ಹುಟ್ಟು ಹಬ್ಬದ ನೆಪದಲ್ಲಿ ರಘು ಆಚಾರ್ ಚುನಾವಣಾ ತಯಾರಿ?
ಚಿತ್ರದುರ್ಗ, ಮೇ 11: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದೆ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಳ್ಳುತ್ತಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ಪೈಪೋಟಿ ಶುರುವಾಗಿದೆ.
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾನೇ ಅಭ್ಯರ್ಥಿ ಎಂದು ವರಿಷ್ಠರು ನಮಗೆ ತಿಳಿಸಿದ್ದಾರೆ ಎಂದು ಆಪ್ತರಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಈಗ ವಿಧಾನ ಪರಿಷತ್ನ ಮಾಜಿ ಸದಸ್ಯ ರಘು ಆಚಾರ್ ಹುಟ್ಟು ಹಬ್ಬದ ನೆಪದಲ್ಲಿ ಚುನಾವಣಾ ತಯಾರಿ ಆರಂಭಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆ ಟಿಕೆಟ್ ಬೇಡ ಎಂದು ಹೇಳಿದ್ದ ರಘು ಆಚಾರ್ ಈಗ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ.
2023ರ ಚುನಾವಣೆಯಲ್ಲಿ ಅವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಘು ಆಚಾರ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಇದೆ. ಹುಟ್ಟು ಹಬ್ಬದ ನೆಪದಲ್ಲಿ ರಘು ಆಚಾರ್ ಚಿತ್ರದುರ್ಗಕ್ಕೆ ಆಗಮಿಸಿದರು. ಅಭಿಯಾನಿಗಳು ಅವರನ್ನು ಭೇಟಿಯಾಗಿ ಶುಭ ಕೋರಿದರು. ಕಚೇರಿಯನ್ನು ಅವರು ನವೀಕರಣ ಮಾಡುತ್ತಿದ್ದು, ಮುಂದಿನ ಚುನಾವಣಾ ತಯಾರಿಗೆ ಚಾಲನೆ ಸಿಕ್ಕಿದೆ ಎಂಬ ಮಾತು ಹಬ್ಬಿದೆ.
ಹೊಸ ಕಚೇರಿ ಪ್ರಾರಂಭ; ಚುನಾವಣೆ ಸಮೀಪಿಸುತ್ತಿದ್ದಂತೆ ಚಿತ್ರದುರ್ಗ ನಗರದಲ್ಲಿ ರಘು ಆಚಾರ್ ಹೊಸ ಕಚೇರಿ ಆರಂಭಿಸಿದ್ದಾರೆ. ಈಗಾಗಲೇ ಇದ್ದ ಕಚೇರಿಗೆ ಸುಣ್ಣ, ಬಣ್ಣ ಬಳಿಯುವ ಹಾಗೂ ಇತರೆ ಕಾಮಗಾರಿ ಕೆಲಸ ವೇಗವಾಗಿ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಕಚೇರಿ ಪೂಜೆ ಮಾಡಿ ಅಧಿಕೃತವಾಗಿ ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ. ಈಗಾಗಲೇ ಕಚೇರಿ ಮುಂದೆ ಹುಟ್ಟು ಹಬ್ಬದ ಬ್ಯಾನರ್ಗಳು ರಾರಾಜಿಸುತ್ತಿವೆ.
ಅಭಿಮಾನಿಗಳ ಭೇಟಿ; ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಕೆಲವು ಸಂಘಟನೆಗಳ ಮುಖಂಡರು ರಘು ಆಚಾರ್ ಕಚೇರಿಗೆ ತೆರಳಿ ಶುಭಾಶಯ ಕೋರಿ, ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿದರು. ರಘು ಆಚಾರ್ ಚಿತ್ರದುರ್ಗಕ್ಕೆ ಬರುತ್ತಿದ್ದಂತೆಯೇ ಆಚಾರ್ ಅಭಿಮಾನಿ ಬಳಗದವರು ತಮ್ಮ ನಾಯಕನಿಗೆ ದೊಡ್ಡ ಹೂವಿನ ಹಾರ ಹಾಕಲು ತಂದಿದ್ದರು. ಹಾರಗಳನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಹಾಕಿದರು. ಅಲ್ಲಿಂದ ನೇರವಾಗಿ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಓಬವ್ವ ಪ್ರತಿಮೆ ಗೌರವ ಸಲ್ಲಿಸಿದರು.
ರಾಜಕಾರಣ ಪ್ರಾರಂಭ; ಒನ್ ಇಂಡಿಯಾ ಪ್ರತಿನಿಧಿ ಜೊತೆ ಮಾತಾಡಿದ ರಘು ಆಚಾರ್ "ನಾನು ಚಿತ್ರದುರ್ಗದಿಂದ ರಾಜಕಾರಣ ಪ್ರಾರಂಭ ಮಾಡಿದ್ದೇನೆ. ಜಿಲ್ಲೆಯ ಮತದಾರರು ಎರಡು ಬಾರಿ ನನ್ನನ್ನು ಎಂಎಲ್ಸಿ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಚಿತ್ರದುರ್ಗದಲ್ಲೇ ಇದ್ದೀನಿ. ಮುಂದೆಯೂ ಚಿತ್ರದುರ್ಗದಲ್ಲೇ ರಾಜಕಾರಣ ಮಾಡುತ್ತೇನೆ" ಎಂದರು.
"ಚಿತ್ರದುರ್ಗ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ. ನಾನು ಸಾಯುವವರೆಗೂ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತೇನೆ. ಇಂದು ನನ್ನ ಹುಟ್ಟಿದ ಹಬ್ಬ ಸ್ನೇಹಿತರು, ಅಭಿಮಾನಿಗಳು ಸೇರಿಕೊಂಡಿದ್ದಾರೆ. ಪಕ್ಷ ಅವಕಾಶ ಮಾಡಿ ಕೊಟ್ಟರೆ ಚಿತ್ರದುರ್ಗದಿಂದಲೇ ಸ್ಪರ್ಧೆ ಮಾಡುತ್ತೇನೆ" ಎಂದು ಹೇಳಿದರು.
ಚಿತ್ರದುರ್ಗ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನುಮನುಲಿ ಷಣ್ಮುಖಪ್ಪನಿಗೆ ಈ ಬಾರಿ ಟಿಕೆಟ್ ತಪ್ಪಲಿದೆ. ಮತ್ತೊಂದು ಕಡೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದ ಮಾಜಿ ಸಚಿವ ಡಿ. ಸುಧಾಕರ್ ಕಾಡುಗೊಲ್ಲರಿಗೆ ಹಿರಿಯೂರು ಕ್ಷೇತ್ರವನ್ನು ಬಿಟ್ಟು ಕೊಟ್ಟು, ಚಿತ್ರದುರ್ಗದಿಂದ ಸ್ಪರ್ಧಿಸಲಿ ಎಂಬ ಮಾತುಗಳು ಕೇಳಿಬರುತ್ತಿವೆ.
Recommended Video