22 ಮಕ್ಕಳು ನಾಪತ್ತೆ ಆರೋಪ: ಮುರುಘಾ ಮಠಕ್ಕೆ ನೋಟಿಸ್ ಜಾರಿ
ಚಿತ್ರದುರ್ಗ, ಡಿ. 03: ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್ಜೆಎಂ) ನಡೆಸುತ್ತಿರುವ ಅನಾಥಾಶ್ರಮದಿಂದ 22 ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬ ಗಂಭೀರ ಆರೋಗಳು ಕೇಳಿ ಬಂದಿವೆ. ಈ ಹಿನ್ನೆಲೆ ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗ, ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್, ಗವರ್ನರ್ ತಾವರ್ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಹೋರಾಟಗಾರ ಮತ್ತು ಆರ್ಟಿಐ ಕಾರ್ಯಕರ್ತ ಬಿ ಎಚ್ ಗೌಡ್ರು ನವೆಂಬರ್ 25 ರಂದು ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕು ಆಯೋಗ ಶುಕ್ರವಾರ ಮಠಕ್ಕೆ ನೋಟಿಸ್ ಜಾರಿ ಮಾಡಿದೆ.
Murugha Shree Bail : ಮುರುಘಾ ಶ್ರೀಗಳ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಜಾ
ದೂರಿನ ಪ್ರಕಾರ, ಎಸ್ಜೆಎಂ ಮಠದ ಪೀಠಾಧಿಪತಿ ಮತ್ತು ಏಕೈಕ ವ್ಯವಸ್ಥಾಪಕ ಟ್ರಸ್ಟಿ ಶಿವಮೂರ್ತಿ ಶರಣರು 2001 ರಿಂದ ಮಠದ ಆವರಣದಲ್ಲಿ ಮಕ್ಕಳಿಗಾಗಿ ಮೂರು ಆಶ್ರಯ ಮನೆಗಳನ್ನು ನಡೆಸುತ್ತಿದ್ದಾರೆ.
ಮುರುಘಾ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಅನಾಥ ಮಕ್ಕಳ ಆಶ್ರಯಧಾಮ, ಅಕ್ಕಮಹಾದೇವಿ ವಸತಿ ನಿಲಯ ಮತ್ತು ಎಸ್ಜೆಎಂ ವಿದ್ಯಾಪೀಠ ಎಂಬ ಮೂರು ಆಶ್ರಯಧಾಮಗಳು ನಡೆಯುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಡೆದ ದಾಖಲೆಗಳನ್ನು ತಿಳಿಸಿ ಹೋರಾಟಗಾರ ಗೌಡ್ರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುರುಘಾ ಮಠದ ಆವರಣದಲ್ಲಿ ಮೂರು ಆಶ್ರಯಧಾಮಗಳು
ಸರ್ಕಾರದ ಅನುದಾನ ಪಡೆಯಲು ಮಠವು 2011ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿವರ ಸಲ್ಲಿಸಿದೆ. ಇದರ ಪ್ರಕಾರ ಅನಾಥಾಶ್ರಮದಲ್ಲಿ 11 ಮಂದಿ ಅನಾಥರು ಮತ್ತು 14 ಒಂಟಿ ಪೋಷಕರ ಮಕ್ಕಳಿದ್ದಾರೆ. ಮಠದವರು ನಡೆಸುತ್ತಿದ್ದ ಹಾಸ್ಟೆಲ್ನಲ್ಲಿ ಏಳು ಮಂದಿ ಅನಾಥರು, 13 ಒಂಟಿ ಪೋಷಕರ ಮಕ್ಕಳು ಮತ್ತು ಐದು ಬಡ ಕುಟುಂಬದ ಮಕ್ಕಳು ಇದ್ದರು.
ಇನ್ನು ದಾಖಲೆಯ ಪ್ರಕಾರ, ಎಸ್ಜೆಎಂ ವಿದ್ಯಾಪೀಠದಲ್ಲಿ ನಾಲ್ವರು ಅನಾಥರು, 16 ಒಂಟಿ ಪೋಷಕರ ಮಕ್ಕಳು ಮತ್ತು ಐದು ಬಡ ಕುಟುಂಬಗಳ ವಿದ್ಯಾರ್ಥಿಗಳು ಇದ್ದರು.
ಸಹಾಯಧನ ಬೇಡವೆಂದು ಸರ್ಕಾರಕ್ಕೆ ಮಠಾಧೀಶರ ಪತ್ರ!
ಶ್ರೀ ಬಸವೇಶ್ವರ ಅನಾಥ ಮಕ್ಕಳ ಆಶ್ರಯಧಾಮ, ಅಕ್ಕಮಹಾದೇವಿ ವಸತಿ ನಿಲಯ ಮತ್ತು ಎಸ್ಜೆಎಂ ವಿದ್ಯಾಪೀಠ ಎಂಬ ಮೂರು ಆಶ್ರಯಧಾಮಗಳಲ್ಲಿ ಒಟ್ಟು 75 ಮಕ್ಕಳಿದ್ದು, ಅದರಲ್ಲಿ 22 ಮಂದಿ ಅನಾಥರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಪಟ್ಟಿಯಿಂದ ತಿಳಿದುಬಂದಿದೆ.
ಎಸ್ಜೆಎಂ ಮಠವು 2011 ರ ಮೊದಲು ರಾಜ್ಯ ಸರ್ಕಾರದ ಸಹಾಯವನ್ನು ಪಡೆಯುತ್ತಿತ್ತು. ನಂತರ ಮಠವೇ ಮಕ್ಕಳನ್ನು ಬೆಳೆಸುತ್ತದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಸಹಾಯವನ್ನು ನಿಲ್ಲಿಸುವಂತೆ 2012 ರಲ್ಲಿ ಮಠಾಧೀಶರು ಇಲಾಖೆಗೆ ಪತ್ರ ಬರೆದಿದ್ದರು. ಆದ್ದರಿಮದ ರಾಜ್ಯ ಸರ್ಕಾರವು ಮಠಕ್ಕೆ ಅನುದಾನವನ್ನು ನಿಲ್ಲಿಸಿತ್ತು.
ಮುರುಘಾ ಶರಣರ ಬಂಧನದ ನಂತರ ಅನಾಥ ಮಕ್ಕಳು ನಾಪತ್ತೆ!
"ಮುರುಘಾ ಶರಣರು ಎರಡು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ನಂತರ ಮಕ್ಕಳು ನಾಪತ್ತೆಯಾಗಿದ್ದಾರೆ. ದಾಖಲೆಗಳ ಪ್ರಕಾರ ಮಠವು 22 ಅನಾಥರನ್ನು ಹೊಂದಿದೆ. ಆದರೆ ಈಗ ಅವರು ಪತ್ತೆಯಾಗಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಹೇಳಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯು ಅಕ್ಟೋಬರ್ 18 ರಂದು ಮಠಕ್ಕೆ ಭೇಟಿ ನೀಡಿದ್ದು, ಮಠದ ವತಿಯಿಂದ ನಡೆಯುತ್ತಿರುವ ಸಂಸ್ಥೆಗಳಲ್ಲಿ ಕೇವಲ ಇಬ್ಬರು ಅನಾಥರು ಮಾತ್ರ ಕಂಡುಬಂದಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.
2011ರ ಜನವರಿಯಲ್ಲಿ ರಾಜ್ಯ ಸರ್ಕಾರವು ಇಲಾಖೆಯೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡ ನಂತರವೂ ಮಠವು ಮಕ್ಕಳಿಗೆ ಆಶ್ರಯ ನೀಡುವುದನ್ನು ಹೇಗೆ ಮುಂದುವರಿಸಿದೆ ಎಂದು ಪ್ರಶ್ನಿಸಿದ್ದಾರೆ.
ಸಮಗ್ರ ತನಿಖೆಗೆ ಆಗ್ರಹಿಸಿ ನ್ಯಾಯಾಲಯಕ್ಕೆ ಮೊರೆ
"ಮಠವು ಈ ಮಕ್ಕಳಿಗೆ ಆಶ್ರಯ ನೀಡುವಾಗ ಬಾಲ ನ್ಯಾಯ ಕಾಯಿದೆ ಮತ್ತು ಕಾನೂನಿನ ಇತರ ನಿಬಂಧನೆಗಳ ಅಡಿಯಲ್ಲಿ ನಿಯಮಗಳನ್ನು ಅನುಸರಿಸಿದೆಯೇ?" ರಂದು ಪ್ರಶ್ನಿಸಿದ್ದಾರೆ.
ದೂರು ದಾಖಲಿಸಿರುವ ಅಧಿಕಾರಿಗಳು ಅನಾಥ ಮಕ್ಕಳ ವಿವರಗಳನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ, ಸಮಗ್ರ ತನಿಖೆಗಾಗಿ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
"ಬಹುಶಃ ಮಕ್ಕಳು ಈಗ ವಯಸ್ಕರಾಗಿದ್ದಾರೆ. ಬೇರೆ ಸ್ಥಳಗಳಲ್ಲಿ ನೆಲೆಸಿದ್ದಾರೆ. ನಾವು ಶುಕ್ರವಾರ ಎಸ್ಜೆಎಂ ಮಠಕ್ಕೆ ಅನಾಥರ ಪತ್ತೆಗಾಗಿ ನೋಟಿಸ್ ನೀಡಿದ್ದೇವೆ. ವಿವರಗಳನ್ನು ನೀಡಲು ನಾವು ಅವರಿಗೆ ಒಂದು ವಾರಗಳ ಕಾಲಾವಕಾಶ ನೀಡಿದ್ದೇವೆ" ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ (ಡಿಸಿಪಿಯು) ಹೇಳಿದ್ದಾರೆ.
ಇನ್ನು, ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಶರಣರ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಜಾಗೊಂಡಿದೆ. ಜಾಮೀನು ಅರ್ಜಿಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ವಜಾ ಮಾಡಿದ್ದಾರೆ.