Get Updates
Get notified of breaking news, exclusive insights, and must-see stories!

ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ ನೀಡಿ-ಸಚಿವ ಡಿ.ಸುಧಾಕರ್

ಚಿತ್ರದುರ್ಗ, ಜುಲೈ, 13: ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ ದೊರಕುವುದು ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಂಯುಕ್ತಾಶ್ರಯದಲ್ಲಿ, ನಗರದ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Give Preference to only truth news says D Sudhakar

ಮಾಧ್ಯಮಗಳು ಜನರ ವಿಶ್ವಾಸಕ್ಕೆ ಹತ್ತಿರವಾಗಬೇಕು. ಜನರು ಮಾಧ್ಯಮದವರು ಅತೀ ಸೂಕ್ಷ್ಮವಾಗಿ ಗಮನಿಸುತ್ತಾರೆ. ಜನಸಾಮಾನ್ಯರಲ್ಲಿ ಇಂದು ಟಿ.ವಿ ಹಾಗೂ ಪತ್ರಿಕೆಗಳ ಸುದ್ದಿಗಳನ್ನು ಅನುಮಾನದ ದೃಷ್ಠಿಯಿಂದ ನೋಡುವ ಪರಿಸ್ಥಿತಿ ಉಂಟಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವುದು ಸುಳ್ಳು ಎನ್ನುವ ಭಾವನೆ ಜನರಲ್ಲಿ ಮೂಡುತ್ತಿರುವುದು ಆತಂಕಕಾರಿ ಆಗಿದೆ ಎಂದರು.

ಮುಖ್ಯ ವಾಹಿನಿಯ ಮಾಧ್ಯಮಗಳ ಜೊತೆಗೆ, ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್‍ಗಳಲ್ಲಿಯೂ ಸುದ್ದಿಗಳ ಪ್ರಸಾರವಾಗುತ್ತಿದೆ. ಇವು ಮುಖ್ಯ ವಾಹಿನಿಯ ಮಾಧ್ಯಮಗಳಿಗೆ ಸಮಾನಾಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ಬದಲಾದ ಈ ಪರಿಸ್ಥಿತಿಯಿಂದ ಟಿ.ವಿ ಹಾಗೂ ಪತ್ರಿಕಾ ಮಾಧ್ಯಮಗಳು ಹೊರಬರಬೇಕು ಎಂದರು.

ವಸ್ತುನಿಷ್ಠ, ನಿಖರ ಹಾಗೂ ಸತ್ಯವಾದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಜನರ ನಂಬಿಕೆಯನ್ನು ಗಳಿಸಬೇಕು. ಪತ್ರಿಕೆ ಮತ್ತು ಮಾಧ್ಯಮ ಪ್ರಜಾಪ್ರಭುತ್ವ ಹಾಗೂ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಚಿವ ಡಿ.ಸುಧಾಕರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪತ್ರಕರ್ತರು ಕಾಳಜಿ ಹೊಂದಿದ್ದಾರೆ. ಜಿಲ್ಲೆಯ ಪತ್ರಕರ್ತರಿಗೆ ಅಗತ್ಯವಾಗಿರುವ ನಿವೇಶನ ಮಂಜೂರಾತಿ ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸಚಿವನಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿಯೇ ನಿವೇಶನ ಹಂಚಿಕೆ ಪೂರ್ಣಗೊಳಿಸುವುದಾಗಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಪತ್ರಿಕೆಗಳು ಸಮಾಜದ ಪ್ರತಿಬಿಂಬ ಹಾಗೂ ಪ್ರಜಾಪ್ರಭುತ್ವದ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಕನ್ನಡ ನಾಡಿನ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆಯನ್ನು 1843 ಜುಲೈ 1ರಂದು ಪಾದ್ರಿ ಹರ್ಮನ್ ಮೋಗ್ಲಿಂಗ್ ಅವರು ಪ್ರಾರಂಭಿಸಿದರು. ಗೋಪಾಲಕೃಷ್ಣ ಗೋಖಲೆ ಹಾಗೂ ಬಾಲಗಂಗಾಧರ ತಿಲಕ್ ಬ್ರಿಟಿಷರ ದುರಾಡಳಿತ, ಬ್ರಿಟಿಷರು ಜನರಿಗೆ ಮಾಡುತ್ತಿರುವ ಶೋಷಣೆಯನ್ನು ಪತ್ರಿಕೆಗಳ ಮೂಲಕ ಜನರಿಗೆ ತಿಳಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಮಹಾತ್ಮ ಗಾಂಧೀಜಿ "ಯಂಗ್ ಇಂಡಿಯಾ" ಹಾಗೂ "ಹರಿಜನ" ಪತ್ರಿಕೆಗಳನ್ನು ಆರಂಭಿಸಿದರು. ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಪತ್ರಿಕೆ ಆರಂಭಿಸಿದರು. ಅಂಬೇಡ್ಕರ್ ಸಹ "ಮೂಕನಾಯಕ" ಹಾಗೂ "ಬಹಿಷ್ಕೃತ ಸಮಾಜ" ಪತ್ರಿಕೆಗಳ ಮೂಲಕ ದೀನ ದಲಿತರನ್ನು ಸಂಘಟಿಸಿ ಅಭಿವೃದ್ಧಿ ಪಥದ ಕಡೆಗೆ ಮುನ್ನಡಿಸಿದರು. ಸ್ವಾತಂತ್ರ್ಯ ನಂತರ ಮಾಜಿ ಪ್ರಧಾನಿ ನೆಹರು ಅವರ ಮೊದಲ ಸಚಿವ ಸಂಪುಟದಲ್ಲಿ ಖ್ಯಾತ ಪತ್ರಕರ್ತ ರಂಗರಾವ್ ದಿವಾಕರ್ ಸಹಿತ ಒಬ್ಬರು ಆಗಿದ್ದರು ಎಂದರು.

ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿದ್ದ ಪಾಟೀಲ್ ಪುಟ್ಟಪ್ಪನವರು ಸಹ ವಿಶ್ವವಾಣಿ ದಿನಪತ್ರಿಕೆ ಹಾಗೂ ಪ್ರಪಂಚ ಎನ್ನುವ ವಾರ ಪತ್ರಿಕೆಗಳ ಸಂಪಾದಕರಾಗಿದ್ದರು. ಇಂದು ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗಿದೆ. ಟಿವಿ ಮಾಧ್ಯಮಗಳು ಹೆಚ್ಚಿನ ಪರಿಣಾಮ ಬೀರುತ್ತಿವೆ. ಇಂದಿನ ಮಕ್ಕಳಿಗೆ ಟಿವಿ ಮಾಧ್ಯಮಗಳೇ ಮೊದಲ ಪಾಠಶಾಲೆ ಎನ್ನುವಂತಾಗಿದೆ.ಮಾಧ್ಯಮಗಳ ಹೆಚ್ಚಿನ ಪ್ರಭಾವ ಬೀರುವ ಶಕ್ತಿ ಹೊಂದಿದ್ದು, ಇದು ಸಮಾಜದ ಏಳಿಗೆ ಬಳಕೆಯಾಗಲಿ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.

ಮಾಧ್ಯಮಗಳಿಗೆ ಕಳಂಕ ತರುವ ಭ್ರಷ್ಟರನ್ನು ದೂರವಿಡಿ: ಪತ್ರಿಕಾ ದಿನಾಚರಣೆಯಲ್ಲಿ ಕನ್ನಡಪ್ರಭ ಹಾಗೂ ಏಷ್ಯಾ ನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ದಿಕ್ಸೂಚಿ ಭಾಷಣ ಮಾಡಿ, ಪ್ರಸಕ್ತ ಸಮಾಜದಲ್ಲಿ ಮಾಧ್ಯಮ ಎನ್ನುವುದು ಭ್ರಷ್ಟಾಚಾರ ಮಾಡಲು ಸಲಕರಣೆಯಾಗಿ ಬಳಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಾಧ್ಯಮಗಳಿಗೆ ಕಳಂಕ ತರುವ ಭ್ರಷ್ಟರು ನಮ್ಮ ನಡುವೆಯೇ ಇದ್ದಾರೆ. ಇಂತಹವರನ್ನು ಹುಡುಕಿ ಸಮಾಜದ ಎದುರು ಬಯಲು ಮಾಡಬೇಕು ಎಂದರು.

ಜುಲೈ 1ನೇ ತಾರೀಖನ್ನು ಪತ್ರಿಕಾ ದಿನಾಚರಣೆ ಎನ್ನುವ ಬದಲು ಮಾಧ್ಯಮ ದಿನಾಚರಣೆ ಎಂದು ಕರೆದರೆ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಏಕೆಂದರೆ ಮೊದಲ ಪತ್ರಿಕೆ ಪ್ರಾರಂಭವಾದ ದಿನಗಳಲ್ಲಿ ಮುದ್ರಣ ಮಾಧ್ಯಮ ಅಸ್ತಿತ್ವದಲ್ಲಿತ್ತು. ಆದರೆ ಈಗ ಟಿ.ವಿ. ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮವೂ ಕೂಡ ಅಸ್ತಿತ್ವದಲ್ಲಿರುವುದರಿಂದ, ಮಾಧ್ಯಮ ದಿನಾಚರಣೆ ಎನ್ನುವುದು ಸೂಕ್ತ. ಈ ದಿನವನ್ನು ಆತ್ಮಾವಲೋಕ ದಿನವಾಗಿ ಆಚರಿಸಬೇಕು. ವೃತ್ತಿಪರತೆಯನ್ನು ಅಳವಡಿಸಕೊಳ್ಳುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ತರಲು ಪ್ರಯತ್ನಿಸಬೇಕು ಎಂದರು.

ಮಾಧ್ಯಮಗಳಲ್ಲಿ ಇಂದು ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ವಸೂಲಿ ದಂಧೆ ನಡೆಯುತ್ತಿದೆ. ಭ್ರಷ್ಟಾಚಾರಾದ ಕುರಿತು ಪ್ರಕಟವಾದ ಸುದ್ದಿಗಳಿಗಿಂತ, ಪ್ರಕಟವಾಗದೇ ಮುಚ್ಚಿ ಹೋಗುವ ಭ್ರಷ್ಟಾಚಾರದ ಸುದ್ದಿಗಳ ಬಗ್ಗೆ ಹೆಚ್ಚು ಯೋಚಿಸುವ ಅನಿವಾರ್ಯತೆಯಿದೆ. ಮಾಧ್ಯಮಗಳಿಗೆ ಕಳಂಕ ತರುವ ಭ್ರಷ್ಟರನ್ನು ಖಂಡಿಸಬೇಕು. ಪತ್ರಕರ್ತರ ಸಂಘಗಳು ಇಂತಹವರಿಗೆ ಮನ್ನಣೆ ನೀಡಬಾರದು ಎಂದು ಹೇಳಿದರು.

ಸರ್ಕಾರಗಳನ್ನು ಸರಿದಾರಿಗೆ ತರುವ ಶಕ್ತಿ ಮಾಧ್ಯಮಗಳಿಗಿದೆ. ಹಗರಣಗಳನ್ನು ಬಯಲಿಗೆ ಎಳೆಯುವ ಮೂಲಕ ಭ್ರಷ್ಟಾಚಾರನ್ನು ತಡೆಗಟ್ಟಬಹದು. ರಾಜ್ಯದಲ್ಲಿ ನಡೆದ ಪಿ.ಎಸ್.ಐ ನೇಮಕಾತಿ ಹಗರಣವನ್ನು ಮಾಧ್ಯಮಗಳು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದದವು. ಇದರಲ್ಲಿ ಉನ್ನತ ಅಧಿಕಾರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಜನರ ಬಂಧನವಾಯಿತು ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತರು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಎಂಬ ವಿಷಯದ ಕುರಿತು ಕವಿ ಹಾಗೂ ಜನಪರ ಹೋರಾಟಗಾರ ಬಂಜೆಗೆರೆ ಜಯಪ್ರಕಾಶ್ ಮಾತನಾಡಿ, ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಬದಲಾವಣೆ ತರುವ ನಿಟ್ಟಿನಲ್ಲಿ ಸಂವಿಧಾನ ರಚನೆ ಮಾಡಲಾಯಿತು. ನಂತರ ದೇಶ ಆಳಿದ ಎಲ್ಲಾ ಸರ್ಕಾರಗಳು ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿ ಹಾಗೂ ಬದಲಾವಣೆ ತರುವಂತೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದರು.

ಖಾತ್ಯ ಲೇಖಕ ಡಾ.ಬಾಲಗೋಪಾಲರಾವ್ ಅವರು ದೇಶದಲ್ಲಿ ಸಾಮಾಜಿಕ ತತ್ವಗಳನ್ನು ಬಿತ್ತುವಲ್ಲಿ, ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳು ವಹಿಸಿದ ಪಾತ್ರದ ಕುರಿತು ಕೃತಿ ರಚಿಸಿದ್ದಾರೆ. ಇದರ ಕನ್ನಡ ಅನುವಾದವನ್ನು ಸ್ವತಃ ನಾನೇ ಮಾಡಿದ್ದು, ಸದ್ಯದಲ್ಲಿಯೇ ಕೃತಿ ಬಿಡುಗಡೆಯಾಗಲಿದೆ ಎಂದರು.

ನಾಡಿನಲ್ಲಿ ಜನಪರ, ರೈತ ಹಾಗೂ ಪರಿಸರ ರಕ್ಷಣೆ ಹೋರಾಟಗಳಲ್ಲಿ ಪತ್ರಿಕೆಗಳು ಹಾಗೂ ಪತ್ರಕರ್ತರ ಪಾತ್ರ ದೊಡ್ಡದಿದೆ. ಸಾಮಾಜಿಕ ಹೋರಾಟಗಾರಿಗೆ ಬೆನ್ನೆಲುಬಾಗಿ ನಿಂತು ಪತ್ರಕರ್ತರು ಕಾರ್ಯನಿರ್ವಹಿಸುತ್ತಾರೆ. ಬಹಳಷ್ಟು ವಿಷಯಗಳು ಪತ್ರಕರ್ತರ ಮೂಲಕವೇ ಸಾಮಾಜಿಕ ಹೋರಾಟಗಾರರಿಗೆ ತಲುಪುತ್ತವೆ. ಸರ್ಕಾರದ ನೀತಿ ನಿರೂಪಣೆಗಳ ಬಗ್ಗೆ ಜನರಿಗೆ ಮುಂಚಿತವಾಗಿ ಜಾಗೃತಗೊಳಿಸುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಾ ಬಂದಿವೆ ಎಂದು ಬಂಜೆಗೆರೆ ಜಯಪ್ರಕಾಶ್ ಹೇಳಿದರು.

ವಿಧಾನಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಗತ್ಯ ಇರುವ ಸಲಕರಣೆಗಳನ್ನು ನೀಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 5 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿರುವುದಾಗಿ ತಿಳಿಸಿದರು. ಇದರೊಂದಿಗೆ ಜಿಲ್ಲೆಯ 157 ಪತ್ರಿಕಾ ವಿತರಕರಿಗೆ ರೇಡಿಯಂ ಸ್ಟಿಕ್ಕರ್ ರಿಫ್ಲೆಕ್ಟರ್ ಹೊಂದಿರುವ ಜಾಕೇಟ್‍ಗಳನ್ನು ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‍ಪೀರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಸದಸ್ಯ ಎಂ.ಎನ್.ಅಹೋಬಲ ಪತಿ, ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಬಿ.ವಿ.ಮಲ್ಲಿಕಾರ್ಜುನಯ್ಯ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+