ಮುರುಘಾ ಶರಣರ ವಿರುದ್ಧ ನ್ಯಾಯಯುತ ತನಿಖೆ ನಡೆಸಲಾಗುವುದು: ಶಾಸಕ ತಿಪ್ಪಾರೆಡ್ಡಿ
ಚಿತ್ರದುರ್ಗ, ಆಗಸ್ಟ್ 30: ಮುರುಘಾ ಮಠದ ಸ್ವಾಮೀಜಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ. ಮಂಗಳವಾರ ಮಠಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ ಎಚ್ ತಿಪ್ಪಾರೆಡ್ಡಿ ಪ್ರತಿಕ್ರಿಯಿಸಿದ್ದು, ತನಿಖೆಯಲ್ಲಿ ಪೊಲೀಸರಿಗೆ ಯಾರಿಂದಲೂ ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತನಾಡಿದ್ದೇನೆ, ಅವರು ತಮ್ಮ ಜೊತೆಗಿದ್ದವರೇ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದಿದ್ದಾರೆ. ತಾವೂ ಯಾವುದೇ ತಪ್ಪು ಮಾಡಿಲ್ಲ, ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇನೆ ಎಂದಿದ್ದಾರೆ, ಅವರಿಗೆ ಈ ಆರೋಪದಿಂದ ತುಂಬಾ ನೊಂದಿರುವುದಾಗಿ ನನ್ನೊಂದಿಗೆ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮದೊಂದಿದೆಗೆ ತಿಪ್ಪಾರೆಡ್ಡಿ ತಿಳಿಸಿದ್ದಾರೆ.
ಮುಂದುವರಿಸಿ ತಾವೂ ಸಂತ್ರಸ್ತ ಮಕ್ಕಳನ್ನೂ ಭೇಟಿ ಮಾಡುವುದಕ್ಕೆ ಸಿದ್ಧನಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತಿನವರೆಗೂ ನಾನೂ ಯಾವುದೇ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿಲ್ಲ. ಈ ಪ್ರಕರಣದಲ್ಲಿ ಯಾರೂ ಮಧ್ಯಪ್ರವೇಶಿಸುವುದಿಲ್ಲ ಮತ್ತು ನ್ಯಾಯಯುತ ತನಿಖೆ ನಡೆಸಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ ಎಂದು ಮುರುಘಾ ಮಠ ಬೇಟಿಯ ನಂತರ ತಿಪ್ಪಾರೆಡ್ಡಿ ತಿಳಿಸಿದರು.

ಮಠದ ಸುತ್ತಾ ಬಿಗಿ ಪೊಲೀಸ್ ಬಂದೋಬಸ್ತ್:
ಇನ್ನು ಸಂತ್ರಸ್ತರನ್ನು ಮಂಗಳವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗಿದೆ. ಇಬ್ಬರು ಸಂತ್ರಸ್ತ ಬಾಲಕಿಯರು ಚಿತ್ರದುರ್ಗದ 2ನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾದೀಶರ ಮುಂದೆ ಹೇಳಿಕೆ ದಾಖಲು ನೀಡಲಿದ್ದಾರೆ. ಸೆಕ್ಷನ್ 164 ಅನ್ವಯ ಸಂತ್ರಸ್ತ ಬಾಲಕಿಯರು ನ್ಯಾಯಾದೀಶರ ಮುಂದೆ ಹೇಳಿಕೆ ದಾಖಲು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಸೆಕ್ಷನ್ನ ಅಡಿ ಹೇಳಿಕೆ ನೀಡಿದರೆ ಅದನ್ನು ಮಾರ್ಪಡಿಸುವುದಕ್ಕೆ ಮತ್ತು ಬದಲಿಸುವುದಕ್ಕೆ ಅವಕಾಶ ಕಷ್ಟವಾಗಲಿದೆ.
ಸಂತ್ರಸ್ತ ಬಾಲಕಿಯರ ಹೇಳಿಕೆಯ ನಂತರ ಮುರುಘಾ ಶರಣರನ್ನು ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸುವ ಸಾಧ್ಯತೆಯಿದೆ. ಈಗಾಗಲೆ ಮಠದ ಸುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ಪ್ರಕರಣದಲ್ಲಿ ಪರ ವಿರೋಧ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆ ಸಂತ್ರಸ್ತ ಬಾಲಕಿಯರಿರುವ ಬಾಲಮಂದಿರಕ್ಕೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಮುರುಘಾ ಪರಂಪರ ಜೊತೆ ಇರುತ್ತೇವೆ
ಶಿವಮೂರ್ತಿ ಶರಣರ ವಿರುದ್ಧ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ , ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ನಡೆಯುತ್ತಿರುವುದರಿಂದ ಅದರ ಬಗ್ಗೆ ಮಾತನಾಡುವುದು ಕಷ್ಟ. ಆದರೆ ನಾವು ಶಿವಮೂರ್ತಿ ಮುರುಘಾ ಶರಣರ ಶಿಷ್ಯರು, ಮುರುಘಾ ಮಠಕ್ಕೆ ದೊಡ್ಡ ಪರಂಪರೆ ಇದೆ, ಕರ್ನಾಟದಕ ಪರಂಪರೆಯಲ್ಲಿ ಮುರುಘಾ ಮಠ ಪ್ರಧಾನ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಮಠ ಹಾಗೂ ಮಠದ ಪರಂಪರೆಯೊಂದಿಗೆ ನಾವು ಬದ್ಧವಾಗಿ ನಿಲ್ಲುತ್ತೇವೆ. ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲಾಗದು ಎಂದಿದ್ದಾರೆ.












Click it and Unblock the Notifications