ ಫೋನ್ ಬಂತು. ಹುಡುಗನೋರ್ವ ನಮ್ಮ ಮಗಳ ಫೋನ್ಗೆ ಮೆಸೇಜ್ ಕಳುಹಿಸಿದ್ದನಂತೆ. ಚಾಕು ಫೋಟೋ ಕಳುಹಿಸಿ ಬೆದರಿಸಿದ್ದಕ್ಕೆ ಹೀಗೆ ಮಾಡಕೊಂಡಿದ್ದಾಳೆ," ಎಂದು ಹೇಳುತ್ತಾ ಪ್ರೇಮಾ ತಂದೆ ಕಣ್ಣೀರಿಟ್ಟಿದ್ದಾರೆ.
ಮೂವರು ಮಹಿಳೆಯರು ನಾಪತ್ತೆ: ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಮಹಿಳೆಯರು ಕಾಣೆಯಾದ ಕುರಿತು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹಾಗಾದರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿ ಗ್ರಾಮದ ರೇಣುಕಮ್ಮ ಗಂಡ ಕರಿಯಪ್ಪ (21 ವರ್ಷ) ಎಂಬ ಯುವತಿ ಕಾಣೆಯಾದ ಕುರಿತು ಸೆಪ್ಟೆಂಬರ್ 19ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ರೇಣುಕಮ್ಮ 5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ಬಿಳಿ ಮಿಶ್ರಿತ ಬೂದು ಬಣ್ಣದ ನೈಟಿ ಧರಿಸಿರುತ್ತಾರೆ.
* ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಗ್ರಾಮದ ನಿವಾಸಿ ವಿಜಯಮ್ಮ (35 ವರ್ಷ) ಎಂಬ ಮಹಿಳೆ ಸೆಪ್ಟೆಂಬರ್ 19ರಂದು ಕಾಣೆಯಾದ ಬಗ್ಗೆ ಪ್ರಕರಣ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ವಿಜಯಮ್ಮ 5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುವರಾಗಿದ್ದಾರೆ. ಬಲಗಣ್ಣು ಚಿಕ್ಕದಾಗಿದ್ದು, ಕಣ್ಣಿನಲ್ಲಿ ಬಿಳಿ ಹೂ ಇರುತ್ತದೆ. ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ನೈಟಿ ಧರಿಸಿರುತ್ತಾರೆ.
* ಹೊಳಲ್ಕೆರೆ ತಾಲ್ಲೂಕಿನ ತೊಡರನಾಳ್ ಗ್ರಾಮದ ಪ್ರಕಾಶ್ ಎಂಬುವವರ ಮಗಳು ದೀಪಾ (20) ಎಂಬ ಯುವತಿ ಸೆಪ್ಟೆಂಬರ್ 22ರಂದು ಕಾಣೆಯಾದ ಕುರಿತು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ದೀಪಾ 5.2 ಅಡಿ ಎತ್ತರ, ಕೋಲು ಮುಖ, ಕಪ್ಪುಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವರಾಗಿದ್ದಾ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರದ ಟಾಪ್, ಅರಿಶಿಣ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.












Click it and Unblock the Notifications