ಆರಂಭದ ಹೊಸ್ತಿಲಲ್ಲಿದೆ ಹಿರಿಯೂರಿನ ಇಂದಿರಾ ಕ್ಯಾಂಟೀನ್
ಹಿರಿಯೂರು, ಸೆಪ್ಟೆಂಬರ್ 7: ಕೆಲವೇ ದಿನಗಳ ಹಿಂದೆ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚುವ ಕುರಿತು ವಾದ ವಿವಾದಗಳು ನಡೆದವು. ಅನುದಾನದ ಕೊರತೆ ಎದುರಾಗಿದೆ, ಇಂದಿರಾ ಕ್ಯಾಂಟೀನ್ ಮುಚ್ಚಲಾಗುವುದು ಎಂಬ ಮಾತು ಕೇಳಿಬಂದಿದ್ದು, ಬಡವರಿಗೆ ಅನುಕೂಲವಾಗುವ ಈ ಕ್ಯಾಂಟೀನ್ ಮುಚ್ಚಬಾರದು ಎಂಬ ವಿರೋಧವೂ ವ್ಯಕ್ತವಾಗಿತ್ತು. ಇಂಥ ಸ್ಥಿತಿಯಲ್ಲಿ, ಹಿರಿಯೂರಿನಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಲು ಸಜ್ಜಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಜಾರಿಗೆ ಬಂದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ ಹಿರಿಯೂರಿನಲ್ಲಿ ಈಗ ಪರಿಚಿತಗೊಳ್ಳುತ್ತಿದೆ. ಯೋಜನೆ ಜಾರಿಗೆ ಬಂದು ಸುಮಾರು ಎರಡು ವರ್ಷಗಳು ಕಳೆದ ಮೇಲೆ ಹಿರಿಯೂರಿನ ಜನತೆಗೆ ಇದೀಗ ಇಂದಿರಾ ಕ್ಯಾಂಟೀನ್ ಸೌಲಭ್ಯ ಒದಗಿ ಬರುತ್ತಿದೆ.
ಹಿರಿಯೂರು ನಗರ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡಿದೆ . ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಹಿರಿಯೂರು ನಗರಸಭೆಗೆ ಹೊಸದಾಗಿ ಬಂದಿದ್ದ ಆಯುಕ್ತ ಎಚ್. ಮಹಾಂತೇಶ್ ಕೈಗೆತ್ತಿಕೊಂಡು ಕಾಮಗಾರಿ ಕೆಲಸ ಮುಗಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಇಂದಿರಾ ಕ್ಯಾಂಟೀನ್ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸುತ್ತಿದ್ದು, ಶಾಸಕಿ ಕೆ. ಪೂರ್ಣಿಮಾ, ಸಂಸದ ನಾರಾಯಣಸ್ವಾಮಿ ಅವರು ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಸಮಯ ನಿಗದಿಪಡಿಸಿದರೆ ಅತಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಮುಂದಿನ ವಾರದಲ್ಲಿ ಕ್ಯಾಂಟೀನ್ ಪ್ರಾರಂಭಿಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ" ಎಂದು ತಿಳಿಸಿದರು.












Click it and Unblock the Notifications