ಚಿತ್ರದುರ್ಗದಲ್ಲಿ ತುಂತುರು ಮಳೆ: ರೈತರ ಮೊಗದಲ್ಲಿ ಸಂತಸ
ಚಿತ್ರದುರ್ಗ ಆಗಸ್ಟ್ 27: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಬೆಳ್ಳಂ ಬೆಳಿಗ್ಗೆಯಿಂದಲೇ ಮೊಡಕವಿದ ವಾತಾವರಣ ಸೃಷ್ಟಿಯಾಗಿದ್ದು, ತುಂತುರು ಮಳೆ ಎಡಬಿಡದೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಸಂಜೆಯಿಂದ ಆರಂಭಗೊಂಡ ಮಳೆ ರಾತ್ರಿಯವರೆಗೂ ಸುರಿಯಿತು. ಇದೀಗ ಶನಿವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಸಾರ್ವಜನಿಕರು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಸುಮಾರು ಇಪ್ಪತ್ತು ದಿನಗಳಿಂದ ಮಳೆ ಇಲ್ಲದೆ ರಾಗಿ, ಶೇಂಗಾ, ಮೆಕ್ಕೆಜೋಳ, ತೊಗರಿ ಇನ್ನೀತರ ಬೆಳೆಗಳು ಬಾಡಿಹೊಗಿದ್ದವು. ಇದೀಗ ಈ ತುಂತುರು ಮಳೆಗೆ ಬೆಳೆ ಚಿಗರೊಡಯಲಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇತ್ತೀಚಿಗಷ್ಟೇ ಸುರಿದಿದ್ದ ಮಳೆಗೆ ಕೆರೆ ಕಟ್ಟೆ ಹಳ್ಳಕೊಳ್ಳಗಳು ಭರ್ತಿಯಾಗಿದ್ದವು. ಇನ್ನು ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ಭಾಗದ ಬಹುತೇಕ ಕಡೆಗಳಲ್ಲಿ ತುಂತುರು ಮಳೆ ಆರಂಭವಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಸೂರ್ಯಕಾಂತಿ, ಹತ್ತಿ, ಶೇಂಗಾ, ಮೆಕ್ಕೆಜೋಳ, ತೊಗರಿ, ಈರುಳ್ಳಿ ಸೇರಿದಂತೆ ಮತ್ತಿತರರ ಬೆಳೆಗಳು ಸಮೃದ್ಧವಾಗಿ ಬೆಳೆದು ಈಬಾರಿ ರೈತರನ್ನು ಕೈಹಿಡಿಯಲಿವೆ.

ವಿವಿ ಸಾಗರ ಡ್ಯಾಂಗೆ 128.30 ಅಡಿ ನೀರು:
ಬಯಲು ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಮಾರಿಕಣಿವೆ ಜಲಾಶಯದಲ್ಲಿ 128.30 ಅಡಿ ನೀರು ಸಂಗ್ರಹವಾಗಿದೆ. 1933 ರಲ್ಲಿ 130.25 ಅಡಿ ಸಂಗ್ರವಾಗಿ ಡ್ಯಾಂ ಕೋಡಿ ಬಿದ್ದು ಇತಿಹಾಸ ನಿರ್ಮಾಣವಾಗಿತ್ತು. ಇದೀಗ 88 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಲಾಶಯದಲ್ಲಿ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗುತ್ತಿದೆ. ಇನ್ನು ಡ್ಯಾಂ ಕೋಡಿ ಬೀಳಲು ದಿನಗಣನೆ ಆರಂಭವಾಗಿದ್ದು 1.70 ಅಡಿ ನೀರು ಜಲಾಶಯಕ್ಕೆ ಹರಿದು ಬಂದರೆ ಎರಡನೇ ಬಾರಿಗೆ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಜಿಲ್ಲೆಯ ಜನತೆ ಕೋಡಿ ಬೀಳುವ ದೃಶ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಶೋಭಾಯಾತ್ರೆಗೆ ಮಳೆ ಅಡ್ಡಿ :
ಜಿಲ್ಲೆಯ ಹಿರಿಯೂರು ತಾಲೂಕು ಗೊಲ್ಲ ಸಮುದಾಯದ ಹಾಗೂ ಯಾದವ ನೌಕರರು ಹಮ್ಮಿಕೊಂಡಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಬೃಹತ್ ಶೋಭಾಯಾತ್ರೆಗೆ ಇಂದು ಬೆಳಗ್ಗೆ 12 ಗಂಟೆಗೆ ಆರಂಭವಾಗಲಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಸೇರುವ ಈ ಬೃಹತ್ ಶೋಭಾಯಾತ್ರೆಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಅದ್ದೂರಿ ಶ್ರೀಕೃಷ್ಣ ಜಯಂತಿ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಸಾಂಸ್ಕೃತಿಕ ಕಲಾಮೇಳಗಳು ಭಾಗವಹಿಸಲಿವೆ. ಹಿರಿಯೂರಿನ ವೇದಾವತಿ ನಗರದ ಶ್ರೀಕೃಷ್ಣ ದೇವಸ್ಥಾನದಿಂದ ಹೊರಟ ಶ್ರೀ ವಿನಾಯಕ, ಶ್ರೀಕೃಷ್ಣ, ಶ್ರೀ ಆಂಜನೇಯ ಮೆರವಣಿಗೆ ನಗರದ ಗಾಂಧಿ ವೃತ್ತ, ಆಸ್ಪತ್ರೆ ಸರ್ಕಲ್, ಚರ್ಚ್ ರಸ್ತೆ, ಹುಳಿಯಾರು ರಸ್ತೆ ತಲುಪಿ ಅಲ್ಲಿಂದ ಗಾಂಧಿ ಸರ್ಕಲ್ ಮೂಲಕ ವಾಪಸ್ ದೇವಸ್ಥಾನ ತಲುಪಲಿದೆ. ಈ ಬೃಹತ್ ಮೆರವಣಿಗೆಯಲ್ಲಿ ಶ್ರೀಕೃಷ್ಣ ಯಾದವನಂದ ಶ್ರೀಗಳು, ವನಕಲ್ಲು ಮಲ್ಲೇಶ್ವರ ಮಠದ ಶ್ರೀಗಳು, ಶಾಸಕಿ ಕೆ ಪೂರ್ಣಿಮ ಶ್ರೀನಿವಾಸ್, ಎಂಎಲ್ಸಿ ನಾಗರಾಜ್ ಯಾದವ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.












Click it and Unblock the Notifications