ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕ
ಚಿತ್ರದುರ್ಗ, ಜನವರಿ 18: " ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿ ನೆನೆಗುದಿಗೆ ಬಿದ್ದಿರುವ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಅತಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು" ಎಂದು ಶಿರಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿ. ಎಂ. ರಾಜೇಶ್ ಗೌಡ ಹೇಳಿದರು.
ಸೋಮವಾರ ಹಿರಿಯೂರಿನಲ್ಲಿ ಮಾತನಾಡಿದ ಅವರು, "ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಬಹಳ ಆಸಕ್ತರಾಗಿದ್ದಾರೆ. ತ್ವರಿತ ಗತಿಯಲ್ಲಿ ಅಧ್ಯಕ್ಷರನ್ನು ಹಾಗೂ ನಿರ್ದೇಶಕರನ್ನು ನೇಮಕ ಮಾಡಲಾಗುವುದು" ಎಂದರು.
"ಸಮುದಾಯದಲ್ಲಿ ಆಕಾಂಕ್ಷಿಗಳು ಹೆಚ್ಚು ಇರುತ್ತಾರೆ. ಸೌಹಾರ್ದಯುತವಾಗಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿ ಶೀಘ್ರಗತಿಯಲ್ಲಿ ಪ್ರಕ್ರಿಯೆ ಮುಗಿಸಲಾಗುವುದು. ಅಭಿವೃದ್ಧಿ ನಿಗಮ ಜಾರಿಗೆ ಬರುವುದಕ್ಕೆ ವಿಳಂಬವಾಗಿದೆ. ನಾನು ಯಡಿಯೂರಪ್ಪ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ" ಎಂದರು.

"ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಭೇಟಿ ಮಾಡಿದ್ದಾರೆ. ತ್ವರಿತ ಗತಿಯಲ್ಲಿ ಅಧ್ಯಕ್ಷರನ್ನು ಹಾಗೂ ನಿರ್ದೇಶಕರನ್ನು ನೇಮಕ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ" ಎಂದರು.
ಗೊಲ್ಲರಹಟ್ಟಿಗಳು ಕಂದಾಯ ಗ್ರಾಮ : "ಗೊಲ್ಲರಹಟ್ಟಿಗಳು ಇದುವರೆಗೂ ಕಂದಾಯ ಗ್ರಾಮಗಳಾಗಿಲ್ಲ. ಶಿರಾ ಕ್ಷೇತ್ರದಲ್ಲಿ ಸುಮಾರು 140 ಗೊಲ್ಲರಟ್ಟಿ ಕಂದಾಯ ಗ್ರಾಮವಾಗಬೇಕಿದೆ. ನಾನು ಕೂಡ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಶಿರಾ ಕ್ಷೇತ್ರದಲ್ಲಿ ಹೆಚ್ಚು ಕಾಡುಗೊಲ್ಲ ಸಮುದಾಯ ಇದ್ದು ಸುಮಾರು 78 ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಬೇಕಿದೆ" ಎಂದು ಶಾಸಕ ಡಾ. ಸಿ. ಎಂ. ರಾಜೇಶ್ ಗೌಡ ಹೇಳಿದರು.
"ಕಂದಾಯ ಗ್ರಾಮಗಳಾಗಿ ಮಾಡದಿದ್ದರೆ ಅವರಿಗೆ ಯಾವುದೇ ಹಕ್ಕು ಇರುವುದಿಲ್ಲ, ಕೇಂದ್ರ ಸರ್ಕಾರದಿಂದ ಬರುವ ಸೌಲಭ್ಯಗಳು ಸಿಗುವುದಿಲ್ಲ. ಆದ್ದರಿಂದ, ಗೊಲ್ಲರಹಟ್ಟಿಗಳನ್ನು ಶೀಘ್ರದಲ್ಲೇ ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಎಂದು ಮನವಿ ಸಲ್ಲಿಸಲಾಗಿದೆ" ಎಂದರು.
"ಶಿರಾ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ 28 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲಾಗಿದೆ. ಬಾಕಿ ಉಳಿದ 78 ಗೊಲ್ಲರಹಟ್ಟಿಗಳನ್ನು ಈ ವರ್ಷದ ಅಂತ್ಯದಲ್ಲಿ ಕಂದಾಯ ಗ್ರಾಮಗಳಾಗಿ ಮಾಡಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವೆ" ಎಂದು ಭರವಸೆ ನೀಡಿದರು.












Click it and Unblock the Notifications