ಚಿತ್ರದುರ್ಗ ಜಿಲ್ಲಾ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಅವ್ಯವಸ್ಥೆಯದ್ದೇ ಪ್ರಮುಖ ಪಾತ್ರ!
ಅವ್ಯವಸ್ಥೆಯ ಆಗರವಾಗಿದ್ದ ಕಾರ್ಯಕ್ರಮ; ಸ್ಪರ್ಧಾಳುಗಳಿಗೆ ಕುಡಿಯಲು ನೀರೂ ಇರಲಿಲ್ಲ; ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು
ಚಿತ್ರದುರ್ಗ, ಫೆಬ್ರವರಿ 9: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕಾಲೇಜು ನಾಟಕ, ಜಾನಪದ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳು ಅವ್ಯವಸ್ಥೆಯ ಆಗರವಾಗಿದ್ದಲ್ಲದೆ, ದೂರದೂರುಗಳಿಂದ ಬಂದಿದ್ದ ಅನೇಕ ಸ್ಪರ್ಧಾಳುಗಳ ಆಕ್ರೋಶಕ್ಕೂ ಕಾರಣವಾಯಿತು.
ಪ್ರತಿ ವರ್ಷವೂ ನಡೆಯುವ ಈ ಸ್ಪರ್ಧೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಉತ್ತಮ ಕಲಾವಿದರನ್ನು ಆಯ್ಕೆ ಮಾಡಿ ಅವರನ್ನು ರಾಜ್ಯಮಟ್ಟಕ್ಕೆ ಕಳುಹಿಸುವ ಸಂಪ್ರದಾಯವಿದೆ. ಹಾಗಾಗಿ, ಮಂಗಳವಾರ ಹಾಗೂ ಬುಧವಾರ ಚಿತ್ರದುರ್ಗದಲ್ಲಿ ನಾಟಕ, ಜಾನಪದ ಹಾಗೂ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ, ಜಿಲ್ಲೆಯ ಕೆಲವಾರು ತಾಲೂಕುಗಳಿಂದ ನಾಟಕ ತಂಡಗಳು ಸೇರಿದಂತೆ ಹಲವಾರು ಜಾನಪದ, ನೃತ್ಯಗಳಲ್ಲಿ ಪ್ರಾವೀಣ್ಯತೆ ಪಡೆದ ಕಾಲೇಜು ವಿದ್ಯಾರ್ಥಿಗಳು ಆಗಮಿಸಿದ್ದರು.

ಆದರೆ, ಸ್ಪರ್ಧೆಯ ಆಯೋಜಿಸಲಾಗಿದ್ದ ನಗರದ ತ.ರಾ.ಸು ರಂಗಮಂದಿರಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿರಲಾಗಿರಲಿಲ್ಲ. ಕನಿಷ್ಠ ಪಕ್ಷ, ಸ್ಪರ್ಧಾಳುಗಳಿಗೆ ಕುಡಿಯಲು ನೀರನ್ನೂ ಇಡಲಾಗಿರಲಿಲ್ಲ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಾರ್ಯಕ್ರಮದ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.
ಇದಲ್ಲದೆ, ಆಕಾಶವಾಣಿ ಕಲಾವಿದರಿಗೇ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯೇ ಇಲ್ಲದಂತಾಗಿತ್ತು ಎಂಬುದು ಬಹುತೇಕ ವಿದ್ಯಾರ್ಥಿಗಳ ಅಳಲಾಗಿತ್ತು.
ಒಟ್ಟಾರೆಯಾಗಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕಾಟಾಚಾರಕ್ಕೆ ಸ್ಪರ್ಧೆ ನಡೆಸಿದ ಹಾಗಿತ್ತು.












Click it and Unblock the Notifications