ಯಾರ ಬೆಂಬಲವಿಲ್ಲದೆ ಸ್ವತಂತ್ರವಾಗಿ ಜೆಡಿಎಸ್ ಸರ್ಕಾರ ರಚನೆ: ಹಿರಿಯೂರು ಅಭ್ಯರ್ಥಿ
ಚಿತ್ರದುರ್ಗ, ಅಕ್ಟೋಬರ್ 1: "2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರ ಬೆಂಬಲವಿಲ್ಲದೆ ಸ್ವತಂತ್ರ ಜೆಡಿಎಸ್ ಸರ್ಕಾರ ರಚನೆಯಾಗಲಿದೆ," ಎಂದು ಹಿರಿಯೂರು ವಿಧಾನಸಭಾ ಕ್ಷೇತ್ರದ ಸಂಭವನೀಯ ಜೆಡಿಎಸ್ ಅಭ್ಯರ್ಥಿ ಕೆ.ಸಿ. ವೀರೇಂದ್ರ (ಪಪ್ಪಿ) ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನೂ 17 ತಿಂಗಳು ಬಾಕಿ ಇರುವಾಗಲೇ ಪಕ್ಷ ಸಂಘಟನೆ ಮುಂದಾಗಿರುವ ಕೆ.ಸಿ. ವೀರೇಂದ್ರ, ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
"ಕಳೆದ ಬಾರಿ ಹೈಕಮಾಂಡ್ ಆದೇಶದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸಿದ್ದೆ. ಸುಮಾರು 40 ಸಾವಿರ ಮತಗಳನ್ನು ಪಡೆದಿದೆ. ಈ ಬಾರಿ ದೊಡ್ಡವರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಕರೆದು ಗುರುತರ ಜವಾಬ್ದಾರಿ ನೀಡಿದ್ದಾರೆ. ಹಿರಿಯೂರಿಗೆ ಹೋಗಿ ಸಂಘಟನೆ ಮಾಡುವಂತೆ ತಿಳಿಸಿದ್ದಾರೆ. ಹಾಗಾಗಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ವರಿಷ್ಠರು ಹಿರಿಯೂರಿನಿಂದ ಸ್ಪರ್ಧಿಸಬೇಕು ಎಂದು ಹೇಳಿದರೆ, ಅದಕ್ಕೆ ರೆಡಿಯಾಗುತ್ತೇನೆ,'' ಎಂದು ಹೇಳಿದರು.
"ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ, ಜೆಡಿಎಸ್ ಪಕ್ಷ ಎಲ್ಲಿದೆ ಅಂತ ಕೇಳುವ ಕಾಲದಲ್ಲಿ ಇವತ್ತು ಪಕ್ಷದಲ್ಲಿ ಟಿಕೆಟ್ ಹಾಗೂ ಸಂಘಟನೆಗೊಸ್ಕರ ಎಲ್ಲ ನಾಯಕರು ಸೇರಿರುವುದರಿಂದ ಅವರವರ ಶಕ್ತ್ಯಾನುಸಾರ ಸಂಘಟನೆ ಮಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕುಮಾರಣ್ಣನವರಿಗೆ ಯಾವುದೇ ಸಮ್ಮಿಶ್ರ ಸರ್ಕಾರ ಇಲ್ಲದೆ ಜೆಡಿಎಸ್ ಸರ್ಕಾರ ರಚನೆ ಮಾಡುವ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದು, ಎಲ್ಲರೂ ಸೇರಿ ಒಗ್ಗಟ್ಟಿನಿಂದ ಸಂಘಟನೆ ಮಾಡುತ್ತಿದ್ದೇವೆ," ಎಂದು ಪಪ್ಪಿ ತಿಳಿಸಿದರು.

ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಕೆ.ಸಿ. ವೀರೇಂದ್ರ
ಜೆಡಿಎಸ್ ಕಾರ್ಯಕರ್ತರೊಂದಿಗೆ ಹಿರಿಯೂರು ನಗರದ ಟಿ.ಬಿ. ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಅಲ್ಲಲ್ಲಿ ಕಾರ್ಯಕರ್ತರ ಮನೆಗೆ ಭೇಟಿ ನೀಡಿ, ತಾಲೂಕಿನ ವಾಣಿವಿಲಾಸ ಜಲಾಶಯ ಬಳಿ ಇರುವ ಕಣಿವೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಸಂಭವನೀಯ ಅಭ್ಯರ್ಥಿ ಭೇಟಿ ನೀಡುವ ಸ್ಥಳಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಪಪ್ಪಿಯವರಿಗೆ ಜೆಸಿಬಿ ಮೂಲಕ ಹೂವು ಸುರಿದು, ತಮಟೆ ಸದ್ದಿನೊಂದಿಗೆ ಹೆಗಲ ಮೇಲೆ ಹೊತ್ತು ಕುಣಿಯುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ನಗರಸಭೆ ಸದಸ್ಯ ವಿಠಲ್, ಮುಖಂಡರಾದ ಜೆ.ಜಿ. ಹಳ್ಳಿ ಮಂಜುನಾಥ್, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಜೆಡಿಎಸ್ ಪಕ್ಷ, ಮುಂಬರುವ 2023ರಲ್ಲಿ ಶತಾಯಗತಾಯವಾಗಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿದೆ. ಈ ದೃಷ್ಟಿಯಿಂದ ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಜೆಡಿಎಸ್ ಘೋಷಣೆ ಮಾಡಿದೆ. ಇತ್ತ ಹಿರಿಯೂರಿಗೆ ಉದ್ಯಮಿ ಹಾಗೂ ಚಿತ್ರನಟ ದೊಡ್ಡಣ್ಣ ಅಳಿಯ ಪಪ್ಪಿಯವರಿಗೆ ಕ್ಷೇತ್ರದ ಬಗ್ಗೆ ಗ್ರೀನ್ ಕಾರ್ಡ್ ನೀಡಲಾಗಿದೆ. ಪಕ್ಷ ಸಂಘಟನೆಗೆ ಒತ್ತು ನೀಡಲು ಕಾರ್ಯ ಆರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಪರ- ವಿರೋಧ ಚರ್ಚೆಗಳು ವ್ಯಕ್ತವಾಗಿವೆ. ಹೊರಗಿನವರಿಗೆ ಟಿಕೆಟ್ ಕೊಡುವ ಬದಲು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಎರಡು ಬಣಗಳು ಸೃಷ್ಟಿಯಾದರೆ, ಮತ್ತೊಂದು ಕಡೆ ಬೆಂಬಲವೂ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಜೆಡಿಎಸ್ ಯಾವ ರೀತಿ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಜೊತೆಗೆ ಒಳ ಜಗಳವನ್ನು ತಣ್ಣಗೆ ಮಾಡಿ ಕೆ.ಸಿ. ವೀರೇಂದ್ರ ಪರ- ವಿರೋಧ ಬಣಗಳು ಒಂದಾಗುತ್ತಾರಾ? ಎನ್ನುವುದನ್ನು ಕಾಲವೇ ನಿರ್ಧರಿಸಬೇಕಿದೆ.

ಸ್ಥಳೀಯ ನಾಯಕರ ವಿರೋಧ
ಹಿರಿಯೂರು ಕ್ಷೇತ್ರದ ಸ್ಥಳೀಯ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸಾಕಷ್ಟು ವರ್ಷಗಳಿಂದ ದುಡಿದಿದ್ದಾರೆ. ಕೆಲವರು ಸ್ಥಳೀಯರಾದ ನಮಗೆ ಟಿಕೆಟ್ ಸಿಗುತ್ತದೆ ಎಂಬ ಆಸೆಯಲ್ಲಿದ್ದರು. ಮತ್ತೊಂದು ಕಡೆ ನಮ್ಮ ಪಕ್ಷಕ್ಕಾಗಿ ದುಡಿದಿರುವ ನಮ್ಮ ನಾಯಕರಿಗೆ ಟಿಕೆಟ್ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದರು. ಆದರೆ ಇದ್ದಕ್ಕಿದ್ದಂತೆ ಪಕ್ಷ ಈ ನಿರ್ಣಯ ತೆಗೆದುಕೊಂಡಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಣಗಳಲ್ಲಿ ಉಂಟಾಗಿರುವ ವಿರೋಧ ಮತ್ತು ಅಸಮಾಧಾನ ತಣಿಸಲು ಕೆ.ಸಿ. ವೀರೇಂದ್ರ (ಪಪ್ಪಿ) ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಪರೋಕ್ಷವಾಗಿ ಈಗಲೇ ಟಿಕೆಟ್ ನೀಡಿರುವುದರಿಂದ ಕ್ಷೇತ್ರದಲ್ಲಿ ಓಡಾಡಿಕೊಂಡಿರುವ ವೀರೇಂದ್ರರಿಗೆ ಬಣಗಳನ್ನು ಒಂದುಗೂಡಿಸುವ ಅವಕಾಶ ಇದೆ.
ಹಿರಿಯೂರು ಕ್ಷೇತ್ರ ಎಂದರೆ ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೆ ಈ ಕೋಟೆಯನ್ನು ಬೇಧಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು. ಆಡಳಿತ ಸರ್ಕಾರದ ಬಿಜೆಪಿ ಶಾಸಕರಿದ್ದು ಹಾಗೂ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿರುವ ಮಾಜಿ ಸಚಿವರು ಸಹ ಕ್ಷೇತ್ರದ ಮತದಾರರನ್ನು ಕೈ ಬಿಡದೆ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಇವರಿಬ್ಬರ ನಡುವೆ ಜೆಡಿಎಸ್ ಸಂಭವನೀಯ ಅಭ್ಯರ್ಥಿ ಯಾವ ರೀತಿ ಪಕ್ಷ ಸಂಘಟನೆ ಮಾಡಿ, ಗೆಲುವು ಸಾಧಿಸುತ್ತಾರೆ ಎಂಬುದು ಮತ್ತೊಂದು ಯಕ್ಷ ಪ್ರಶ್ನೆಯಾಗಿದೆ.

ಕೆಲವು ಸಮುದಾಯಗಳು ಜೆಡಿಎಸ್ಗೆ ಬೆಂಬಲ ಕೊಡಲಿವೆಯೇ?
ಹಿರಿಯೂರು ಕ್ಷೇತ್ರದ ಕೆಲವು ಸಮುದಾಯಗಳು ಜೆಡಿಎಸ್ಗೆ ಬೆಂಬಲ ಕೊಡಲಿವೆಯೇ ಎಂಬುದನ್ನು ಯೋಚಿಸಬೇಕಾಗಿದೆ. ಒಕ್ಕಲಿಗ ಸಮುದಾಯ ಜೆಡಿಎಸ್ ಕೈ ಹಿಡಿಯುವ ಸಾಧ್ಯತೆ ಇದ್ದರೂ ಕೂಡ ಅವರಲ್ಲಿ ಬಣಗಳು ಸೃಷ್ಟಿಯಾಗಿರುವುದರಿಂದ ಯಾವ ರೀತಿ ನಿವಾರಣೆ ಮಾಡುತ್ತಾರೆ ನೋಡಬೇಕಿದೆ.
ಹಿರಿಯೂರು ಕ್ಷೇತ್ರದ ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಯಾದವ ಸಮುದಾಯದ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಇರುವುದರಿಂದ ಒಂದು ವೇಳೆ ಮತದಾರರು ಹೊಸ ಅಭ್ಯರ್ಥಿಗೆ ಮಣೆ ಹಾಕಿದರೆ, ಪಪ್ಪಿ ಗೆಲ್ಲಲು ಯಾವುದೇ ಅನುಮಾನವಿಲ್ಲ. ಆದರೂ ಕೂಡ ಒಳ ಜಗಳಗಳನ್ನು ನಿಭಾಯಿಸಿಕೊಂಡು ಹಾಲಿ ಶಾಸಕಿ ವಿರುದ್ಧ ಪಪ್ಪಿ ಗೆಲ್ಲುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications