ಚಿತ್ರದುರ್ಗದಲ್ಲಿ ತ್ರಿಬಲ್ ಮರ್ಡರ್ ಪ್ರಕರಣ: ಕೊಲೆಗಾರರ ಬಂಧನಕ್ಕೆ ಬಲೆ ಬೀಸಿದ ಪೋಲಿಸರು
ಚಿತ್ರದುರ್ಗ, ಆಗಸ್ಟ್ 17: ಸೋಮವಾರ ಬೆಳ್ಳಂಬೆಳಿಗ್ಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಹೊರವಲಯದಲ್ಲಿ ಹಂದಿ ಸಾಕಣೆ ಮಾಡಿ ಜೀವನ ಸಾಗಿಸುತ್ತಿದ್ದ 53 ವರ್ಷದ ಸೀನಪ್ಪ ಸೇರಿದಂತೆ ಮೂವರ ಬರ್ಬರ ಕೊಲೆಯಾಗಿದೆ.
Recommended Video
ದಿನನಿತ್ಯ ರಾತ್ರಿ ವೇಳೆ ಹಂದಿ ಕಾವಲು ಕಾಯಲು ಹೋಗುತ್ತಿದ್ದ, 22 ವರ್ಷದ ಮಗ ಯಲ್ಲೇಶ್ ಹಾಗೂ ತಮ್ಮನ ಮಗ 25 ವರ್ಷದ ಮಾರೇಶ ಕೂಡ ಸೀನಪ್ಪನ ಜೊತೆ ಇದ್ದರು. ಎಂದಿನಂತೆ ನಿನ್ನೆ ರಾತ್ರಿ ಕೂಡ ಹಂದಿಗಳ ಕಾವಲು ಕಾಯುತ್ತಿದ್ದ ವೇಳೆ ದಾಳಿ ನಡೆಸಿರುವ ಸುಮಾರು ಹತ್ತಕ್ಕೂ ಹೆಚ್ಚು ಜನರ ತಂಡ ಹಂದಿಯ ಕಾವಲಿಗಿದ್ದ ಸೀನಪ್ಪನ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಚಿತ್ರದುರ್ಗ: ಹಂದಿ ಕದಿಯಲು ಬಂದ ಕಳ್ಳರಿಂದ ಮೂವರ ಕೊಲೆ
ಆತನ ರಕ್ಷಣೆಗೆ ಬಂದ ಯಲ್ಲೇಶ್ ಹಾಗೂ ಮಾರೇಶನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಸುಮಾರು 80 ಕ್ಕೂ ಹೆಚ್ಚು ಹಂದಿಗಳನ್ನು ಕದ್ದೊಯ್ದಿರುವ ಘಟನೆ ತಡ ರಾತ್ರಿ ನಡೆದಿದೆ ಎಂದು ಮೃತ ಸೀನಪ್ಪನ ತಮ್ಮನ ಮಗ ಮಲ್ಲೇಶ್ ತಿಳಿಸಿದರು.
ಬೆಳ್ಳಂಬೆಳಗ್ಗೆ ಮೂರು ಕೊಲೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ತಳುಕು ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ನಾಯಕನಹಟ್ಟಿ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಕೊಲೆಯಾದ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು, ಶ್ವಾನ ದಳ ಕರೆಸಿ ಹೆಚ್ಚಿನ ತನಿಖೆಗೆ ಆದೇಶಿಸಿದ್ದು, ಮೇಲ್ನೋಟಕ್ಕೆ ಈ ಹಿಂದೆ ಹಂದಿ ಕೊಳ್ಳಲು ಬಂದಿದ್ದ ಜನರ ಬಗ್ಗೆ ಅನುಮಾನವಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕೊಲೆಗೆ ನೈಜ ಕಾರಣ ಏನಿರಬಹುದು ಎಂಬುದನ್ನು ಪತ್ತೆ ಹಚ್ಚುತ್ತೇವೆ ಎಂದು ಎಸ್ಪಿ ರಾಧಿಕಾ ಹೇಳಿದರು.
ಹಂದಿ ಸಾಕಣೆ ಮಾಡಿ ಜೀವನ ಸಾಗಿಸುತ್ತಿದ್ದ ಮೂವರು ಅಮಾಯಕರ ಕೊಲೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಾಯಕನಹಟ್ಟಿ ಠಾಣೆ ಪೊಲೀಸರು ಕೊಲೆಗಾರರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕೊಲೆಗೆ ಅಸಲಿ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬೀಳಬೇಕಿದೆ.