ಜೂ.25ರಿಂದ sslc ಪರೀಕ್ಷೆ; ಹಿರಿಯೂರು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ
ಚಿತ್ರದುರ್ಗ, ಜೂನ್ 19: ಇದೇ ಜೂನ್ 25ರಿಂದ ಆರಂಭಗೊಳ್ಳುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಿರಿಯೂರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
Recommended Video
ಈ ಸಂಬಂಧ ನಗರದ ರೋಟರಿ ಭವನದಲ್ಲಿ ನಿನ್ನೆ ಪೂರ್ವ ಸಿದ್ಧತಾ ಸಭೆಯನ್ನು ನಡೆಸಲಾಗಿದೆ. ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ ಅವರು, "ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಾಲೂಕು ಆಡಳಿತ ವತಿಯಿಂದ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಕಾರ ಇದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಮುಂದಿನ ಭವಿಷ್ಯದ ಕಡೆ ಗಮನ ಹರಿಸಬೇಕು" ಎಂದರು.
ನಂತರ ಬಿಓ ರಾಮಯ್ಯ ಮಾತನಾಡಿ, "ಮಾರ್ಚ್ ತಿಂಗಳಲ್ಲಿ ಪರೀಕ್ಷೆ ನಡೆದು ಏಪ್ರಿಲ್ ತಿಂಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಬರಬೇಕಿತ್ತು. ಕೊರೊನಾ ವೈರಸ್ ನಿಂದಾಗಿ ಪರೀಕ್ಷೆ ವಿಳಂಬವಾಗಿವೆ. ಜುಲೈ 4ರವರೆಗೆ ಎಸ್ ಎಸ್ ಎಲ್ ಸಿಪರೀಕ್ಷೆ ನಡೆಯಲಿದೆ. ತಾಲೂಕಿನಲ್ಲಿ ಒಟ್ಟು 3790 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 14 ಪರೀಕ್ಷಾ ಕೇಂದ್ರಗಳು ಮತ್ತು 3 ಉಪಕೇಂದ್ರಗಳು ಇರುತ್ತದೆ. ಎಲ್ಲಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಡೆಸ್ಕ್ ಗೆ ಇಬ್ಬರಂತೆ ಹಾಗೂ ಪ್ರತಿ ಡೆಸ್ಕಿನ ನಡುವೆ 1ಮೀ ಅಂತರ ಕಾಯ್ದುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದರು.

"ಮಾಸ್ಕ್, ಸ್ಯಾನಿಟೈಸಿಂಗ್, ಆರೋಗ್ಯ ತಪಾಸಣೆ ಸೇರಿದಂತೆ ಆರೋಗ್ಯ ದೃಷ್ಟಿಯಿಂದ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮಿಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗುವುದು. ಶಾಲೆಯ ಸುತ್ತ ಮುತ್ತ 144 ಸೆಕ್ಷೆನ್ ಜಾರಿಯಲ್ಲಿದೆ. ಸುರಕ್ಷತೆ ದೃಷ್ಟಿಯಿಂದ ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಇತರೆ ಇಲಾಖೆಗಳ ಸಹಾಯದಿಂದ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ರೀತಿಯ ಭಯ ಬೇಡ" ಎಂದರು.
ಈ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಮಯ್ಯ, ಸಿಪಿಐ ರಾಘವೇಂದ್ರ, ತಾಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್, ಪಿಎಸ್ಐ ಅನುಸೂಯಮ್ಮ, ಸಮಾಜ ಕಲ್ಯಾಣ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications