ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ಮುಕ್ತಿ ಬಾವುಟ ಹರಾಜು
ಚಿತ್ರದುರ್ಗ, ಮಾರ್ಚ್ 12: ಕರ್ನಾಟಕದ ಎರಡನೇ ಅತಿ ದೊಡ್ಡ ರಥೋತ್ಸವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪವಾಡ ಪುರುಷ ತಿಪ್ಪೇರುದ್ರಸ್ವಾಮಿ ರಥೋತ್ಸವ. ಇಂದು ಬಹಳ ವಿಜೃಂಭಣೆಯಿಂದ ಲಕ್ಷಾಂತರ ಭಕ್ತರ ಮಧ್ಯೆ ಜರುಗಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ತಿಪ್ಪೇರುದ್ರಸ್ವಾಮಿ ಜಯಘೋಷಗಳೊಂದಿಗೆ, ತಮಟೆ ಸದ್ದು, ಓಲಗ, ವಿವಿಧ ವಾದ್ಯಗಳ ಮಂತ್ರ ಘೋಷಣೆಗಳೊಂದಿಗೆ ಭಕ್ತರು ರಥವನ್ನು ಎಳೆದರು.
ಇಂದು ಬೆಳಿಗ್ಗೆಯಿಂದಲೇ ತಿಪ್ಪೇರುದ್ರಸ್ವಾಮಿಯ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು. ತಿಪ್ಪೇರುದ್ರಸ್ವಾಮಿಯ ರಥಕ್ಕೆ ವಿವಿಧ ಬಣ್ಣಗಳ ಮೂಲಕ ಶೃಂಗಾರ ಮಾಡಿ, ಭಕ್ತರನ್ನು ಆಕರ್ಷಿಸುವಂತೆ ಮಾಡಿದ್ದವು. ರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಥ ಎಳೆಯಲು ಚಾಲನೆ ನೀಡಲಾಯಿತು.

ತಿಪ್ಪೇರುದ್ರಸ್ವಾಮಿಯ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿದ್ದು, ಸ್ವಾಮಿಯ ಮುಕ್ತಿ ಬಾವುಟವನ್ನು ಶಿವಮೊಗ್ಗ ಹಾಲು ಒಕ್ಕೂಟದ ಸದಸ್ಯ, ಚಳ್ಳಕೆರೆಯ ಕಾಂಗ್ರೆಸ್ ಮುಖಂಡ ಸಿ.ವೀರಭದ್ರ ಬಾಬು 26 ಲಕ್ಷ ರುಪಾಯಿಗೆ ಮುಕ್ತಿ ಬಾವುಟವನ್ನು ಪಡೆದುಕೊಂಡಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಮುಕ್ತಿ ಬಾವುಟ ಕಡಿಮೆಗೆ ಬೆಲೆಗೆ ಹರಾಜು ಆಗಿದೆ. ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು.

ಜಾತ್ರೆಯಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.












Click it and Unblock the Notifications