ಇಂದಿನಿಂದ ಚಿತ್ರದುರ್ಗ ನಗರಕ್ಕೆ ಭದ್ರಾ ನೀರು
ಚಿತ್ರದುರ್ಗ, ಅಕ್ಟೋಬರ್ 09 : ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದ ಚಿತ್ರದುರ್ಗ ನಗರದ ಜನತೆಗೆ ಭದ್ರಾ ನೀರು ಆಸರೆಯಾಗಿದೆ. ಚಿತ್ರದುರ್ಗದ ಶಾಂತಿ ಸಾಗರ ಕೆರೆ (ಸೂಳೆಕೆರೆ)ಯಲ್ಲಿ ನೀರಿನ ಕೊರತೆಯಿಂದಾಗಿ ನಗರಕ್ಕೆ ನೀರಿನ ಅಭಾವ ಎದುರಾಗಿತ್ತು.
ಚಿತ್ರದುರ್ಗ ನಗರಕ್ಕೆ ಕುಡಿಯಲು ಭದ್ರಾ ನೀರು ಪೂರೈಕೆ
ಇದೀಗ ಚಿತ್ರದುರ್ಗ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಭದ್ರಾ ಜಲಾಶಯದಿಂದ ಶಾಂತಿ ಸಾಗರ ಕೆರೆಗೆ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಅಕ್ಟೋಬರ್ 9ರಿಂದ ನಗರಕ್ಕೆ ಕುಡಿಯುವ ನೀರು ಹರಿಸಲಾಗುವುದು ಎಂದು ಚಿತ್ರದುರ್ಗ ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ ತಿಳಿಸಿದ್ದಾರೆ.
ಭದ್ರಾ ಅಣೆಕಟ್ಟಿನಿಂದ 2 ಟಿಎಂಸಿ ಅಡಿ ನೀರನ್ನು ನಿರಂತರವಾಗಿ ಶಾಂತಿ ಸಾಗರ ಕೆರೆಗೆ ಹರಿಯುತ್ತಿದ್ದರಿಂದ ಈ ಬಾರಿಯ ಬೇಸಿಗೆ ಅಂತ್ಯದ ವರೆಗೆ ಶಾಂತಿ ಸಾಗರ ಕೆರೆಯಿಂದ ನೀರನ್ನು ನಗರಕ್ಕೆ ಸರಬರಾಜು ಮಾಡಬಹುದಾಗಿದೆ ಎಂದರು.
ನಗರದ ಮುನ್ಸಿಪಲ್ ಕೌನ್ಸಿಲ್ ನಗರದ ಕೊಟ್ಟಿಗೆಹಳ್ಳಿ, ಹಿರೇಕಾಂಡ್ವಾಡಿ ಮತ್ತು ನಗರದಲ್ಲಿರುವ ಇತರೆ ಟ್ಯಾಂಕ್ ಗಳನ್ನು ಸ್ವಚ್ಛಗೊಳಿ ಈ ಟ್ಯಾಂಕ್ ಮೂಲಕ ನೀರು ಹರಿಸಲು ನಗರಸಭೆ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಆದರೆ, ಈ ಟ್ಯಾಂಕ್ ಗಳಿಂದ ಚಿತ್ರದುರ್ಗ ನಗರಕ್ಕೆ ನೀರು ಸರಬರಾಜು ಆಗುವ ಕೆಲ ಮುಖ್ಯ ಪೈಪ್ ಲೈನ್ ಗಳು ಸೋರಿಕೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಜನರು ನೀರು ಸೇವಿಸುವ ಮೊದಲು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಪೈಪ್ ಲೈನ್ ಗಳಲ್ಲಿ ನೀರು ಸೋರಿಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಸಿಟಿ ಮುನ್ಸಿಪಲ್ ಕೌನ್ಸಿಲ್ ಅಧಿಕಾರಿಗಳಿಗೆ ತಿಳಿಸುವಂತೆ ಅವರು ಮನವಿ ಮಾಡಿಕೊಂಡರು.