ಎರಡು ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಿದ ಜಿ. ಜಯರಾಮಯ್ಯ
ಚಿತ್ರದುರ್ಗ, ನ.27: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಕಾಂಗ್ರೆಸ್ ಪಕ್ಷದಿಂದ ಅರ್ಜಿ ಕರೆಯಲಾಗಿತ್ತು. ಅರ್ಜಿ ಸಲ್ಲಿಕೆಗೆ ನವೆಂಬರ್ 21 ಕಡೆಯ ದಿನವಾಗಿತ್ತು. ಇದರ ಅನ್ವಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರುವುದು ಕಂಡು ಬಂದಿದೆ.
ಇತ್ತ ಕೋಟೆ ನಾಡು ಚಿತ್ರದುರ್ಗ ಅಥವಾ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಹಾಗೂ ಕಾಡುಗೊಲ್ಲ ಸಮುದಾಯ ಮುಖಂಡ ಜಿ. ಜಯರಾಮಯ್ಯ ಅವರು ಎರಡು ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮುರುಘಾ ಶ್ರೀ ಪ್ರಕರಣ: ಎಡಿಜಿಪಿಗೆ ಪತ್ರ ಬರೆದ ಮಠದ ವಕ್ತಾರ
ಈಗಾಗಲೇ ಹಿರಿಯೂರು ಮತ್ತು ಚಿತ್ರದುರ್ಗ ಕ್ಷೇತ್ರಕ್ಕೆ ಸುಮಾರು ಐದಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಹೊಸದುರ್ಗ ಹಾಗೂ ಹೊಳಲು ಕ್ಷೇತ್ರದಲ್ಲೂ ಟಿಕೆಟ್ಗಾಗಿ ಪೈಪೋಟಿ ಶುರುವಾಗಿದೆ. ಜಿಲ್ಲೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
2018ರಲ್ಲಿ ಸೋಲು ಕಂಡಿದ್ದ ಘಟಾನುಘಟಿ ಕಾಂಗ್ರೆಸ್ ನಾಯಕರು
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಚಳ್ಳಕೆರೆ ಕ್ಷೇತ್ರದಲ್ಲಿ ಗೆದ್ದು ಜಿಲ್ಲೆಯ ಮರ್ಯಾದೆ ಉಳಿಸಿಕೊಂಡಿತ್ತು. ಇನ್ನು ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಘಟಾನುಘಟಿ ನಾಯಕರು ಸೋಲು ಅನುಭವಿಸಿದ್ದರು. ಕಾರಣ ಕಾಂಗ್ರೆಸ್ ಪಕ್ಷ ಕಾಡುಗೊಲ್ಲ ಸಮುದಾಯಕ್ಕೆ ಟಿಕೆಟ್ ನೀಡದೆ ವಂಚಿಸಿದ್ದರು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗೆಲುವಿಗೆ ಕಾಡುಗೊಲ್ಲ ಸಮುದಾಯ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇದರ ಜೊತೆಗೆ ತುಮಕೂರು, ಶಿರಾ, ಗುಬ್ಬಿ, ಪಾವಗಡ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಅರಸೀಕೆರೆ, ಜಗಳೂರು, ಕೂಡ್ಲಿಗಿ ರಾಮನಗರ, ಚಿಕ್ಕಮಗಳೂರು ಸೇರಿದಂತೆ ಮತ್ತಿತರರ ಭಾಗಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಕಾಡುಗೊಲ್ಲ ಸಮುದಾಯದವರಿಗೆ ಒಂದು, ಎರಡು ಟಿಕೆಟ್ ಸಾಧ್ಯತೆ
2018ರಲ್ಲಿ ಕಾಂಗ್ರೆಸ್ ಪಕ್ಷ ಕಾಡುಗೊಲ್ಲ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಕಾಂಗ್ರೆಸ್ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದರು. ಇದನ್ನು ಅರಿತಿರುವ ಕಾಂಗ್ರೆಸ್ ಈ ಬಾರಿ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿ. ಜಯರಾಮಯ್ಯ ಅವರು ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಇವರ ಜೊತೆಗೆ ಕೆಎಂಎಫ್ ನಿರ್ದೇಶಕ ಸಿ. ವೀರಭದ್ರ ಬಾಬು, ಬಾಲಕೃಷ್ಣ ಯಾದವ್, ಶಿವು ಯಾದವ್, ನಂದಿಹಳ್ಳಿ ಪಾತಯ್ಯ, ಮಾಜಿ ಶಾಸಕ ಎವಿ ಉಮಾಪತಿ, ಮಾಜಿ ಜಿಪಂ ಸದಸ್ಯ ಬಿಸಿ ಪಾಪಣ್ಣ, ಹಾಲೇಶ್ ಸೇರಿದಂತೆ ಮತ್ತಿತರರು ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ.
50 ಸಾವಿರಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯ ಮತಗಳು
ಕಳೆದ ಹತ್ತದಿನೈದು ವರ್ಷಗಳಿಂದ ಹಿರಿಯೂರು ಕ್ಷೇತ್ರದಲ್ಲಿ ಸಮಾಜ ಸೇವಕರಾಗಿ ಗುರುತಿಸಿ ಕೊಂಡಿರುವ ಜಿ. ಜಯರಾಮಯ್ಯ ಅವರು ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಪಕ್ಷ ಸಮುದಾಯವನ್ನು ಪರಿಗಣಿಸಿ ಟಿಕೆಟ್ ನೀಡಬೇಕು ಎಂಬುದು ಜಯರಾಮಯ್ಯ ಅವರ ಲೆಕ್ಕಾಚಾರ. ಇಲ್ಲಿ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನಬಹುದು. ಎರಡು ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿರುವ ಇವರಿಗೆ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಕಾಡುಗೊಲ್ಲ ಸಮುದಾಯ ಮತಗಳಿವೆ. ಇನ್ನು ಚಿತ್ರದುರ್ಗದಲ್ಲೂ ಸಹ 40 ಸಾವಿರಕ್ಕೂ ಹೆಚ್ಚು ಮತಗಳಿವೆ. ಹೀಗಾಗಿ ಕಾಡುಗೊಲ್ಲರಿಗೆ ಟಿಕೆಟ್ ನೀಡಬೇಕು ಎಂಬುದು ಸಮುದಾಯದಿಂದ ಮಾತುಗಳು ಕೇಳಿ ಬರುತ್ತಿವೆ.
ರಾಜಕೀಯವಾಗಿ ಬೆಳೆಯಲು ಈ ಸಮುದಾಯಕ್ಕೆ ಟಿಕೆಟ್ ಅಗತ್ಯ
ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದ್ದು ಈ ಸಮಾಜ ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಹಿಂದುಳಿದಿದೆ. ಇವರಲ್ಲಿ ಸಾಕಷ್ಟು ಸಾಂಸ್ಕೃತಿಕ ಆಚರಣೆಗಳಿವೆ. ಕಾಡುಗೊಲ್ಲರು ಊರಿನಿಂದ ಪ್ರತ್ಯೇಕವಾಗಿ ಹಟ್ಟಿಗಳಲ್ಲಿ ವಾಸಿಸುತ್ತಾರೆ. ಗೊಲ್ಲರಹಟ್ಟಿಗಳು ಕಂದಾಯ ಗ್ರಾಮಗಳಾಗಿಲ್ಲ. ಇವರ ಕಸುಬು ಕುರಿ ಸಾಕಾಣಿಕೆಯಾಗಿದೆ. ಯತ್ತಪ್ಪ, ಜುಂಜಪ್ಪ ಮಹಾಕಾವ್ಯಗಳಿದ್ದು, ಜಂಪಣ್ಣ, ಕಾಟಪ್ಪ, ಕರಡಿಬುಳ್ಳಪ್ಪನ ಪರಂಪರೆ ಇದೆ.
ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕತೆಯನ್ನು ಹೊಂದಿರುವ ಈ ಸಮಾಜ ಕಲೆಯಲ್ಲಿ ಶ್ರೀಮಂತಿಕೆ ಹೊಂದಿದ್ದಾರೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎವಿ ಉಮಾಪತಿ ಅವರು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2014ರ ನಂತರ ಕಾಂಗ್ರೆಸ್ ಸರ್ಕಾರ ಜಯಮ್ಮ ಬಾಲರಾಜ್ ಅವರನ್ನು ಎಂಎಲ್ಸಿ ಮಾಡಲಾಯಿತು. ರಾಜಕೀಯದಲ್ಲಿ ಹೆಚ್ಚು ಶಕ್ತಿ ಕಂಡುಕೊಳ್ಳಲು ಈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಅವಶ್ಯಕತೆ ಇದೆ. ಒಂದು ವೇಳೆ ಈ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದರೆ 2018ರ ವಿಧಾನಸಭಾ ಚುನಾವಣೆಯ ಫಲಿತಾಂಶ ಮರುಕಳಿಸಲಿದೆ ಎನ್ನುತ್ತಾರೆ ಸಮುದಾಯದ ಮುಖಂಡರು.