ಶಾಸಕ ಗೂಳಿಹಟ್ಟಿ ಶೇಖರ್ ಲೆಟರ್ ಹೆಡ್ ದುರ್ಬಳಕೆ: ದೂರು
ಚಿತ್ರದುರ್ಗ, ಮಾರ್ಚ್ 06: ವ್ಯಕ್ತಿಯೊಬ್ಬ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಅವರ ಹೆಸರಿನ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು ಅರಣ್ಯ ಸಚಿವರಿಗೆ ಹುದ್ದೆಯೊಂದಕ್ಕೆ ಶಿಫಾರಸ್ಸು ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಶಾಸಕರ ಲೆಟರ್ ಹೆಡ್ ನಲ್ಲಿ ಸುರೇಶ್ ಎಂಬುವವರನ್ನು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡುವಂತೆ ಶಿಫಾರಸ್ಸು ಮಾಡಲಾಗಿದ್ದು, ಈ ಕಡತ ಅರಣ್ಯ ಇಲಾಖೆಯ ಅಪರ ಆಯುಕ್ತರ ಬಳಿ ಇದೆ.
ಅದಕ್ಕೆ ಅನುಮೋದಿಸುವಂತೆ ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಶಿಫಾರಸ್ಸು ಮಾಡಲಾಗಿತ್ತು. ಈ ಕುರಿತು ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕನಿಗೂ ಕರೆ ಮಾಡಿ ಕಡತ ವಿಲೇವಾರಿ ಮಾಡುವಂತೆಯೂ ಕೋರಲಾಗಿತ್ತು.

ಆದರೆ, ಶಿಫಾರಸ್ಸು ಪತ್ರ ಪರಿಶೀಲನೆ ಸಂದರ್ಭದಲ್ಲಿ ಲೆಟರ್ ಹೆಡ್ ಹಾಗೂ ಅದರಲ್ಲಿನ ನನ್ನ ಸಹಿ ನಕಲು ಎಂದು ಕಂಡುಬಂದಿದೆ ಎಂದು ಶಾಸಕರು ಆರೋಪಿಸಿದ್ದಾರೆ. ಅಲ್ಲದೇ, ಕಡತದಲ್ಲಿ ಸಚಿವರಾದ ಸಿ.ಸಿ. ಪಾಟೀಲ್, ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಹೆಸರಿನ ಶಿಫಾರಸ್ಸಿನ ಪತ್ರಗಳು ಕೂಡ ಇವೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗೂಳಿಹಟ್ಟಿ ಶೇಖರ್, ನನ್ನ ಹೆಸರನ್ನು ಯಾರೋ ದುಷ್ಕರ್ಮಿಗಳು ದುರುಪಯೋಗ ಮಾಡಿಕೊಂಡಿದ್ದಾರೆ. ಅವರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತು ತನಿಖೆ ನಡೆಸಬೇಕೆಂದು ತಿಳಿಸಿದ್ದಾರೆ.












Click it and Unblock the Notifications