ಕೈ ಮುಗಿಯುತ್ತೇನೆ ಮತ್ತೆ ಆ ಪ್ರಶ್ನೆ ಕೇಳ್ಬೇಡಿ: ಸಚಿವ ಸಂತೋಷ್ ಲಾಡ್ ಹೀಗೆ ಹೇಳಿದ್ದೇಕೆ?
ಚಿತ್ರದುರ್ಗ, ನವೆಂಬರ್, 03: ಮುಂದಿನ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿದ್ದಾರೆ. ಈಗಾಗಲೇ ನಾನೇ 5 ವರ್ಷ ಸಿಎಂ ಆಗಿರುತ್ತೇನೆ ಎನ್ನುವ ಮೂಲಕ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಚಿತ್ರದುರ್ಗದಲ್ಲಿ ಹೇಳಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐದು ವರ್ಷ ನಾನೇ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
ನಾಲ್ಕೈದು ತಿಂಗಳಿಂದ ಇದು ಚರ್ಚೆ ಆಗುತ್ತಿವೆ. ಮಾಧ್ಯಮದವರಿಗೆ ನಾವು ಕೈ ಮುಗಿದು ಕೇಳುತ್ತೇನೆ, ಪ್ರತಿ ಬಾರಿ ಇದನ್ನೇ ಕೇಳಿದರೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಹೈಕಮಾಂಡ್ ಇದೆ, ಶಾಸಕರು ನಿರ್ಧಾರ ಮಾಡುತ್ತಾರೆ. ಸಿಎಂ ಹೇಳಿರುವುದನ್ನಯ ಸಿಎಂಗೆ ಕೇಳಿ ಎಂದು ಮಾಧ್ಯಮಗಳ ಪ್ರತಿನಿಧಿಗಳಿಗೆ ಹೇಳಿದರು.

ಇಂತಹ ವಿಷಯಗಳು ಹೈಕಮಾಂಡ್ ವಲಯದಲ್ಲಿ ಚರ್ಚೆ ಆಗುತ್ತವೆ. ನಾವು ಏನಾದರೂ ಹೇಳಿದ್ರೆ ಬೇರೆಯವರಿಗೆ ಕೇಳ್ತೀರಾ, ಸಿಎಂ ಹೇಳಿದ್ದಾರೆ, ಅದೇ ಅಂತಿಮವಾಗಿದೆ. ಏನಾದರೂ ಮಧ್ಯೆ ಬದಲಾವಣೆ ಇದ್ದರೆ ಹೈಕಮಾಂಡ್, ಶಾಸಕರು ತೀರ್ಮಾನ ಮಾಡುತ್ತಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಗೊಂದಲ ಏನು ಇಲ್ಲ, ಸಿಎಂ ಫೈನಲ್ ಆಗಿ ಹೇಳಿದ್ದಾರೆ ಎಂದರು.
ಸಿಎಂ ಕುರ್ಚಿಗೆ ಟವೆಲ್ ಹಾಕುವವರ ಸಂಖ್ಯೆ ಹೆಚ್ಚಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಟವೆಲ್ ಬಗ್ಗೆ ನಾನು ಏನು ಮಾತಾಡಲ್ಲ. ಅದರ ಬಗ್ಗೆ ನನಗೆ ಏನು ಮಾಹಿತಿಯೂ ಇಲ್ಲ ಎಂದರು. ಇನ್ನು ಆಪರೇಶನ್ ಕಮಲ ವಿಚಾರಕ್ಕೆ ಉತ್ತರಿಸಿದ ಸಚಿವರು, ಬಿಜೆಪಿಯವರದ್ದು ಇದನ್ನು ಬಿಟ್ಟರೆ ಬೇರೇನೂ ಇಲ್ಲ, ಇದನ್ನು ಬಿಜೆಪಿಯವರು ಹವ್ಯಾಸ ಮಾಡಿಕೊಂಡಿದ್ದಾರೆ ಎಂದರು.
ಬಿಜೆಪಿ ಅವರನ್ನು ಬಿಟ್ಟು ಬೇರೆಯವರು ಅಧಿಕಾರಕ್ಕೆ ಬಂದರೆ, ಅದನ್ನ ಹೆಂಗೆ ಬೀಳಿಸಬೇಕು ಅನ್ನೋದನ್ನ ಹವ್ಯಾಸ ಮಾಡಿಕೊಂಡಿದ್ದಾರೆ. ಇ.ಡಿ, ಲೋಕಾಯುಕ್ತ, ಸಿಬಿಐ ಉಪಯೋಗಿಸಿಕೊಂಡು ಸರ್ಕಾರ ಕೆಡವೋದು, ಸುಮ್ಮನೆ ಆರೋಪ ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅವಕಾಶ ಸಿಕ್ಕರೆ ಮತ್ತೆ ಮೊಳಕಾಲ್ಮೂರಿನಿಂದ ಸ್ಪರ್ಧಿಸುವೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅವಕಾಶ ಸಿಕ್ಕರೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹನುಮಂತನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಸಚಿವನಾಗಿದ್ದಾಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೆಲಸಗಳಾಗಿವೆ. ಅನ್ಯ ಕಾರಣಗಳಿಂದ ಮೊಳಕಾಲ್ಮೂರು ಕ್ಷೇತ್ರ ಬಿಟ್ಟು ಪಕ್ಕದ ಜಿಲ್ಲೆಯ ಬಳ್ಳಾರಿಯಿಂದ ಸ್ಪರ್ಧಿಸಬೇಕಾದ ಅನಿವಾರ್ಯತೆ ಬಂದಿತ್ತು. ಆದ್ದರಿಂದ ಬಳ್ಳಾರಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದೆ. ಆದರೆ ಮತದಾರರು ನನ್ನನ್ನು ತಿರಸ್ಕರಿಸಿದರು. ಆದರೆ ನಾನು ಆ ಸೋಲಿನಿಂದ ಧೃತಿಗೆಡದೆ ಸಕ್ರಿಯವಾಗಿದ್ದೇನೆ ಎಂದರು.
ನಾನು ಕ್ಷೇತ್ರ ಬಿಟ್ಟು ಮತ್ತೊಂದು ಕ್ಷೇತ್ರಕ್ಕೆ ಹೋದರೂ ಹಳೆಯ ಕ್ಷೇತ್ರದ ಜನರು ನನ್ನುನ್ನು ಮರೆತಿಲ್ಲ. ನನ್ನ ಮೇಲೆ ಇಲ್ಲಿನ ಜನರಿಗೆ ಪ್ರೀತಿ, ವಿಶ್ವಾಸ ನಂಬಿಕೆ ಒಂದಿಷ್ಟು ಕಡಿಮೆಯಾಗಿಲ್ಲ. ಕ್ಷೇತ್ರದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ನನಗೆ ಆಹ್ವಾನಿಸುತ್ತಾರೆ. ಜೊತೆಗೆ ನನ್ನ ನಿವಾಸಕ್ಕೆ ಇಲ್ಲಿನ ಜನರು ಆಗಾಗ ಭೇಟಿ ನೀಡುತ್ತಾರೆ ಎಂದರು.
ರಾಜಕೀಯ ಕ್ಷೇತ್ರಕ್ಕೆ ಮರುಜೀವ ನೀಡಿದ ಜನತೆ ಹಾಗೂ ಕ್ಷೇತ್ರವನ್ನು ಜೀವನದಲ್ಲಿ ಮರೆಯಲು ಎಂದಿಗೂ ಸಾಧ್ಯವಿಲ್ಲ. ಇಲ್ಲಿನ ಜನತೆಯ ಋಣ ತೀರಿಸಲು ಮತ್ತೊಮ್ಮೆ ಇಲ್ಲಿಂದಲೇ ಸ್ಪರ್ಧಿಸಿ, ಮತ್ತೊಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಮೊಳಕಾಲ್ಮೂರು ಕ್ಷೇತ್ರದ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶ್ರೀರಾಮುಲು ಭರವಸೆ ನೀಡಿದರು.












Click it and Unblock the Notifications