ನನ್ನ ಮಾತಿಗೆ ಕವಡೆ ಕಿಮ್ಮತ್ತಿಲ್ಲ, ಬಿಜೆಪಿ ಸಿದ್ಧಾಂತ ಒಪ್ಪಲು ಕಷ್ಟ ಎಂದ ಶಾಸಕ ಗೂಳಿಹಟ್ಟಿ ಶೇಖರ್
ಹೊಸದುರ್ಗ, ಆಗಸ್ಟ್ 26: "ಸರ್ಕಾರ ಮತ್ತು ಪಕ್ಷದಿಂದ ನನಗೆ ಹಿನ್ನಡೆಯಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ನನ್ನನ್ನು ಅವಮಾನಿಸಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಾನೇನು ಮಾಡಬೇಕು" ಎಂದು ಹೇಳಿಕೊಂಡಿದ್ದಾರೆ ಶಾಸಕ ಗೂಳಿಹಟ್ಟಿ ಡಿ.ಶೇಖರ್.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಭಾನುವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "14 ತಿಂಗಳಿಂದ ನನ್ನನ್ನು ಪಕ್ಷದಲ್ಲಿ ಅನುಮಾನದಿಂದ ನೋಡಿದರು. ತಾಲೂಕಿನ ಜನ ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಎಲ್ಲಿಗೂ ಹೋಗಲ್ಲ ಎಂದರೂ ನಂಬಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ರೆಗ್ಯುಲರ್ ಅನುದಾನ ಬರುತ್ತಿತ್ತು. ವಿಶೇಷ ಅನುದಾನ ಪಡೆಯಬೇಕಾದರೆ ಮಂತ್ರಿಗಳ ಬಳಿ ಹೋಗಬೇಕಿತ್ತು. ಮಂತ್ರಿಗಳ ಬಳಿ ಹೋದರೆ ಸುಖಾಸಮ್ಮನೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಇದರಿಂದ ನೊಂದು ನಾನು ಯಾರ ಬಳಿಗೂ ಹೋಗಲಿಲ್ಲ. ಹೀಗಾಗಿ, ತಾಲೂಕಿಗೆ ಯಾವುದೇ ವಿಶೇಷ ಅನುದಾನ ಬರಲಿಲ್ಲ. ಈಗಲಾದರೂ ನಮ್ಮ ಸರ್ಕಾರ ಬಂದಿದೆ. ವಿಶೇಷ ಅನುದಾನ ಸಿಗಬಹುದೇನೋ ಎಂದರೆ, ಈಗಲೂ ನನ್ನನ್ನು ಪಕ್ಷದಲ್ಲಿ ಹೀನಾಯವಾಗಿ ಕಾಣುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
"ರಾಜಕೀಯವಾಗಿ ನನಗೆ ಯಾರೂ ಗಾಡ್ ಫಾದರ್ ಇಲ್ಲ. ನನ್ನ ಬೆಂಬಲಿಗರೇ ನನಗೆ ಗಾಡ್ ಫಾದರ್. 2008ರಲ್ಲಿ ನನಗಾದ ಅನ್ಯಾಯವನ್ನು ಸರಿಪಡಿಸಿ ಎಂದಿದ್ದೆ ತಪ್ಪಾಯಿತಾ? ನಾನು ಸಚಿವ ಸ್ಥಾನ ಕೇಳಿದ್ದು ತಪ್ಪಾ? ಮುಖ್ಯಮಂತ್ರಿಗಳ ಬಳಿ ಯಾರು ಹೆಚ್ಚು ಹತ್ತಿರವಿರುತ್ತಾರೆ ಅಂಥವರಿಗೆ ಮಾತ್ರ ನೂರಾರು ಕೋಟಿ ವಿಶೇಷ ಅನುದಾನ ಸಿಗುತ್ತದೆ. ನನಗೂ ಇನ್ನೂ ಹೆಚ್ಚಿಗೆ ಅನುದಾನ ತರಬೇಕೆಂಬ ಆಸೆಯಿದೆ" ಎಂದರು.

"ತಾಲೂಕಿನಲ್ಲಿ ಶಾಸಕನಾಗಿದ್ದರೂ ಒಬ್ಬ ಪೊಲೀಸ್ ಪೇದೆಯೂ ನನ್ನ ಮಾತು ಕೇಳಲ್ಲ. ಕಳೆದ 14 ತಿಂಗಳು ಮಾಜಿ ಶಾಸಕರ ಅಣತಿಯಂತೆ ಪೊಲೀಸ್ ಇಲಾಖೆ ನಡೆಯುತ್ತಿತ್ತು. ಈಗ ನಮ್ಮ ಸರ್ಕಾರವಿದೆ, ಈಗಲಾದರೂ ನಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳೋಣ ಎಂದರೆ, ಪಕ್ಷದ ಮುಖಂಡರು ಮೂಗು ತೂರಿಸುತ್ತಿದ್ದಾರೆ. ಹೀಗಾದರೆ, ನಾನು ಏಕೆ ಪಕ್ಷದ ಶಾಸಕನಾಗಿ ಇರಬೇಕು?" ಎಂದು ಕಿಡಿಕಾರಿದರು.
"ನಾನು ಜೆಡಿಎಸ್ ಮೂಲದಿಂದ ಬಂದವನು. ನನಗೆ ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ನನ್ನ ಬೆಂಬಲಿಗರಿಗೂ ಕಷ್ಟವಾಗುತ್ತಿದೆ. ಹೀಗಾಗಿ, ನಾನು ಮೊದಲು ಬೆಂಬಲಿಗರೊಂದಿಗೆ ಮಾತನಾಡಿ, ಅಭಿಪ್ರಾಯ ಪಡೆದು ನಂತರ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ತೀರ್ಮಾನ ಮಾಡಬೇಕೆಂದಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ನಾನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದಕ್ಕೆ ನೀವು ಸಾಕ್ಷ್ಯವಿರಲಿ ಎನ್ನುವ ಉದ್ದೇಶದಿಂದ ನನಗಾದ ನೋವನ್ನು ಹೇಳಿಕೊಳ್ಳಲು ಸಭೆ ಕರೆದಿದ್ದೇನೆ" ಎಂದು ತಿಳಿಸಿದರು.












Click it and Unblock the Notifications