ಸಚಿವ ಬಿ. ಶ್ರೀರಾಮುಲು ಕೊರಳಿಗೆ ಭೂ ಕಬಳಿಕೆ ಆರೋಪ
ಚಿತ್ರದುರ್ಗ, ಮೇ 20: "ಸಾರಿಗೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ .ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂಮಿಯನ್ನು ಕಬಳಿಸಿದ್ದಾರೆ" ಎಂದು ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಎಸ್. ತಿಪ್ಪೇಸ್ವಾಮಿ ಆರೋಪಿಸಿದರು.
ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಶ್ರೀರಾಮುಲು ಈ ಹಿಂದೆ ಬಳ್ಳಾರಿಯಲ್ಲಿ ಶಾಸಕರಾಗಿದ್ದಾಗ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಕುಲ ಲಕ್ಷ್ಮಮ್ಮರವರಿಗೆ ಸೇರಿದ ಸರ್ವೇ ನಂ.597ಬಿ ರಲ್ಲಿನ 27 ಎಕರೆ 25 ಗುಂಟೆ ಜಮೀನನಲ್ಲಿ 17.10 ಎಕರೆ ಜಮೀನನ್ನು ಜನಾರ್ದನ ರೆಡ್ಡಿ ಮಾವ ಪರಮೇಶ್ವರ ರೆಡ್ಡಿಗೆ ಕ್ರಯ ಮಾಡಿಸಿದ್ದಾರೆ" ಎಂದು ದೂರಿದರು.
"ಪರಮೇಶ್ವರ ರೆಡ್ಡಿ ಆ ಜಮೀನನ್ನು ತನ್ನ ಮಗಳಿಗೆ ದಾನ ಮಾಡಿದ್ದಾರೆ. ದಾನ ಮಾಡಿದ ದಿನವೇ ಜಿಲ್ಲೆಯ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಶ್ರೀರಾಮುಲು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದರ ಬಗ್ಗೆ ಕೃಷ್ಣಮೂರ್ತಿ ಎಂಬ ವ್ಯಕ್ತಿ ಲೋಕಾಯುಕ್ತರಿಗೆ ದೂರು ನೀಡಿದ್ದು, ಶ್ರೀರಾಮುಲು 6ನೇ ಆರೋಪಿಯಾಗಿ ಜಾಮೀನು ಪಡೆದಿದ್ದಾರೆ" ಎಂದರು.
"ಇಂತಹ ಭೂ-ಕಬಳಿಕೆ ಮಾಡಿರುವಂತಹ ಸಚಿವರನ್ನು ಇನ್ನು ಸಂಪುಟದಲ್ಲಿ ಬಸವರಾಜ ಬೊಮ್ಮಾಯಿರವರು ಇಟ್ಟುಕೊಂಡಿದ್ದಾರೆ. ಇದು ಯಾವ ನ್ಯಾಯ?. ಈಶ್ವರಪ್ಪರನ್ನು ಮಾತ್ರ ಮಂತ್ರಿ ಸ್ಥಾನದಿಂದ ತೆಗೆದು ಇವರನ್ನು ಯಾಕೆ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದೀರಿ?" ಎಂದು ಮಾಜಿ ಶಾಸಕರು ಪ್ರಶ್ನಿಸಿದರು.
"ಇಂತಹ ಭೂ-ಕಬಳಿಕೆ ಮಂತ್ರಿಯನ್ನು ಸಂಪುಟದಿಂದ ಕೈಬಿಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ದಾಖಲೆಗಳನ್ನು ತರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾನೇ ಒಂದು ಜೆರಾಕ್ಸ್ ಪ್ರತಿ ದಾಖಲೆ ಕಳಿಸುತ್ತೇನೆ" ಎಂದರು.
"ವಾಲ್ಮೀಕಿ ಸಮಾಜಕ್ಕೆ 7.5% ಮೀಸಲಾತಿ ಕೊಡಿಸುತ್ತೇನೆಂದು ನೀವು ಮತ್ತು ನಿಮ್ಮ ಮಂತ್ರಿಗಳು ಸೇರಿ ರಾಜನಹಳ್ಳಿಯಲ್ಲಿ ಸಭೆ ಮಾಡಿದಿರಿ. ಮೀಸಲಾತಿ ಕೊಡುಸುತ್ತೇವೆ ಎಂದು ಹೇಳಿ ವಾಲ್ಮೀಕಿ ಸ್ವಾಮಿಗಳನ್ನು ಬೆಂಗಳೂರಿನಲ್ಲಿ ಉಪವಾಸ ಕೂರಿಸಿದ್ದೀರಾ?" ಎಂದು ಕೇಳಿದರು.
ಸಚಿವ ಸಂಪುಟದಿಂದ ಕೈ ಬಿಡಬೇಕು; "ಒಂದು ಹೆಣ್ಣು ಮಗಳು ಅನ್ಯಾಯ ಆಗಿದೆ ನಮಗೆ ಸಹಾಯ ಮಾಡಿ ಎಂದು ಬಳ್ಳಾರಿಗೆ ಬಂದರೆ, ಆಕೆಯನ್ನು ಸೆರಗು ಹಿಡಿದು ತಳ್ಳಿದ್ದಾರೆ. ನಾವು ಈ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತವೆ. ಅದನ್ನು ಬಿಟ್ಟು ನೀವು ಅವರಿಗೆ ಬೈದು ಕಳಿಸಿದ್ದೀರಾ?" ಎಂದು ಪ್ರಶ್ನಿಸಿದರು.