ಚಿತ್ರದುರ್ಗ; ಗಣೇಶ ವಿಸರ್ಜನೆ ಬಳಿಕ ಈಜಲು ಹೋದ ಯುವಕ ಸಾವು
ಚಿತ್ರದುರ್ಗ, ಸೆಪ್ಟೆಂಬರ್ 13; ಗಣೇಶ ವಿಸರ್ಜನೆ ಮಾಡಿದ ಬಳಿಕ ಈಜಲು ನೀರಿನಲ್ಲಿ ಧುಮುಕಿದ ಯುವಕನೊಬ್ಬ ನೀರಿನಲ್ಲಿ ಮಳುಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೊಂಡಾಪುರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ರಾಜು ( 27) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಶುಕ್ರವಾರ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮೂರನೇ ದಿನ ಭಾನುವಾರ ಗಣೇಶನನ್ನು ಭದ್ರಾ ಮೇಲ್ದಂಡೆ ಕಾಲುವೆಯ ನೀರಿನಲ್ಲಿ ವಿಸರ್ಜನೆ ಮಾಡಲು 15 ರಿಂದ 20 ಜನ ತಂಡ ತೆರಳಿತ್ತು.
ಗಣೇಶ ವಿಸರ್ಜನೆ ಆದ ನಂತರ ರಾಜು ಈಜಲು ನೀರಿಗೆ ಧುಮಕಿದ್ದು, ಮೇಲೆ ಬರದೇ ಮೃತಪಟ್ಟಿದ್ದಾನೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಹೊಸದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕುರಿ ಮೇಯಿಸುವ ವಿಚಾರಕ್ಕೆ ಮಾರಾಮಾರಿ; ಕುರಿ ಮೇಯಿಸುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಇಬ್ಬರು ಕುರಿಗಾಹಿಗಳು ಬಡಿದಾಡಿ ಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ. ತಾಲೂಕಿನ ಧರ್ಮಪುರ ಹೋಬಳಿಯ ಕುರಿದಾಸಯ್ಯನಹಟ್ಟಿ ಗ್ರಾಮದಲ್ಲಿ ಒಂದೇ ಸಮುದಾಯದ ಇಬ್ಬರು ಸರ್ಕಾರಿ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದರು.
ಒಬ್ಬ ಕುರಿ ಮೇಯಿಸುತ್ತಿದ್ದ ಜಾಗದಲ್ಲಿ ಇನ್ನೋಬ್ಬನ ಕುರಿಗಳು ಹೋಗಿ ಮೇವು ತಿಂದಿರುವುದು ಗಲಾಟೆ ನಡೆಯಲು ಕಾರಣವಾಗಿದೆ. ತಿಮ್ಮರಾಜು ಎಂಬ ಕಾರಿಗಾರನಿಗೆ ಮತ್ತೊಬ್ಬ ಕುರಿಗಾರನು ಕಲ್ಲು, ಕೋಲುಗಳಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ.
ಹಲ್ಲೆಗೊಳಗಾದ ತಿಮ್ಮರಾಜುಗೆ ಎರಡು ಹಲ್ಲುಗಳು ಮುರಿದು ಹೋಗಿವೆ. ತೆಲೆಯಲ್ಲಿ ರಕ್ತ ಸುರಿದು, ಗಾಯಗಳಾಗಿದ್ದು ಇತನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ತಿಮ್ಮರಾಜುನನ್ನು ಚಿಕಿತ್ಸೆಗಾಗಿ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಬ್ಬಿನಹೊಳೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications