ವಾಣಿ ವಿಲಾಸ ಜಲಾಶಯಕ್ಕೆ ಹೆಚ್ಚಿದ ಒಳಹರಿವು: ಪ್ರಸಕ್ತ ವರ್ಷದಲ್ಲಿ ಗರಿಷ್ಠ ನೀರು ಸಂಗ್ರಹ
ಚಿತ್ರದುರ್ಗ, ಜುಲೈ 25: ಮಧ್ಯ ಕರ್ನಾಟಕದ ಜಲಪಾತ್ರೆ ಪಾತ್ರೆ ಎಂದು ಕರೆಸಿಕೊಳ್ಳುವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 999 ಕ್ಯೂಸೆಕ್ ನೀರು ಒಳಹರಿವು ಸಂಗ್ರಹವಾಗಿದೆ.
ಪ್ರಸಕ್ತ ಸಾಲಿನಲ್ಲಿ ಇಷ್ಟೊಂದು ಕ್ಯೂಸೆಕ್ ಒಳಹರಿವು ನೀರು ಇದೇ ಮೊದಲ ಬಾರಿಗೆ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಇದರಿಂದ ಇಂದಿನ ವರದಿಯಲ್ಲಿ ಜಲಾಶಯದ ನೀರಿನ ಮಟ್ಟ 123.25 ಅಡಿ ಇದೆ ಎಂದು ತಿಳಿಸಲಾಗಿದೆ.

ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಲು ಕಾರಣವಾಗಿದೆ.
ಮಳೆಗಾಲ ಆರಂಭವಾಗಿ ಎರಡ್ಮೂರು ತಿಂಗಳು ಕಳೆದರೂ ಜಲಾಶಯಕ್ಕೆ ಯಾವುದೇ ಒಳಹರಿವು ನೀರು ಸಂಗ್ರಹವಾಗಿರಲಿಲ್ಲ. ಇದೀಗ 999 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬಂದಿದೆ.
ಇನ್ನು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರ ಬದುಕು ದುಸ್ತರವಾಗಿದೆ. ರೈತರ ಕೃಷಿ ಚಟುವಟಿಕೆಗಳು ಕುಂಠಿತ ಗೊಂಡಿದೆ. ಜಿಲ್ಲೆಯಲ್ಲಿ ಇದುವರೆಗೂ ಕೇವಲ ಶೇಕಡಾ 35.58 ರಷ್ಟು ಮಾತ್ರ ಬಿತ್ತನೆಯಾಗಿದೆ. ತುಂತುರು ಮಳೆ ಬಿಡುವು ಕೊಟ್ಟರೆ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ.
ಇನ್ನು ತುಂತುರು ಮಳೆಯಿಂದ ಜಿಲ್ಲೆಯಾದ್ಯಂತ 21 ಮನೆಗಳು ಭಾಗಶಃ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಚಿತ್ರದುರ್ಗ 8, ಹೊಳಲ್ಕೆರೆ 6, ಚಳ್ಳಕೆರೆ 2, ಮೊಳಕಾಲ್ಮೂರು 4 ಹಾಗೂ ಹೊಸದುರ್ಗ ತಾಲೂಕಿನಲ್ಲಿ 1 ಮನೆಗೆ ಹಾನಿಯಾಗಿದೆ.
ಹಿರಿಯೂರಿನಲ್ಲಿ 6.96 ಮಿಮೀ ಮಳೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ 6.96 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಈಶ್ವರಗೆರೆ ಗ್ರಾಮದಲ್ಲಿ 19.4 ಮಿಲಿಮೀಟರ್ ಹೆಚ್ಚು ಮಳೆಯಾಗಿದೆ. ಹಿರಿಯೂರು 7.2, ಬಬ್ಬೂರು 7.0, ಇಕ್ಕನೂರು 5.8ಮಿಮೀ ಹಾಗೂ ಸೂಗುರಿನಲ್ಲಿ 2.4 ಮಿಲಿಮೀಟರ್ ಮಳೆ ಸುರಿದಿದೆ ಎಂದು ವರದಿಯಾಗಿದೆ.












Click it and Unblock the Notifications