ಬೋವಿ ಸ್ವಾಮೀಜಿ ಸೇರಿದಂತೆ ಬಿಜೆಪಿ ಶಾಸಕರಿಗೆ ಕೊಲೆ ಬೆದರಿಕೆ ಸಂದೇಶ..!
ಚಿತ್ರದುರ್ಗ, ಜುಲೈ 16 : ಜಿಲ್ಲೆಯ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ , ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಹಾಗೂ ಹೊಸದುರ್ಗ ಬಿಜೆಪಿ ಗೂಳಿಹಟ್ಟಿ ಡಿ ಶೇಖರ್ ಸೇರಿದಂತೆ ಹಲವರಿಗೆ ಕೊಲೆ ಬೆದರಿಕೆ ಸಂದೇಶ ಬಂದಿರುವುದಾಗಿ ಜಿಲ್ಲಾ ವರಿಷ್ಠಾಧಿಕಾರಿ ಪರುಶುರಾಮ್ ಹೇಳಿಕೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ KSP ಆ್ಯಪ್ ಮೂಲಕ ಕೊಲೆ ಬೆದರಿಕೆ ಸಂದೇಶ ಬಂದಿತ್ತು. ಸಿದ್ದರಾಮೇಶ್ವರ ಸ್ವಾಮೀಜಿ, ಹೊಳಲ್ಕೆರೆ ಶಾಸಕ M.ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಸೇರಿ ಹಲವರ ಹೆಸರು ಕೂಡಾ ಉಲ್ಲೇಖವಾಗಿದೆ. ಈ ಪ್ರಕರಣವನ್ನ ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಜೊತೆಗೆ ತನಿಖೆ ಆರಂಭಿಸಿದೆ," ಎಂದು ತಿಳಿಸಿದ್ದಾರೆ.
ಈ ಪ್ರಕರಣ ಕುರಿತು ಸ್ಪಷ್ಟನೆ ನೀಡಿರುವ ಎಸ್ಪಿ ಕೆ. ಪರಶುರಾಮ್ "ಕೊಲೆ ಬೆದರಿಕೆ ಸಂದೇಶ ನಮ್ಮ ಕಚೇರಿಗೆ ಕೆಎಸ್ಪಿ ಆ್ಯಪ್ ಮೂಲಕ ಗುರುವಾರ ಸಂಜೆ ಬಂದಿದೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ" ಎಂದಿದ್ದಾರೆ.

ಅಲ್ಲದೆ ಬೋವಿ ಸಮುದಾಯದ ಸ್ವಾಮೀಜಿ, ಶಾಸಕರು ಹಾಗೂ ಮುಖಂಡರ ಹೆಸರನ್ನ ಉಲ್ಲೇಖ ಮಾಡಿದ್ದು, ಹತ್ಯೆಗೆ ಸಂಚು ರೂಪಿಸಿದ್ದಾರೆಂದು ಬರೆಯಲಾಗಿದೆ. ಇನ್ನು ಕೊಲೆಗೆ ಸಂಚು ರೂಪಿಸಿದ ನಾಲ್ಕು ಮಂದಿ ಹೆಸರನ್ನು ಕೂಡಾ ಉಲ್ಲೇಖಿಸಿದ್ದು, ಈ ಕುರಿತು ತನಿಖೆ ಆರಂಭಿಸಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ಈ ಬೆನ್ನಲ್ಲೇ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಕೂಡಾ ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿಗೆ ರಕ್ಷಣೆ ಕೋರಿ ಮನವಿ ಪತ್ರ ರವಾನಿಸಿದ್ದಾರೆ. ಮಠದ ಆಸ್ತಿಗಳಿಗೆ ಕೆಲ ದುಷ್ಕರ್ಮಿಗಳಿಂದ ಅಪಾಯವಿದೆ, ಜುಲೈ 18ರಂದು ಬೋವಿ ಜನೋತ್ಸವ ನಡೆಯಲಿದೆ. ಆಗಸ್ಟ್ 1ರಂದು ಸಿದ್ದರಾಮೇಶ್ವರ ರಥೋತ್ಸವ ನಡೆಯಲಿದೆ. ಈ ವೇಳೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ನೀಡಬೇಕೆಂದು ಎಂದು ಮನವಿ ಸಲ್ಲಿಸಿದ್ದಾರೆ.












Click it and Unblock the Notifications