ಅರ್ಚಕ ವೃತ್ತಿ ನೀಡಬೇಕೆಂದು ಒತ್ತಾಯಿಸಿ ದೇವಸ್ಥಾನದ ಮುಂದೆ ಪ್ರತಿಭಟನೆ
ಚಿತ್ರದುರ್ಗ, ಸೆಪ್ಟೆಂಬರ್ 28: ಅರ್ಚಕ ವೃತ್ತಿ ನೀಡಬೇಕೆಂದು ಒತ್ತಾಯಿಸಿ ವ್ಯಕ್ತಿಯೊಬ್ಬರು ದೇವಾಲಯದ ಮುಂದೆ ಏಕಾಂಗಿ ಧರಣಿ ನಡೆಸಿದ ಘಟನೆ ಸೋಮವಾರ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯದಲ್ಲಿ ಜರುಗಿತು.
ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಸಿ. ರಾಜಣ್ಣ ಅವರಿಗೆ ಆರೋಗ್ಯ ಸಮಸ್ಯೆಗಳಿತ್ತು. ಹೀಗಾಗಿ ತಮ್ಮ ಜತೆಗೆ ಕಾರ್ಯನಿರ್ವಹಿಸಲು ತಮ್ಮ ಅಣ್ಣನ ಮಗನಾದ ಪಿ.ಆರ್. ರವಿಕುಮಾರ್ ಅವರ ನೆರವನ್ನು ಪಡೆಯುತ್ತಿದ್ದರು. ಇವರಿಗೆ ದೇವಾಲಯ ವ್ಯವಸ್ಥಾಪನಾ ಮಂಡಳಿಯಿಂದ ಯಾವುದೇ ಆದೇಶ, ವೇತನ ಅಥವ ಗೌರವಧನ ನೀಡಿಲ್ಲ.
ರಾಜಣ್ಣನವರು ನಿವೃತ್ತಿಯಾದ ನಂತರ ವ್ಯವಸ್ಥಾಪನಾ ಮಂಡಳಿ ರವಿಕುಮಾರ್ ಅವರನ್ನು ಬಿಟ್ಟು, ಬೇರೆ ಇಬ್ಬರು ಅರ್ಚಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿದೆ. ಈಗಾಗಲೇ ನಾಲ್ಕೈದು ಜನರು ಪೂಜಾರಿ ವೃತ್ತಿ ನೀಡಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ದೇವಾಲಯ ಕಾರ್ಯನಿರ್ವಹಿಸಲು ಸದ್ಯಕ್ಕೆ ತಾತ್ಕಾಲಿಕ ಅರ್ಚಕರನ್ನು ನೇಮಿಸಿದೆ. ಹೀಗಿದ್ದಾಗ ರವಿಕುಮಾರ್ ಅವರು ಸೋಮವಾರ ದಿಢೀರನೆ ದೇವಾಲಯ ಪ್ರವೇಶಿಸಿ, ನಾನು ಅರ್ಚಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿ ದಾಂಧಲೆ ನಡೆಸಿದ್ದಾರೆ. ಜಗಳ ಹೆಚ್ಚಾದಾಗ ಸಿಬ್ಬಂದಿ ಇವರನ್ನು ದೇವಾಲಯದಿಂದ ಹೊರ ಹಾಕಿದ್ದಾರೆ. ನಂತರ ದೇವಾಲಯದ ಮುಂಭಾಗದಲ್ಲೇ ಧರಣಿ ನಡೆಸಲು ಕುಳಿತಿದ್ದಾರೆ. ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ರವಿಕುಮಾರ್ ಅವರನ್ನು ವಶಕ್ಕೆ ಪಡೆದು ನಂತರ ಮನೆಗೆ ಕಳಿಸಿದ್ದಾರೆ.

"ನಾನು ದೇವಾಲಯದಲ್ಲಿ 22 ವರ್ಷಗಳಿಂದ ಕಾರ್ಯನಿರ್ವಹಿಸಿದ್ದೇನೆ. ನನ್ನ ಕುಟುಂಬ ಇದನ್ನೇ ನಂಬಿಕೊಂಡಿದೆ. ಎರಡು ವರ್ಷಗಳಿಂದ ನನ್ನನ್ನು ಹೊರಗಿಟ್ಟಿದ್ದಾರೆ. ಅರ್ಚಕ ಹುದ್ದೆ ನೀಡುವಂತೆ ಸ್ಥಳೀಯ ಶಾಸಕರಿಂದ ಪತ್ರ ನೀಡಿದ್ದೇನೆ. ಹೀಗಿದ್ದರೂ ನನಗೆ ನ್ಯಾಯ ದೊರೆತಿಲ್ಲ. ಈ ದಿನ ನನ್ನನ್ನು ಹೊರಗೆ ತಳ್ಳಿದ್ದಾರೆ. ನನಗೆ ನ್ಯಾಯ ಒದಗಿಸಬೇಕು" ಎಂದು ರವಿಕುಮಾರ್ ಒತ್ತಾಯ ಮಾಡಿದ್ದಾರೆ.

ಪ್ರತಿಭಟನೆ ಮುಂಚೆ ಯಾವುದೇ ಅನುಮತಿ ಪಡೆದಿಲ್ಲ. ಸಿಬ್ಬಂದಿ ಹಾಗೂ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಅರ್ಚಕರ ನೇಮಕಕ್ಕೆ ಇಲಾಖೆ ಇನ್ನೂ ಆದೇಶ ನೀಡಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications