ಚಿತ್ರಾನ್ನ, ಬೋಂಡಾ ಸೇವಿಸಿದ ಇಬ್ಬರು ಮಕ್ಕಳ ಸಾವು
ಚಿತ್ರದುರ್ಗ, ನವೆಂಬರ್ 17 : ಹೊಟ್ಟೆ ತುಂಬಲೆಂದು ಆಹಾರ ಸೇವಿಸಿದ ಎಳೆ ಮಕ್ಕಳಿಗೆ ಸೇವಿಸಿದ ಆಹಾರವೇ ವಿಷವಾಗಿ ಪ್ರಾಣ ಕಸಿದು ಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪಾತಪಾಪನ ಗುಡಿ ಗ್ರಾಮದಲ್ಲಿ ಚಿತ್ರಾನ್ನ, ಬೋಂಡ ಸೇವಿಸಿದ ಒಂದೇ ಕುಟುಂಬದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಗ್ರಾಮದ ರೈತ ಬೋಜಪ್ಪ, ಲಕ್ಷ್ಮಿದೇವಿ ದಂಪತಿ ಮಕ್ಕಳಾದ ವರ್ಷಿಣಿ(3) ಹಾಗೂ ಜಗದೀಶ್(6) ಮೃತ ದುರ್ದೈವಿಗಳು.
ಮೃತ ಮಕ್ಕಳು ಸೇರಿದಂತೆ ಕುಟುಂಬದವರು ಗುರುವಾರ (ನವೆಂಬರ್ 16) ರಾತ್ರಿ ಚಿತ್ರಾನ್ನ ಹಾಗೂ ಬೋಂಡ ತಿಂದು ಮಲಗಿದ್ದರು. ಇಬ್ಬರು ಮಕ್ಕಳಿಗೆ ತಡರಾತ್ರಿ ತೀವ್ರ ಹೊಟ್ಟೆನೋವು ಹಾಗೂ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಆಗ ಬೋಜಪ್ಪ, ಲಕ್ಷ್ಮಿದೇವಿ ದಂಪತಿ ಮಾತ್ರೆ ಕೊಟ್ಟು ಮಲಗಿಸಿದ್ದರು.
ಆದರೆ ಬೆಳಿಗ್ಗೆ (ನವೆಂಬರ್ 17) ಹೊಟ್ಟೆ ನೋವು ಇನ್ನೂ ಹೆಚ್ಚಾಗಿ ಮಕ್ಕಳು ನಿತ್ರಾಣರಾಗಿರುತ್ತಿರುವುದನ್ನು ಗಮನಿಸಿ ಚಿಕಿತ್ಸೆಗಾಗಿ ಚಳ್ಳಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರಬೇಕಾದರೆ ಮಾರ್ಗ ಮಧ್ಯೆ ಇಬ್ಬರೂ ಮಕ್ಕಳೂ ಸಾವನ್ನಪ್ಪಿದ್ದಾರೆ.
ಮಕ್ಕಳ ಜತೆ ಅದೇ ಆಹಾರ ಸೇವಿಸಿದ್ದ ತಂದೆ, ತಾಯಿ ಹಾಗೂ ತಂಗಿಯನ್ನು ತಪಾಸಣೆಗೊಳಪಡಿಸಲಾಗಿದೆ. ಅದೃಷ್ಟವಶಾತ್ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಈ ಇಬ್ಬರು ಮಕ್ಕಳು ಸೇವಿಸಿರೋ ಆಹಾರದಲ್ಲಿ ಹಲ್ಲಿ ಬಿದ್ದಿರಬಹುದು ಎಂಬ ಶಂಕೆಯನ್ನು ವೈದ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಈ ಗ್ರಾಮದ ಸಮೀಪದಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯ ಇಲ್ಲ. ಸಕಾಲಕ್ಕೆ ಆಂಬುಲೆನ್ಸ್ ಲಭ್ಯವಾಗದಿರುವುದೂ ಸಹ ಎಳೆ ಜೀವಿಗಳ ಪ್ರಾಣ ಹೋಗಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.











Click it and Unblock the Notifications