ಹನ್ನೆರಡನೇ ಶತಮಾನದಲ್ಲೇ ಲಿಂಗಾಯತ ಸ್ವತಂತ್ರ ಧರ್ಮವಾಗಿದೆ: ಸ್ವಾಮೀಜಿ
ಜಗಳೂರು (ದಾವಣಗೆರೆ ಜಿಲ್ಲೆ), ಜನವರಿ 29: ಲಿಂಗಾಯತ ಸ್ವತಂತ್ರ ಧರ್ಮ. ನಾವು ಲಿಂಗಾಯತರು. ವೀರಶೈವ ಹಾಗೂ ಲಿಂಗಾಯತ ಎರಡೂ ಬೇರೆ ಬೇರೆ ಎಂದು ಸೋಮವಾರ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮೌನ ಮುರಿದ ಸ್ವಾಮೀಜಿ, ಧರ್ಮದ ಬಗ್ಗೆ ಸಾಕಷ್ಟು ಸಂಘರ್ಷ ನಡೆಯುತ್ತಿದೆ. ನಾವೇನು ಲಿಂಗವಂತರೋ, ವೀರಶೈವರೋ...ಇಲ್ಲ ಹಿಂದೂಗಳೋ ಎಂದು ಪ್ರಶ್ನೆ ಮಾಡುತ್ತಿದ್ದರು. ಸಿರಿಗೆರೆ ಮಠ ಮೌನವಾಗಿದೆಯಲ್ಲ, ಏನು ಉತ್ತರ ಹೇಳುತ್ತಿಲ್ಲ ಎಂಬ ಚರ್ಚೆ ಹರಿದಾಡುತ್ತಿತ್ತು ಎಂದರು.
ಮೊನ್ನೆ ನಡೆದ ಸಂಘದ ಸಭೆಯಲ್ಲಿ ಇದೇ ಪ್ರಶ್ನೆ ಮಾಡಿದ್ದರು. ಆಗ ಗುರುಗಳು ಹೇಳಿದರು: ಪತ್ರಿಕೆಯಲ್ಲಿ ಬರುವ ನನ್ನ ಅಂಕಣ ಓದುತ್ತಿದ್ದೀರಾ? ಅಂಕಣ ಓದಿದರೆ ಗೊತ್ತಾಗುತ್ತದೆ. ಸ್ಪಷ್ಟವಾಗಿ ಲೇಖನದಲ್ಲಿ ಉಲ್ಲೇಖ ಮಾಡಿದ್ದೇವೆ. ನಾವು ಹಿಂದೂಗಳು ಅಲ್ಲ, ವೀರಶೈವರು ಅಲ್ಲ. ನಾವು ನಿಜವಾದ ಲಿಂಗಾಯತರು ಎಂದಿದ್ದರು.

ಲಿಂಗಾಯತ ಎನ್ನುವುದು ಇವತ್ತು ಹುಟ್ಟಿದ್ದು ಅಲ್ಲ. ಹನ್ನೆರಡನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿರುವಂಥದ್ದು. ವೀರಶೈವ ಲಿಂಗಾಯತ ಅನ್ನುವಂಥದ್ದು ಅಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಲಿಂಗಾಯತ ಧರ್ಮಕ್ಕೆ ಈಗ ಹೋರಾಟ ಮಾಡುವಂಥದ್ದಲ್ಲ. ಅದು ಹನ್ನೆರಡನೇ ಶತಮಾನದಲ್ಲೇ ಹುಟ್ಟಿರುವಂಥದ್ದು ಎಂದರು.
ಅಲ್ಪಸಂಖ್ಯಾತರ ಧರ್ಮ ಎಂಬ ಮಾನ್ಯತೆ ಸಿಕ್ಕರೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳಿತೇ ಹೊರತು ಸ್ವತಂತ್ರ ಧರ್ಮಕ್ಕಲ್ಲ. ಸ್ವತಂತ್ರ ಧರ್ಮ ಎಂದು ಇವತ್ತು ಹೋರಾಟ ಮಾಡುತ್ತಿರುವುದಲ್ಲ. ಹನ್ನೆರಡನೇ ಶತಮಾನದಲ್ಲಿ ಸ್ವತಂತ್ರಗೊಂಡಿದೆ ಎಂದು ಹೇಳಿದರು.












Click it and Unblock the Notifications