ಮಲೆನಾಡಾಗಿದ್ದ ಹಿರಿಯೂರು ಇಂದಾಗಿದೆ ಬರದ ನಾಡು
ಚಿತ್ರದುರ್ಗ,
ಜೂನ್ 19: ಒಂದಾನೊಂದು ಕಾಲದಲ್ಲಿ ಆ ಊರು ಅಚ್ಚ ಹಸುರಿನಿಂದ ಕಂಗೊಳಿಸುತ್ತಿತ್ತು. ಅಲ್ಲಿ ಹಕ್ಕಿಗಳ ಕಲರವ, ಬೀಸುವ ತಂಗಾಳಿ ಜೀವನಕ್ಕೆ ಚೈತನ್ಯ ತುಂಬುತ್ತಿತ್ತು. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ವಾಣಿ ವಿಲಾಸ ಜಲಾಶಯ ಹಾಗೂ ತಾಲ್ಲೂಕಿನಲ್ಲಿ ವೇದಾವತಿ ಮತ್ತು ಸುವರ್ಣ ಮುಖಿ ನದಿಗಳು ಹರಿಯುತ್ತಿದ್ದರಿಂದ ಎಲ್ಲಿ ನೋಡಿದರಲ್ಲಿ ಕಬ್ಬು, ಭತ್ತ, ಬಾಳೆ, ತೆಂಗು, ಅಡಿಕೆ ವಿವಿಧ ಬಗೆಯ ಬೆಳೆಗಳು ಸಮೃದ್ಧವಾಗಿದ್ದವು. id="toptextpromo"> id='are-slot-1' class='oiad oi-axt oiadv'>ರೈತರಿಗೆ
ಕೈ ತುಂಬಾ ಕೆಲಸ ಇತ್ತು, ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ, ಹಗ್ಗದ ಕಾರ್ಖಾನೆ, ರೈಸ್ ಮಿಲ್ಲುಗಳು, ಎಣ್ಣೆ ಮಿಲ್ಲುಗಳು ಸೇರಿದಂತೆ ವಿವಿಧ ಗುಡಿ ಕೈಗಾರಿಕೆಗಳಾದ ಬುಟ್ಟಿ, ಚಾಪೆ ಹೆಣೆಯುವುದು, ಕುಂಬಾರಿಕೆ, ಕಮ್ಮಾರಿಕೆ ಮತ್ತಿತರ ಕೆಲಸಗಳೂ ನಡೆಯುತ್ತಿದ್ದವು. ಈಗ ಎಲ್ಲವೂ ತದ್ವಿರುದ್ಧವಾಗಿದೆ. ನೀರಿಲ್ಲದೇ ಊರು ಬಣಗುಡುತ್ತಿದೆ. ಅಂದು ಮಲೆನಾಡಾಗಿದ್ದ ಹಿರಿಯೂರು ಇಂದು ಬರದ ನಾಡಾಗಿದೆ. id='are-slot-2' class='oiad oi-axt oiadv'>
ತೋಟ ಒಣಗಿದೆ, ಅಂತರ್ಜಲ ಮಟ್ಟ ಕುಸಿದಿದೆ
ಹಿರಿಯೂರು ತಾಲ್ಲೂಕಿನಲ್ಲಿ 2000ನೇ ಸಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ವಿವಿ ಸಾಗರಕ್ಕೆ ಹೆಚ್ಚು ನೀರು ಹರಿದು, ಇನ್ನೇನು ಕೋಡಿ ಬೀಳಬಹುದು ಅಂದುಕೊಂಡಿದ್ದರು. ಕೋಡಿ ಬೀಳಲು ಕೇವಲ 7.50 ಅಡಿ ಬಾಕಿ ಉಳಿದಿತ್ತು. 2010ರಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ 112 ಅಡಿ ಮಾತ್ರ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಸರಿಯಾಗಿ ಮಳೆಯೇ ಆಗಲಿಲ್ಲ. ಈ ಕಾರಣಕ್ಕೆ ಜಲಾಶಯಕ್ಕೆ ನೀರೂ ಬರಲಿಲ್ಲ. ಹಿರಿಯೂರು ತಾಲ್ಲೂಕಿನ ಬಹುತೇಕ ತೋಟಗಳು ಒಣಗಿವೆ.
ಹದಿನೈದು ವರ್ಷಗಳಿಂದ ಹಿರಿಯೂರು ಸತತ ಬರಗಾಲಕ್ಕೆ ತತ್ತರಿಸಿದೆ. ವಿವಿ ಸಾಗರದಲ್ಲಿ ನೀರಿಲ್ಲದೇ ತೋಟಗಳು ಸಂಪೂರ್ಣ ಒಣಗಿ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಇರುವ ಬೋರ್ ಗಳು ಬತ್ತಿ ಹೋಗಿವೆ. ಸಾವಿರಕ್ಕೂ ಹೆಚ್ಚು ಅಡಿ ಬೋರ್ ಕೊರೆಸಿದರೂ ನೀರು ಬರುತ್ತಿಲ್ಲ. ಜಾನುವಾರುಗಳಿಗೆ ನೀರು ಮೇವಿಲ್ಲದೆ ಸಾವಿನ ದವಡೆಗೆ ಸಿಲುಕಿವೆ.

ನನಸಾಗದ ಅಪ್ಪರ್ ಭದ್ರಾ ಯೋಜನೆ
ಹಿರಿಯೂರು ಭಾಗದ ಜನರ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಸದ್ಯಕ್ಕೆ ಈಡೇರುವಂತಿಲ್ಲ. ಇದರ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಸಣ್ಣ ಪುಟ್ಟ ಸಮಸ್ಯೆಗಳು ಬಗೆಹರಿಯುಂತಿಲ್ಲ, ವೈ ಜಂಕ್ಷನ್ ಬಳಿ ಇರುವ ಹೆಬ್ಬೂರು ಹರೀಶ್ ಎಂಬುವವರ ಜಮೀನಿನ ಸಮಸ್ಯೆ ಸೇರಿದಂತೆ ಟವರ್ ನಿರ್ಮಾಣ, ರೈಲ್ವೆ ಕಾಮಗಾರಿ ಮತ್ತಿತರ ಕೆಲಸಗಳು ಬಾಕಿ ಇದ್ದು ಕಾಮಗಾರಿ ವಿಳಂಬವಾಗುತ್ತಿದೆ, ಹಾಗಾಗಿ ಸದ್ಯಕ್ಕೆ ಭದ್ರಾದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿದು ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಲು ಕನಿಷ್ಠ ಇನ್ನು ಮುರ್ನಾಲ್ಕು ತಿಂಗಳಾದರೂ ಬೇಕಾಗುತ್ತದೆ.

ವಿವಿ ಸಾಗರದ ನೀರು ಚಳ್ಳಕೆರೆಗೆ ಹರಿಯಿತು
ಕುಡಿಯುವ ನೀರಿಗಾಗಿ ಹಿರಿಯೂರು ವಿವಿ ಸಾಗರದಿಂದ ಚಳ್ಳಕೆರೆ ತಾಲ್ಲೂಕಿನ DRDOಗೆ ಕುಡಿಯುವ ನೀರನ್ನು ಪೈಪ್ ಲೈನ್ ಮೂಲಕ ಹರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಿ ನಂತರ ಚಳ್ಳಕೆರೆಗೆ ನೀರು ಕೊಂಡೊಯ್ಯುತ್ತೇವೆ ಎಂದು ರೈತರಿಗೆ ಮಂಕು ಬೂದಿ ಎರಚಿ ಹಿರಿಯೂರು ಭಾಗದ ತೋಟಗಳಿಗೆ ನೀರು ಬಿಡದೆ ಚಳ್ಳಕೆರೆಗೆ ಹರಿಸಿದ್ದಾರೆ. ಇದುವರೆಗೂ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಲು ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಇತ್ತ ನೀರಿಲ್ಲದೆ ತೋಟಗಳು ಒಣಗಿ ಸಂಪೂರ್ಣವಾಗಿ ನೆಲಕಚ್ಚಿದೆ.

ಡೆಡ್ ಸ್ಟೋರೇಜ್ ತಲುಪಿದ ವಿವಿ ಸಾಗರದ ನೀರು
ಹಿರಿಯೂರು ಸತತ ಬರಗಾಲಕ್ಕೆ ತತ್ತರಿಸಿ ಹೋಗಿದ್ದು, ಸುಮಾರು ಹತ್ತು ವರ್ಷಗಳ ಕಾಲ ತಾಲ್ಲೂಕಿನಲ್ಲಿ ಯಾವುದೇ ಪ್ರಮಾಣದ ಮಳೆ ಆಗಿಲ್ಲ. ಆದ್ದರಿಂದ ಜಲಾಶಯಕ್ಕೆ ನೀರು ಕೂಡ ಹರಿದು ಬಂದಿಲ್ಲ. ವಿವಿ ಸಾಗರ ಜಲಾಶಯದ ಒಟ್ಟು ನೀರಿನ ಮಟ್ಟ 135 ಅಡಿ ಇದ್ದು, ಪ್ರಸ್ತುತ ಜಲಾಶಯದಲ್ಲಿ 61.5 ಅಡಿ ನೀರು ಇರುವುದರಿಂದ ಡೆಡ್ ಸ್ಟೋರೇಜ್ ಹಂತಕ್ಕೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಡ್ಯಾಂ ನೀರನ್ನು ಹೇಗೆ ಬಳಸುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಒಂದು ವೇಳೆ ಡೆಡ್ ಸ್ಟೋರೇಜ್ ನೀರು ಬಳಸಿದರೆ ಡ್ಯಾಂಗೆ ಅಪಾಯ ಕಾದಿದೆಯಾ ಹೇಗೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications