ಬಿಜೆಪಿ ಸೇರಿ ತಪ್ಪು ಮಾಡಿಬಿಟ್ಟೆ; ಕಣ್ಣೀರಿಟ್ಟ ಗೂಳಿಹಟ್ಟಿ ಶೇಖರ್
ಚಿತ್ರದುರ್ಗ, ಆಗಸ್ಟ್ 20: ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ, ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಫುಲ್ ಗರಂ ಆಗಿದ್ದು, "ಪಕ್ಷದಲ್ಲಿ ಒಂದು ವರ್ಷದಲ್ಲಿ ಬಹಳ ಹಿಂಸೆ ಕೊಟ್ಟರು. ಹೆಜ್ಜೆ ಹೆಜ್ಜೆಗೂ ಅನುಮಾನಪಟ್ಟರು. ನನ್ನನ್ನು ಕಣ್ಣೀರಿಡುವಂತೆ ಮಾಡಿದರು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"2008ರಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಹೊಸದುರ್ಗದ ಪಕ್ಷೇತರ ಶಾಸಕನಾಗಿದ್ದ ನನ್ನಿಂದ ಸಹಾಯವಾಗಿತ್ತು. ಆದರೆ ಅವರಿಗೆ ಕೃತಜ್ಞತೆ ಎಲ್ಲಿದೆ? ಮಂತ್ರಿ ಪದವಿ ಕೇಳಿದ್ರೆ, "ಏನ್ರಿ ನೀವು ಎಸ್ಸಿ ಆಗಿದ್ರೂ ನಿಮಗೆ ಜನರಲ್ ನಲ್ಲಿ ಟಿಕೆಟ್ ಕೊಟ್ಟಿದ್ದೇ ದೊಡ್ಡದು, ಇನ್ನು ಮಂತ್ರಿ ಸ್ಥಾನ ಎಲ್ಲಿ ಕೊಡೋದು ಎಂದು ಹೇಳ್ತಾರೆ. ಹೆಜ್ಜೆ ಹೆಜ್ಜೆಗೂ ನನ್ನ ಮೇಲೆ ಅನುಮಾನ ಪಟ್ಟಿದ್ದಾರೆ.ಬಹಳ ತಪ್ಪು ಮಾಡಿಬಿಟ್ಟೆ ಅನ್ನಿಸುತ್ತೆ. ನನಗೆ ಪಕ್ಷ ರಾಜಕಾರಣ ಆಗಿಬರೋದಿಲ್ಲ. ಹಿಂದೆ ಆಗಿದ್ದ ತಪ್ಪು ಮತ್ತೊಮ್ಮೆ ಮರುಕಳಿಸದಂತೆ ಜಾಗ್ರತೆ ವಹಿಸಬೇಕಾಗಿತ್ತು. ಪಕ್ಷೇತರನಾಗಿಯೇ ಉಳಿಯಬೇಕಾಗಿತ್ತು" ಎಂದು ಕಣ್ಣೀರಿಟ್ಟರು.

"ನಾನು ಮಾಡಿದ ಸಹಾಯವನ್ನು ಬಿಜೆಪಿಯವರು ಮರೆಯಬಾರದಿತ್ತು. ಅಂದು ಜವಳಿ-ಕ್ರೀಡೆ ಖಾತೆ ಕೊಟ್ರು. ಆದರೆ ಒಬ್ಬ ಕಾನ್ ಸ್ಟೆಬಲ್ ವರ್ಗಾವಣೆ ಮಾಡುವ ಶಕ್ತಿಯೂ ಇರಲಿಲ್ಲ. ಈಗ ನನ್ನ ಮಾತಿಗೆ ಬೆಲೆ ಎಲ್ಲಿ ಸಿಗುತ್ತೆ. ಇರುವಷ್ಟು ದಿನ ಪಕ್ಷದಲ್ಲಿ ಪ್ರಾಮಾಣಿಕವಾಗಿ ಇರುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಫೈಲ್ ಹಿಡಿದುಕೊಂಡು ಸಿಎಂ ಯಡಿಯೂರಪ್ಪ ಬಳಿ ಹೋಗ್ತಿನಿ. ಕೆಲಸ ಮಾಡಿಕೊಟ್ರೆ ಖುಷಿ. ನನ್ನ ಕ್ಷೇತ್ರದ ಜನರಿಗೆ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬ ಆಸೆ ಇತ್ತು. ಅದನ್ನು ನಾನು ಈಡೇರಿಸಿದ್ದೇನೆ. ಅಷ್ಟೇ ನನಗೆ ತೃಪ್ತಿ" ಎಂದರು.
"ನಂಗೆ ಯಾರೂ ಗಾಡ್ ಫಾದರ್ ಇಲ್ಲ, ಹೈಕಮಾಂಡ್ ನಲ್ಲಿ ಯಾರೊಬ್ಬರೂ ಪರಿಚಯ ಇಲ್ಲ. ರಾಜ್ಯದಲ್ಲೂ ಅಷ್ಟೇ, ಯಡಿಯೂರಪ್ಪ ಅವರನ್ನು ನಂಬಿಕೊಂಡಿದ್ದೆ ಅಷ್ಟೆ. ಇರುವಷ್ಟು ಕಾಲ ಪಕ್ಷದಲ್ಲಿರುತ್ತೇನೆ. ಸಿಟ್ಟಾಗಿದ್ದೇನೆ ಎಂದು ಮಂತ್ರಿ ಪದವಿ ಕೊಡ್ತಾರೆ ಎಂಬ ನಂಬಿಕೆ, ನಿರೀಕ್ಷೆ ನನಗಿಲ್ಲ. ಸಣ್ಣ ಮಾತೇ ನಡೆಯೋದಿಲ್ಲ ಅಂದ್ಮೇಲೆ ಮಂತ್ರಿ ಪದವಿ ಕೊಡ್ತಾರೆ ಎಂಬ ಆಸೆ ಇಟ್ಟುಕೊಳ್ಳುವಷ್ಟು ದಡ್ಡನಲ್ಲ' ಎಂದು ಅಸಮಾಧಾನ ಹೊರಹಾಕಿದರು ಗೂಳಿಹಟ್ಟಿ ಶೇಖರ್.












Click it and Unblock the Notifications