Get Updates
Get notified of breaking news, exclusive insights, and must-see stories!

ಚಿತ್ರದುರ್ಗ ವಿಶೇಷ; ಮರೆಯಾಗುತ್ತಿದೆ ಬಡವರ ಖರ್ಜೂರವಾದ ಈಚಲು ಮರಗಳು

ಚಿತ್ರದುರ್ಗ, ಜೂನ್ 17; ಗ್ರಾಮೀಣ ಪ್ರದೇಶದಲ್ಲಿ ಈಚಲು ಹಣ್ಣನ್ನು 'ಬಡವರ ಖರ್ಜೂರ' ಎಂದು ಕರೆಯುತ್ತಾರೆ. ಸುಗ್ಗಿ ಸಮಯದಲ್ಲಿ ಮುಳ್ಳನ್ನು ಲೆಕ್ಕಿಸದೆ ಹಣ್ಣು ಕಿತ್ತು ತಿಂದವರೇ ಹೆಚ್ಚು. ಈ ಹಣ್ಣಿನಲ್ಲಿ ಹೆಚ್ಚು ಪೌಷ್ಠಿಕತೆ ಇದೆ ಎಂದು ಹಿರಿಯರು ಹೇಳುತ್ತಾರೆ. ಈಗ ಈಚಲು ಮರಗಳು ಮರೆಯಾಗುತ್ತಿವೆ. ರೈತರು ಈಚಲು ಬೇಸಾಯದಿಂದ ದೂರವಾಗುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್, ಮ್ಯಾಕ್ಲೂರಹಳ್ಳಿ, ಕೆ. ಆರ್. ಹಳ್ಳಿ, ಸೇರಿದಂತೆ ವೇದಾವತಿ ಮತ್ತು ಸುವರ್ಣ ಮುಖಿ ನದಿಗಳ ಪಾತ್ರದಲ್ಲಿ ಸಾವಿರಾರು ಈಚಲು ಮರಗಳಿದ್ದವು. ಹಿಂದೆ ನೂರಾರು ಕುಟುಂಬಗಳು ಸೇಂದಿ ಇಳಿಸುವ ಮೂಲಕ ಬದುಕನ್ನು ಕಟ್ಟಿಕೊಂಡಿದ್ದರು.

ಈಗ ಸೇಂದಿ ಇಳಿಸುವುದಕ್ಕೆ ನಿಷೇಧ ಹೇರಲಾಯಿತು. ಈಚಲು ಮರಗಳನ್ನು ನಂಬಿ ಕೆಲವು ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಈಚಲು ಮರದ ಗರಿಯಿಂದ ತಯಾರಾಗುತ್ತಿದ್ದ ಚಾಪೆ, ಪೊರಕೆ, ಕಡ್ಡಿಯಿಂದ ಬುಟ್ಟಿ, ತಟ್ಟಿಗಳು, ಜಲ್ಲೆಗಳು ಜೊತೆಗೆ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದರು.

chitradurga

ಆಸರೆಯಾಗಿದ್ದ ಮರಗಳು : ಅಲೆಮಾರಿ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಕೊರಚ ಎಂಬ ಜನಾಂಗದವರು ತಾಲ್ಲೂಕಿನ ವಿವಿಧ ಹಳ್ಳಿಗಳಾದ ಹೇಮದಳ, ಭರಂಪುರ, ಬುಡರುಕುಂಟೆ, ಧರ್ಮಪುರ, ವಿವಿ.ಪುರ ಸೇರಿದಂತೆ ಹಿರಿಯೂರು ನಗರದ ವೇದಾವತಿ ನದಿ ದಡದಲ್ಲಿ ವಾಸಿಸುವ 100ಕ್ಕೂ ಹೆಚ್ಚು ಕುಟುಂಬಗಳು ಈಚಲು ಮರ ನಂಬಿಕೊಂಡು ಜೀವನ ಸಾಗಿಸುತ್ತಿದ್ದವು.

ಮರದ ಗುರಿ ಹಾಗೂ ಕಡ್ಡಿಯನ್ನು ತಂದು ಚಾಪೆ, ಪೊರಕೆ, ಬುಟ್ಟಿ ತಯಾರಿಸಿ ಹಳ್ಳಿಗಳಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು.ಇತ್ತಿಚಿನ ದಿನಗಳಲ್ಲಿ ಈಚಲು ಮರಗಳು ಕಣ್ಮರೆಯಾಗುತ್ತಿದ್ದು, ಈ ಕುಟುಂಬಗಳು ಬದುಕಿಗೆ ಪರ್ಯಾಯ ಮಾರ್ಗ ಹುಡುಕುವುದು ಅನಿವಾರ್ಯವಾಗಿದೆ.

Farmers Not Showing Interest In Phoenix Sylvestris Cultivation

ಪುರಾಣ ಹಿನ್ನೆಲೆ; ವಸಿಷ್ಠ ಮಹರ್ಷಿಗಳು ತೆಂಗಿನ ಮರವನ್ನು ಸೃಷ್ಠಿಸಿದರಂತೆ. ಅವರನ್ನು ವಿರೋಧಿಸುತ್ತಿದ್ದ ವಿಶ್ವಾಮಿತ್ರ ಮುನಿ ಈಚಲು ಮರ ಸೃಷ್ಠಿ ಮಾಡಿದ್ದರು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಸುರ್ಯೋದಯ ಆಗುವುದರ ಒಳಗೆ ಈಚಲು ಮರದಿಂದ ಇಳಿಸುತ್ತಿದ್ದ ನೀರಾ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಿದ್ದರು. ಮುಂಗಾರು ಮಳೆ ಸುರಿಯುವ ಸಮಯದಲ್ಲಿ ಕಾಯಿ ಕಟ್ಟೆ, ಹಳದಿ ಬಣ್ಣಣ ಕಡು ನಸುಗೆಂಪು ಬಣ್ಣಕ್ಕೆ ತಿರುಗಿದ ಈಚಲು ಹಣ್ಣಿನ ರುಚಿ ಸವಿದವರೇ ಬಲ್ಲರು. ಈಚಲು ಗಿಡಗಳನ್ನು ಈಗ ಯಾರು ಬೆಳೆಸುವುದಿಲ್ಲ. ಜಮೀನಿನ ಅಂಚಿನಲ್ಲಿ, ಹಳ್ಳ, ನದಿ ಪಾತ್ರಗಳಲ್ಲಿ ಮಾತ್ರ ಈಚಲು ಮರಗಳು ಉಳಿದಿವೆ.

ಈಚಲು ಮರದ ಗೊನೆಯತ್ತ ಕಲ್ಲು ಬೀಸಿ ಹಣ್ಣನ್ನು ಉದುರಿಸಿ ನಾವು ತಿಂದು ಗೆಳೆಯರಿಗೂ ಕೊಡುತ್ತಿದ್ದ ದೃಶ್ಯ ಇಂದಿಗೂ ನೆನಪಿದೆ. ಎಷ್ಟು ಬಾರಿ ಹಣ್ಣು ತಿನ್ನಲು ಬರಿಗಾಲಲ್ಲಿ ಹೋಗಿ ಮುಳ್ಳು ತುಳಿದು ಪೋಷಕರಿಂದ ಬೈಸಿಕೊಂಡಿದ್ದು, ಹೊಡೆತ ತಿಂದಿದ್ದು ಉಂಟು. ಕೆಲವರು ಈಚಲ ಹಣ್ಣನ್ನು ಶಾಲೆಗಳ ಹತ್ತಿರ ಮಾರಾಟ ಮಾಡಲು ಬರುತ್ತಿದ್ದರು. ಇಂದಿನ ಯುವ ಪೀಳಿಗೆ ಈಗ ಇಂತಹ ಹಣ್ಣುಗಳ ಸವಿಯನ್ನು ಸವಿಯುವುದು ಕಡಿಮೆ.

ಮರ ಕಡಿದು ಜೈಲಿಗೆ; ಹಿರಿಯೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ. ಗೋವಿಂದ ಸ್ವಾಮಿ ನಾಯ್ಡು 1939 ರಲ್ಲಿ ಸೇಂದಿ ನಿಷೇಧಕ್ಕೆ ಆಗ್ರಹಿಸಲು ಈಚಲು ಮರ ಕಡಿದಿದ್ದರಿಂದ ಅವರನ್ನು ಬಂಧಿಸಿ, ಬೆಂಗಳೂರಿನ ಕಾರಾಗೃಹಕ್ಕೆ ಕಳಿಸಲಾಗಿತ್ತು.

ಈ ಹಣ್ಣುಗಳನ್ನು ಮನುಷ್ಯ ಮಾತ್ರವಲ್ಲದೆ ಕುರಿ, ಮೇಕೆಗಳು ಸಹ ತಿನ್ನುತ್ತವೆ. ಪಕ್ಷಿಗಳಿಗೂ ಸಹ ಇದು ಆಹಾರವಾಗಿದೆ. ಗಿಳಿ, ಗೊರವಂಕ ಇತರೆ ಪಕ್ಷಿಗಳು ಹಣ್ಣನ್ನು ಸವಿಯುತ್ತವೆ. ಕೆಲವು ಪಕ್ಷಿಗಳು ಹಣ್ಣನ್ನು ಸೇವಿದು ಬೇರೊಂದು ಕಡೆ ಹೋದಾಗ ಬೀಜವನ್ನು ಹಾಕುವ ಮೂಲಕ ಅಲ್ಲಿಯೂ ಗಿಡಗಳು ಬೆಳೆಯಲು ಕಾರಣವಾಗುತ್ತವೆ.

"ಹಿಂದೆ ಈಚಲು ಮರದಿಂದ ಸೇಂದಿ ತೆಗೆಯಲು ಅನುಮತಿ ಇತ್ತು. ಪ್ರಸ್ತುತ ಸನ್ನಿವೇಶದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಸೇಂದಿ ಇಳಿಸಲು ಪರವಾನಗಿ ಇದೆ. ಉಳಿದಂತೆ ಎಲ್ಲ ಕಡೆ ನಿಷೇಧ ಮಾಡಲಾಗಿದೆ. ಈಚಲುವನಗಳು ಸಂರಕ್ಷಿತ ಎಂದು ಘೋಷಿಸಲ್ಪಟ್ಟಿರುವುದರಿಂದ ನೈಸರ್ಗಿಕವಾಗಿ ಉಳಿದುಕೊಂಡಿವೆ" ಎನ್ನುತ್ತಾರೆ ಅಬಕಾರಿ ಇಲಾಖೆ ಎಸ್ಐ ಕರಿಬಸಪ್ಪ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+