Accident: ನಾಳೆ ನಿಶ್ಚಿತಾರ್ಥವಾಗಬೇಕಿದ್ದ ಹೊಳಲ್ಕೆರೆ ಕೃಷಿ ಅಧಿಕಾರಿ ಇಂದು ದಾರುಣ ಸಾವು
ಚಿತ್ರದುರ್ಗ, ಜನವರಿ 20: ನಾಳೆ ಮದುವೆಯ ನಿಶ್ಚಿತಾರ್ಥ ಮಾಡಿಕೊಂಡು ಸುಖ ಸಂಸಾರ ನಡೆಸುವ ಕನಸು ಕಾಣುತ್ತಿದ್ದ ಕೃಷಿ ಅಧಿಕಾರಿಯೊಬ್ಬರು ಇಂದು(ಜನವರಿ 20) ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬಾ ಬಳಿಯ ಏಕನಾಥೇಶ್ವರಿ ಲೇಔಟ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೊಳಲ್ಕೆರೆ ಕೃಷಿ ಅಧಿಕಾರಿ (ತಾಂತ್ರಿಕ) ಸಾವನ್ನಪ್ಪಿದ್ದಾರೆ. ವಿಶಾಲ್ ಕುಮಾರ್ (28) ಮೃತ ದುರ್ದೈವಿ.

ಹೊಳಲ್ಕೆರೆ ಕೃಷಿ ಇಲಾಖೆಯಲ್ಲಿ (ತಾಂತ್ರಿಕ) ಕಾರ್ಯ ನಿರ್ವಹಿಸುತ್ತಿದ್ದ ವಿಶಾಲ್ ಕುಮಾರ್ ಅವರು ಎಂದಿನಂತೆ ಚಿತ್ರದುರ್ಗದಿಂದ ಹೊಳಲ್ಕೆರೆ ಮಾರ್ಗವಾಗಿ ಕರ್ತವ್ಯ ನಿಮಿತ್ತ ಹೋಗುತ್ತಿದ್ದಾಗ ಶನಿವಾರ ಬೆಳಿಗ್ಗೆ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬಾ ಬಳಿ ಲಾರಿ ಡಿಕ್ಕಿ ಹೊಡೆದಿದೆ. ಅಫಘಾತದ ರಭಸಕ್ಕೆ ಕಾರಿನಲ್ಲಿದ್ದ ವಿಶಾಲ್ ಕುಮಾರ್ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ನಾಳೆ ವಿಶಾಲ್ ಕುಮಾರ್ ಅವರ ನಿಶ್ಚಿತಾರ್ಥ ನಿಶ್ಚಯವಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಾರಿನ ಟೈರ್ ಸ್ಫೋಟ : ಮೂವರು ಸ್ಥಳದಲ್ಲೇ ಸಾವು
ಅಜ್ಜಿಯ ಮೃತದೇಹವನ್ನು ಸಾಗಿಸುವ ವೇಳೆ ಕಾರಿನ ಟೈರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ಶುಕ್ರವಾರ ಸಂಜೆ ನಡೆದಿದೆ.
ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದ ಅಜ್ಜಿಯನ್ನು ಅಂತ್ಯಸಂಸ್ಕಾರ ಮಾಡಲು ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದಾನಸೂರು ಗ್ರಾಮದವರಾಗಿದ್ದು ಸುರೇಶ (40), ಮಲ್ಲಿಕಾರ್ಜುನ(25) ಭೂಮಿಕಾ ( 9 ) ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ನಾಗಮ್ಮ(31), ತಾಯಮ್ಮ(56) ಧನರಾಜ್(39) ಹಾಗೂ ಕಾರು ಚಾಲಕ ಶಿವು (26) ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದು, ರಾಂಪುರ ಆಸ್ಪತ್ರೆ ದಾಖಲಿಸಲಾಗಿತ್ತು.
ಸುರೇಶ ಎನ್ನುವವರ ಅಜ್ಜಿ ಹುಲಿಗಮ್ಮ (66)ಇವರು ಶುಕ್ರವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದರು ಮೃತ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿರುವಾಗ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯ ಐಜಿ ತ್ಯಾಗರಾಜನ್, ಎ. ಎಸ್.ಪಿ, ಚಳ್ಳಕೆರೆ ಡಿ ವೈ ಎಸ್ ಪಿ ಟಿ. ಬಿ. ರಾಜಣ್ಣ, ರಾಂಪುರ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ್ ಲಮಾಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications