ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಗೊಂಡ ಮಾಜಿ ಶಾಸಕ ಬಸವರಾಜ ಮಂಡಿಮಠ
ಆಡಳಿತಾರೂಢ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದೆ. ಆದರೆ ಬಿಜೆಪಿ ಪಕ್ಷದ ನಡೆಯಿಂದ ಬೇಸರಗೊಂಡ ಬಿಜೆಪಿ ಮಾಜಿ ಶಾಸಕ ಬಸವರಾಜ ಮಂಡಿಮಠ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಚಿತ್ರದುರ್ಗ, ಜನವರಿ 30: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಚಿತ್ರದುರ್ಗದಲ್ಲಿ ಬಿಜೆಪಿ ಮಾಜಿ ಶಾಸಕ ಬಸವರಾಜ ಮಂಡಿಮಠ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಭಾನುವಾರ ಚಳ್ಳಕೆರೆ ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ್, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ಮುಖಂಡರು ಮಾಜಿ ಶಾಸಕ ಬಸವರಾಜ ಮಂಡಿಮಠಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಜೆಡಿಎಸ್ ಪಕ್ಷಕ್ಕೆ ಸೇಪರ್ಡೆಯಾಗಿ ಮಾತನಾಡಿ ಬಸವರಾಜ್ ಮಂಡಿಮಠ್ "ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಮಾತನಾಡಿ "30 ವರ್ಷಗಳಿಂದ ನೇರ ನಡೆಯಿಂದ ಸ್ವಚ್ಛ ರಾಜಕೀಯ ಮಾಡಿದ ಮಾಜಿ ಶಾಸಕ ಬಸವರಾಜು ಮಂಡಿಮಠ್ ಜೆಡಿಎಸ್ ಪಕ್ಷಕ್ಕೆ ಸೆರ್ಪಡೆಯಾಗಿರುವುದು ಕ್ಷೇತ್ರದಲ್ಲಿ ಜೆಡಿಎಸ್ಗೆ ಆನೆ ಬಲಬಂದಾಂಗಿದೆ. ಆಳುವ ಸರ್ಕಾರ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇನ್ನೊಂದು ಕಡೆ ನೋಡುವುದಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರದ ದುರಾಸೆಯಿಂದ ತಮ್ಮ ತಮ್ಮಲ್ಲಿ ಕಿತ್ತಾಡಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಿ ಜನತೆಯನ್ನು ಕೀಳು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಇಂತಹ ರಾಷ್ಟ್ರೀಯ ಪಕ್ಷಗಳು ಬೇಡವೆಂದು ರಾಜ್ಯದ ಜನತೆಯು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಕುಮಾರಣ್ಣನವರ ಆಡಳಿತದಲ್ಲಿ ರಾಜ್ಯದ 80 ಲಕ್ಷ ಕೋಟಿ ರೈತರ ಸಾಲ ಮನ್ನ ಮಾಡಿದ್ದಾರೆ. ಬೀದಿ ವ್ಯಾಪಾರಸ್ಥರಿಗೆ ಅಡ್ಡ ಬಡ್ಡಿಗೆ ಕಡಿವಾಣ ಹಾಕಿ ಸರ್ಕಾರದಿಂದಲೇ ದಿನಕ್ಕೆ ಐದರಿಂದ ಹತ್ತು ಸಾವಿರ ರೂಪಾಯಿಗಳ ಸಾಲ ಕೊಟ್ಟು ಬೀದಿ ವ್ಯಾಪಾರಸ್ಥರ ಜೀವ ನಾಡಿಯಾಗಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಬಾಣಂತಿಯರಿಗೆ 6,000 ಸರ್ಕಾರದಿಂದ ಧನ ಸಹಾಯ ಮಾಡಿ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಆರಂಭವಾಗಿದೆ. ಇದು ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿಯಾಗಲಿದೆ. ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಕೂದಲೆಳೆ ಅಂತರದಲ್ಲಿ ಸೋಲುಕಂಡಿದ್ದರು. ಈ ಬಾರಿ ಕ್ಷೇತ್ರದಲ್ಲಿ ಸಮರ್ಥವಾಗಿ ಪಕ್ಷವನ್ನು ಸಂಘಟಿಸಿ ಚುನಾವಣೆ ನಡೆಸಿದರೆ ನಮ್ಮ ಅಭ್ಯರ್ಥಿ ಜಯಗಳಿಸುತ್ತಾರೆ. ಬಿಜೆಪಿ 40% , ಕಾಂಗ್ರೆಸ್ ಪಕ್ಷದ 50 % ಕಮಿಷನ್ ಹಾವಳಿಗೆ ರಾಜ್ಯದಲ್ಲಿ ಜನರು ಬೇಸತ್ತು, ಪ್ರಾದೇಶಿಕ ಪಕ್ಷದ ಕಡೆ ಮುಖಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಜಯಗಳಿಸಿದರೆ ಮಾಜಿ ಶಾಸಕ ಬಸವರಾಜು ಮಂಡಿಮಠ್ ಗೆದ್ದಂತೆ ಎಂದು ತಿಳಿಸಿದರು.
ಬಸವರಾಜು ಮಂಡಿಮಠ್ ಜೆಡಿಎಸ್ ಸೇರ್ಪಡೆಗೊಂಡ ಸಮಯದಲ್ಲಿ ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಸಿ.ನಾಗರಾಜ್, ಕವಿತನಾಯಕಿ, ನಾಗಮಣಿ, ವಿರೇಂದ್ರಪ್ಪ, ಚಂದ್ರಪ್ಪ ಶ್ರೀನಿವಾಸ್ ಚೌಳೂರು ಮುನಿಯಣ್ಣ ವಿ ವೈ ಪ್ರಮೋದ್ ತಿಪ್ಪೇಸ್ವಾಮಿ ರಾಜಣ್ಣ ಹನುಮಂತ ಆಚಾರ್ ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.