ಕಾಡುಗೊಲ್ಲರನ್ನು ಪ.ಪಂಗಡಕ್ಕೆ ಸೇರಿಸುವಂತೆ ಸಿಎಂಗೆ ಮನವಿ
ಚಿತ್ರದುರ್ಗ, ಆಗಸ್ಟ್ 02; ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಹಾಗೂ ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿರುವ ಕಾಡುಗೊಲ್ಲ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕಾಡುಗೊಲ್ಲ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದರು.
ಭಾನುವಾರ ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಕೆ ಮಾಡಲಾಗಿದೆ. ಬುಡಕಟ್ಟು ಕಾಡುಗೊಲ್ಲ ಸಮುದಾಯ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ದಶಕಗಳಿಂದ ಈ ಸಮುದಾಯ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಂದು ವಿವರಣೆ ನೀಡಲಾಗಿದೆ.
ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಶೀಘ್ರವೇ ಅಧ್ಯಕ್ಷರ ನೇಮಕ
ಕಾಡುಗೊಲ್ಲರು ಮುಂದೆ ಬರಬೇಕೆಂದರೆ ಈ ಸಮುದಾಯಕ್ಕೆ ಮೀಸಲಾತಿ ಅವಶ್ಯಕತೆ ಇದೆ. ಹಾಗಾಗಿ ಸಮುದಾಯದ ಅಭಿವೃದ್ಧಿಗೊಸ್ಕರ ಎಸ್ಟಿಗೆ ಸೇರ್ಪಡೆ ಮಾಡಬೇಕು. ಈಗಾಗಲೇ ಕಾಡುಗೊಲ್ಲರ ಬಗ್ಗೆ ಕುಲ ಶಾಸ್ತ್ರೀಯ ಅಧ್ಯಯನ ನಡೆದಿದೆ. ಹಿಂದಿನ ಸರ್ಕಾರದಲ್ಲಿ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಕೇಂದ್ರ ಸಂಪುಟದಲ್ಲಿ ತುರ್ತು ಅನುಮೋದನೆ ಪಡೆದು ಅನುಷ್ಠಾನಕ್ಕೆ ತುರುವುದಕ್ಕೆ ನೀವು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ.
ಅಲೆಮಾರಿ ಹಾಗೂ ಅರೆ ಅಲೆಮಾರಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮೂರು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಮನವಿ ಮಾಡಲಾಗಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಸಮುದಾಯದ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಸಮುದಾಯದ ಮುಖಂಡರು ಮುಖ್ಯಮಂತ್ರಿಗಳನ್ನು ಸನ್ಮಾನಿಸಿದರು.
ಕಾಂಗ್ರೆಸ್ ಗೆ ಪಾಠ ಕಲಿಸಿತಾ ಕಾಡುಗೊಲ್ಲ ಸಮುದಾಯ?
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಬಿಜೆಪಿ ಮುಖಂಡ ಎನ್. ಆರ್. ಲಕ್ಷ್ಮೀಕಾಂತ್, ಹಿರಿಯೂರು ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ್, ಹರ್ತಿಕೋಟೆ ವೀರೇಂದ್ರ ಸಿಂಹ, ಮಾಜಿ ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಆರಾಧ್ಯ, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.
ನಟ ಚೇತನ್ ಬೆಂಬಲ: ಸುಮಾರು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಬುಡಕಟ್ಟು ಕಾಡುಗೊಲ್ಲರಿಗೆ ಆದಿವಾಸಿ ಬುಡಕಟ್ಟು ಹಕ್ಕುಗಳ ಹೋರಾಟಗಾರ ಹಾಗೂ ನಟ ಚೇತನ್ ಮತ್ತು ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ. ಎಸ್. ದ್ವಾರಕಾನಾಥ್ ಬೆಂಬಲ ನೀಡುತ್ತಿದ್ದಾರೆ. ಈ ಸಮುದಾಯವು ಅಲೆಮಾರಿ ಜನಾಂಗವಾಗಿದ್ದು ತನ್ನದೇ ಆದ ಜೀವನ ಶೈಲಿ, ಆಚಾರ-ವಿಚಾರಗಳನ್ನು ಹೊಂದಿದೆ. ಇವರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಇತರೇ ಸಮುದಾಯಗಳಂತೆ ಇವರು ಸಹ ಮುಂದೆ ಬರಬೇಕಿದೆ.
ರಾಜ್ಯದ ಬಹುತೇಕ ಗೊಲ್ಲರಹಟ್ಟಿಗಳು ಹಿಂದುಳಿದಿವೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಊರಿನಿಂದ ಬೇರ್ಪಟ್ಟು ಪ್ರತ್ಯೇಕ ಹಟ್ಟಿಗಳಲ್ಲಿ ವಾಸಿಸುವ ಕಾಡುಗೊಲ್ಲರು ತನ್ನದೇ ಆದ ಬುಡಕಟ್ಟು ಸಮುದಾಯವೆಂದು ಗುರುತಿಸಿಕೊಂಡಿದ್ದಾರೆ. ತುಮಕೂರು ಭಾಗದ ಕೆಲವು ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಗತಿಗಳನ್ನು ಅರಿತುಕೊಂಡು ಮೀಸಲಾತಿ ಕೊಡಿ ಎಂದು ಕಳೆದ ನಾಲ್ಕೈದು ವರ್ಷಗಳಿಂದ ನಟ ಚೇತನ್ ಹಾಗೂ ಸಿ. ಎಸ್. ದ್ವಾರಕಾನಾಥ್ ಕಾಡುಗೊಲ್ಲರ ಹೋರಾಟ ಬೆಂಬಲಿಸಿಕೊಂಡು ಬರುತ್ತಿದ್ದಾರೆ.
ಜಾತಿ ಪಟ್ಟಿಗೆ ಸೇರಿಸಿ: ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸುವಂತೆ ಚಿತ್ರದುರ್ಗ, ತುಮಕೂರು, ದಾವಣಗೆರೆ, ರಾಮನಗರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಹೋರಾಟ ನಡೆಸಲಾಗಿತ್ತು. 2018ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಂದಿನ ಸಚಿವ ಸಂಪುಟದಲ್ಲಿ 'ಕರ್ನಾಟಕದಲ್ಲಿ ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸಲಾಗಿದೆ' ಎಂದು ಅಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಅದು ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಜಾತಿ ಪಟ್ಟಿ ನೀಡುವಂತೆ ಇನ್ನು ಹೋರಾಟಗಳು ನಡೆಯುತ್ತಲೇ ಬಂದಿವೆ.
ಆಸೆ ಈಡೇರಿಸುವರೇ; ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡು, ಈಗ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಎ. ನಾರಾಯಣಸ್ವಾಮಿ ಕಾಡುಗೊಲ್ಲರ ಬೇಡಿಕೆಯನ್ನು ಈಡೇರಿಸುವರೇ ಎಂಬ ಪ್ರಶ್ನೆ ಕಾಡತೊಡಗಿದೆ. ಪವಾಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ವಿಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಈ ಸುದ್ದಿಯೇ ಸಂಸದರು ಸಚಿವರಾಗಲು ಕಾರಣ ಎಂದು ಹೇಳಲಾಗುತ್ತಿದೆ.
Recommended Video
ಹಟ್ಟಿಯೊಳಗೆ ಪ್ರವೇಶ ಇಲ್ಲ ಎಂದು ಅಲ್ಲಿನ ಗ್ರಾಮಸ್ಥರು ನಡು ಹಟ್ಟಿಯಲ್ಲಿ ತಡೆಯೊಡ್ಡಿದ್ದರು. ಇದು ಸಾಕಾಷ್ಟು ಚರ್ಚೆಗೆ ಗ್ರಾಸವಾಗಿತ್ತು. ತದನಂತರ ಸಂಸದರನ್ನು ಪೂರ್ಣಕುಂಭಗಳೊಂದಿಗೆ ಹಟ್ಟಿಗೆ ಪ್ರವೇಶ ಮಾಡಿಸಿದ್ದರು. ಅಂದು ಸಂಸದರು ಗೊಲ್ಲರಹಟ್ಟಿಯನ್ನು ಅಭಿವೃದ್ಧಿ ಮಾಡಲು ಸುಮಾರು 75 ಲಕ್ಷ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಅಂದು ಭರವಸೆ ಕೊಟ್ಟ ಮಾತು ಇಂದಿಗೂ ಹಾಗೆಯೇ ಉಳಿದಿದೆ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರೊಬ್ಬರು. ಕಾಡುಗೊಲ್ಲರಲ್ಲಿರುವ ಮೂಢನಂಬಿಕೆಗಳನ್ನು ತೊಡೆದು ಹಾಕಲು ಮೀಸಲಾತಿ ಅವಶ್ಯಕತೆ ಇದೆ. ಹಾಗಾಗಿ ಕೇಂದ್ರ ಸಚಿವರು ಈ ಸಮುದಾಯಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.