Lok Sabha Election 2024: ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಮಗ್ರ ಪರಿಚಯ
ಚಿತ್ರದುರ್ಗ, ಮಾರ್ಚ್ 18: ಲೋಕಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಎರಡು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚಿತ್ರದುರ್ಗ ಸೇರಿದಂತೆ ಉಳಿದ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿ ಸಿಗದೇ ಪಕ್ಷಗಳು ಅಭ್ಯರ್ಥಿ ಅಂತಿಮ ಮಾಡಿಲ್ಲ.
ಮಧ್ಯ ಕರ್ನಾಟಕ ಬಯಲು ಸೀಮೆ ಎಂದೇ ಹೇಳಬಹುದಾಗಿರುವ ಚಿತ್ರದುರ್ಗ ಜಿಲ್ಲೆಯ ಲೋಕಸಭಾ ಕ್ಷೇತ್ರ 2009ರಿಂದ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದೆ. ಕೋಟಿ ನೋಡು ಚಿತ್ರದುರ್ಗ ಜಿಲ್ಲೆ ರಾಜಕೀಯದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಹರಿಯುವ ವೇದಾವಧಿ ನದಿ ತಡದಲ್ಲಿ ಚಾಚಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಇತಿಹಾಸದ ಮಹತ್ವ ಪಡೆದುಕೊಂಡಿದೆ. ಪ್ರಮುಖವಾಗಿ ರಾಮಾಯಣ ಮತ್ತು ಮಹಾಭಾರತದ ಪೌರಾಣಿಕ ಹಿನ್ನೆಲೆ ಕೂಡ ಜಿಲ್ಲೆಗಿದೆ ಎಂದು ಹೇಳಬಹುದು.

ಚಾಲುಕ್ಯರು ಹೊಯ್ಸಳರು ರಾಷ್ಟ್ರಕೂಟರು ಹಾಗೂ ಚಿತ್ರದುರ್ಗದ ಪಾಳೆಗಾರರು ದುರ್ಗವನ್ನು 10ನೇ ಶತಮಾನದಿಂದ 18ನೇ ಶತಮಾನದವರೆಗೆ ಆಡಳಿತ ನೆಡೆಸಿದ್ದರು. ಚಿತ್ರದುರ್ಗ ಏಳು ಸುತ್ತಿನ ಕೋಟೆಯಿಂದ ಆವರಿಸಲ್ಪಟ್ಟಿದೆ. ಚಿತ್ರದುರ್ಗ ಕೋಟೆ ಮತ್ತು ವಾಣಿಕೆ ಕೋಪನಾ ಸಾಹಸ ಚಿತ್ರಣ ಇಡೀ ರಾಜ್ಯದಲ್ಲಿ ಜನನಿತವಾಗಿದೆ. ಸಿನಿಮಾ ಕ್ಷೇತ್ರಕ್ಕೆ ಕಥೆ, ಕಾದಂಬರಿಗಳಲ್ಲಿ ಕೋಟೆ ಮತ್ತು ಅರಸರ ಆಡಳಿತ ಕಥ ವಸ್ತುಗಳಾಗಿ ಕಾಣಬಹುದು. ಹೆಸರಾಂತ ಸಾಹಿತಿ ತ.ರಾ. ಸುಬ್ಬರಾವ್ ಅವರ ಕಾದಂಬರಿಗಳು ಚಿತ್ರದುರ್ಗದ ಇತಿಹಾಸದಲ್ಲಿ ಮೂಡಿ ಬಂದಿರುವುದು ಗೊತ್ತಿರುವ ವಿಷಯ.
ಒಂದು ಕಾಲದಲ್ಲಿ ದಾವಣಗೆರೆ ಕೂಡ ಚಿತ್ರದುರ್ಗ ಜಿಲ್ಲೆಯ ಭಾಗವಾಗಿತ್ತು. ನೆರೆಯ ತುಮಕೂರು ಜಿಲ್ಲೆಯ ಒಂದು ಭಾಗವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಶಿರಾ ಮತ್ತು ಪಾವಗಡ ತಾಲೂಕಿನ ಮತದಾರರು ಚಿತ್ರದುರ್ಗ ಲೋಕಸಭಾ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಾರೆ.
ಚಿತ್ರದುರ್ಗ ಜಿಲ್ಲೆಯ ಜನಸಂಖ್ಯೆ ವಿವರ
ಮಿಸಲು ಕ್ಷೇತ್ರವಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 16,60,378 ಜನಸಂಖ್ಯೆಯನ್ನು ಹೊಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಲೋಕಸಭಾ ಚುನಾವಣೆಗೆ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಆಗಾಗಿ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿರುವುದು ಗಮನಿಸಬಹುದು.

ಲೋಕಸಭಾ ಕ್ಷೇತ್ರದಲ್ಲಿ ಚಿತ್ರದುರ್ಗ (ಸಾಮಾನ್ಯ), ಹಿರಿಯೂರು(ಸಾಮಾನ್ಯ), ಚಳ್ಳಕೆರೆ ( ಪರಿಶಿಷ್ಟ ಪಂಗಡ), ಮೊಳಕಾಲ್ಮೂರು ( ಪರಿಶಿಷ್ಟ ಪಂಗಡ), ಹೊಸದುರ್ಗ( ಸಾಮಾನ್ಯ) ಹೊಳಲ್ಕೆರೆ (ಪರಿಶಿಷ್ಟ ಜಾತಿ) ಜೊತೆಗೆ ತುಮಕೂರಿನ ಶಿರಾ ( ಸಾಮಾನ್ಯ )ಮಾತು ಪಾವಗಡ (ಪರಿಶಿಷ್ಟ ಜಾತಿ) ಕ್ಷೇತ್ರಗಳು ಒಳಪಡುತ್ತವೆ.
ಚಿತ್ರದುರ್ಗದಲ್ಲಿರುವ ಮತದಾರರ ಸಂಖ್ಯೆ ಎಷ್ಟು..?
2023ರ ಅಕ್ಟೋಬರ್27 ರಂದು ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿ ಬಹಿರಂಗ ಪಡಿಸಲಾಗಿತ್ತು. ನವೆಂಬರ್ ಹಾಗೂ ಡಿಸೆಂಬರ್ ಮಾಹೆಯಲ್ಲಿ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿದೆ.
ಜಿಲ್ಲೆಯಲ್ಲಿ ಒಟ್ಟು 1,661 ಮತಗಟ್ಟೆಗಳಿದ್ದು, ಕರಡು ಮತದಾರರ ಪಟ್ಟಿಯಲ್ಲಿ 14,01,830 ಮತದಾರರು ಇದ್ದಾರೆ. ಮತದಾರರ ಅಂತಿಮ ಪಟ್ಟಿ ಪ್ರಕಟ ಅನ್ವಯ 7,04,896 ಪುರುಷ ಮತದಾರರು, 7,13,228 ಮಹಿಳಾ ಮತದಾರರು ಹಾಗೂ 87 ಇತರೆ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14,18,211 ಮತದಾರರು ಇದ್ದಾರೆ

ವಿಧಾನಸಭಾ ಕ್ಷೇತ್ರವಾರು ವಿವರ
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 125058 ಪುರುಷರು, 124181 ಮಹಿಳೆಯರು ಹಾಗೂ 13 ಇತರೆ ಸೇರಿದಂತೆ ಒಟ್ಟು 249252 ಮತದಾರರರಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 110448 ಪುರುಷರು, 112106 ಮಹಿಳೆಯರು ಹಾಗೂ 6 ಇತರೆ ಸೇರಿದಂತೆ ಒಟ್ಟು 222560 ಮತದಾರರಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 129809 ಪುರುಷರು, 134398 ಮಹಿಳೆಯರು ಹಾಗೂ 41 ಇತರೆ ಸೇರಿ ಒಟ್ಟು 264248 ಮತದಾರರಿದ್ದಾರೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ 121502 ಪುರುಷರು, 124210 ಮಹಿಳೆಯರು ಹಾಗೂ 16 ಇತರೆ ಮತದಾರರು ಸೇರಿದಂತೆ ಒಟ್ಟು 245728 ಮತದಾರರಿದ್ದಾರೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 99860 ಪುರುಷರು, 99596 ಹಾಗೂ 1 ಇತರೆ ಮತದಾರರು ಸೇರಿದಂತೆ ಒಟ್ಟು 199457 ಮತದಾರರಿದ್ದಾರೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 118219 ಪುರುಷರು, 118737 ಮಹಿಳೆಯರು ಹಾಗೂ 10 ಇತರೆ ಸೇರಿದಂತೆ ಒಟ್ಟು 236966 ಮತದಾರರಿದ್ದಾರೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1418211 ಮತದಾರರಿದ್ದಾರೆ.
2023ರ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 11260 ಪುರುಷರು ಹಾಗೂ 14761 ಮಹಿಳೆಯರು ಹಾಗೂ 8 ಮಂದಿ ಇತರರು ಸೇರಿದಂತೆ ಒಟ್ಟು 26029 ಮತದಾರರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಮರಣ ಹೊಂದಿದ 9648 ಮತದಾರರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
35,683 ಯುವ ಮತದಾರರು
ಮತದಾರರ ಅಂತಿಮ ಪಟ್ಟಿಯಲ್ಲಿ 18-19 ವರ್ಷ ವಯೋಮಿತಿಯ ಯುವ ಮತದಾರರು ಜಿಲ್ಲೆಯಲ್ಲಿ 35,683 ಮಂದಿ ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 23659 ಮತದಾರರು ಇದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ರಾಜಕೀಯ ಇತಿಹಾಸ
ಒಂದು ಕಾಲದಲ್ಲಿ ಕೋಟೆನಾಡು ಕಾಂಗ್ರೆಸ್ನ ಭದ್ರ ಕೋಟೆಯಾಗಿದ್ದ ಜಿಲ್ಲೆ ಮೂರು ಬಾರಿ ಕ್ಷೇತ್ರವನ್ನು ಕಳೆದುಕೊಂಡರೂ, ಈಗ ಕೈ ಬಿಗಿ ಹಿಡಿತದಿಂದ ತಪ್ಪಿದೆ. ಆದರೆ, ಈ ಇಲ್ಲಿ ಪೈಪೋಟಿ ತೀವ್ರವಾಗಿದೆ. 11 ಚುನಾವಣೆಗಳಲ್ಲಿ ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಿಂದ ಸಂಸತ್ಗೆ ಆಯ್ಕೆಯಾಗಿದ್ದಾರೆ.
ಜನತಾದಳದ ಅಭ್ಯರ್ಥಿಗಳು ಎರಡು ಬಾರಿ ಜಯಗಳಿಸಿದ್ದರೆ, 2009ರಲ್ಲಿ ಮೊದಲ ಬಾರಿಗೆ ಬಿಜೆಪಿ ಕೂಡ ಇಲ್ಲಿ ಗೆಲುವಿನ ನಗೆ ಬೀರಿತ್ತು. ಜನಾರ್ದನ ಸ್ವಾಮಿ ಕಾಂಗ್ರೆಸ್ ಪಾರುಪತ್ಯಕ್ಕೆ ಅಂಕುಶ ಹಾಕಿದ್ದರು. ಆದರೆ, ಕಾಂಗ್ರೆಸ್ನ ಎನ್. ಚಂದ್ರಪ್ಪ 2014ರ ಚುನಾವಣೆಯಲ್ಲಿ ಮತ್ತೆ ಅದನ್ನು 'ಕೈ' ತೆಕ್ಕೆಗೆ ಕ್ಷೇತ್ರವನ್ನು ಮರಳಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ನಂತರ 2019ರಲ್ಲಿ ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ವಿರುದ್ಧ ಚಂದ್ರಪ್ಪ ಸೋಲು ಕಂಡು, ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ಬಿಟ್ಟು ಕೊಟ್ಟರು. ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ನಡೆದ ಮೊಟ್ಟ ಮೊದಲ ಲೋಕಸಭೆ ಚುನಾವಣೆಯಲ್ಲಿ (1951) ಸಂಸತ್ಗೆ ಆಯ್ಕೆಯಾಗಿದ್ದರು.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದು, ಓರ್ವ ಬಿಜೆಪಿ ಶಾಸಕರಿದ್ದಾರೆ. ಉಳಿದ ಶಿರಾ ಹಾಗೂ ಪಾವಗಡ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಿರಿಯೂರಿನ ಶಾಸಕ ಡಿ. ಸುಧಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಡಳಿತ ನಡೆಸುತ್ತಿದ್ದಾರೆ. ಸದ್ಯ ಬಿಜೆಪಿಯ ಎ.ನಾರಾಯಣಸ್ವಾಮಿ ಕ್ಷೇತ್ರದ ಸಂಸದರಾಗಿದ್ದು, ಈ ಬಾರಿಯೂ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.
ಜಿಲ್ಲೆಯಲ್ಲಿ ಬುಡಕಟ್ಟು ಕಾಡುಗೊಲ್ಲರು ಮತ್ತು ಬೇಡರು ಬಹುಕಾಲದಿಂದಲೂ ಇಲ್ಲಿ ನೆಲೆಸಿದ್ದಾರೆ. ಲಿಂಗಾಯತ, ಒಕ್ಕಲಿಗ, ಕುರುಬ, ಎಸ್ಸಿ ಹಾಗೂ ಮುಂತಾದ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬಿಸಿಲ ನಾಡಿನ ವಿಶೇಷತೆಗಳೇನು..?
ಏಳು ಸುತ್ತಿನ ಕೋಟೆ, ಚಂದ್ರವಳ್ಳಿ ಗುಹೆ, ಮುರುಘಾಮಠ, ಜೋಗಿಮಟ್ಟಿ, ಹಿರಿಯೂರಿನ ವಾಣಿ ವಿಲಾಸಸಾಗರ, ನಾಯಕನಹಟ್ಟಿಯಂತಹ ಪ್ರವಾಸಿ ತಾಣಗಳು ಚಿತ್ರದುರ್ಗ ಎಂಬ ಬಿಸಿಲ ನಾಡಿನಲ್ಲಿಯೂ ಉಲ್ಲಾಸ ನೀಡುತ್ತವೆ. ಜಿಲ್ಲೆಯ ಪ್ರಮುಖ ದೇವಾಲಯಗಳಾದ ಹಿರಿಯೂರಿನ ಶ್ರೀ ತೇರು ಮಲ್ಲೇಶ್ವರ, ವದ್ದಿಕೆರೆ ಕಾಲ ಭೈರವೇಶ್ವರ ಯಾನೆ ಸಿದ್ದೇಶ್ವರ ಹಾಗೂ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ.
ಪ್ರವಾಸೋದ್ಯಮ ಇಲ್ಲಿನ ಜನರ ಕೈಹಿಡಿದಿದೆ. ಅದರ ಹೊರತಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅನೇಕ ಕೊರತೆಗಳಿಂದ ಕ್ಷೇತ್ರ ಮುಕ್ತವಾಗಿಲ್ಲ. ಕೃಷಿ ಆಧಾರಿತ ಬದುಕನ್ನೇ ಹೆಚ್ಚಾಗಿ ಅವಲಂಬಿಸಿರುವ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆಯನ್ನು ಇನ್ನೂ ನೀಗಿಸಲು ಸಾಧ್ಯವಾಗಿಲ್ಲ. ಜಿಲ್ಲೆಯ ಜನತೆಯ ಬಹು ನಿರೀಕ್ಷಿತ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ತುಮಕೂರು -ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ಬಗ್ಗೆ ಈಗಲೂ ಹೋರಾಟಗಳು ನಡೆಯುತ್ತಿವೆ.












Click it and Unblock the Notifications