ಜ. 27ರಿಂದ ಐತಿಹಾಸಿಕ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರನ ಜಾತ್ರೆ ಆರಂಭ: ಫೆ. 7ರಂದು ಬ್ರಹ್ಮರಥೋತ್ಸವ
ಚಿತ್ರದುರ್ಗ, ಜನವರಿ 4: ಎರಡು ವರ್ಷಗಳ ಕೋವಿಡ್ -19 ಹಿನ್ನೆಲೆಯಲ್ಲಿ ಸಾಧಾರಣವಾಗಿ ನಡೆದಿದ್ದ ಜಾತ್ರೆಗಳು ಈ ಬಾರಿ ಅದ್ಧೂರಿಯಾಗಿ ನಡೆಯಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ದಕ್ಷಿಣ ಕಾಶಿ ಶ್ರೀತೇರು ಮಲ್ಲೇಶ್ವರನ ಜಾತ್ರೆ ಜನವರಿ 27ರಿಂದ ಆರಂಭವಾಗೊಂಡು ಫೆಬ್ರವರಿ 12ಕ್ಕೆ ಮುಕ್ತಾಯಗೊಳ್ಳಲಿದೆ. ಬ್ರಹ್ಮ ರಥೋತ್ಸವ ಫೆಬ್ರವರಿ 7ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಮುಜರಾಯಿ ಅಧಿಕಾರಿ ಪ್ರಶಾಂತ್.ಕೆ ಪಾಟೀಲ್ ತಿಳಿಸಿದರು.
ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಶಾಂತ್.ಕೆ ಪಾಟೀಲ್, ಶ್ರೀಸ್ವಾಮಿಯ ರಥೋತ್ಸವವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸೋಣ. ಕೋವಿಡ್ ಸಂಭವ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯಂತೆ ಜಾತ್ರೆ ನಡೆಯಲಿದೆ ಎಂದು ಸಭೆಗೆ ಸೂಚಿಸಿದರು.
ಚಿಕ್ಕಮಗಳೂರು, ಚಿತ್ರದುರ್ಗ ಸುದ್ದಿ; ಕ್ಯಾಬ್ ಚಾಲಕನಿಗೆ ಥಳಿತ, ಅಪಘಾತ
ಜನವರಿ 27ರಂದು ಜಾತ್ರೆ ಆರಂಭವಾಗೊಳ್ಳಲಿದ್ದು ಅಂದು ರಾತ್ರಿ 8ಕ್ಕೆ ಕಂಕಣ ಕಲ್ಯಾಣೋತ್ಸವ, ಕಂಕಣಧಾರಣೆ, ಜ. 28ರಂದು ರಾತ್ರಿ 8ಕ್ಕೆ ಮಂಟಪೋತ್ಸವ, 29ರಂದು ರಾತ್ರಿ 8ಕ್ಕೆ ಗಿಳಿ ವಾಹನೋತ್ಸವ, 30ರಂದು ರಾತ್ರಿ 8ಕ್ಕೆ ಗಂಡಭೇರುಂಡ ವಾಹನೋತ್ಸವ, 31ರಂದು ನವಿಲು ವಾಹನೋತ್ಸವ, ಫೆ. 1ರಂದು ರಾತ್ರಿ 8ಕ್ಕೆ ಸಿಂಹ ವಾಹನೋತ್ಸವ, 2ರಂದು ನಂದಿ ವಾಹನೋತ್ಸವ, 3ರಂದು ರಾತ್ರಿ 8ಕ್ಕೆ ಸರ್ಪ ವಾಹನೋತ್ಸವ, ಫೆ. 4ರಂದು ರಾತ್ರಿ 8ಕ್ಕೆ ಅಶ್ವ ವಾಹನೋತ್ಸವ, 5ರಂದು ಮೂರು ಕಳಸ ಪೂಜೆ/ ಗಜವಾಹನೋತ್ಸವ, 6ರಂದು ದೊಡ್ಡ ಉತ್ಸವ / ಬಸವ ವಾಹನೋತ್ಸವ, ಫೆ. 7ರಂದು ಮಧ್ಯಾಹ್ನ 12ಕ್ಕೆ ಬ್ರಹ್ಮ ರಥೋತ್ಸವ, 9ರಂದುರಾತ್ರಿ 8ಕ್ಕೆ ಕರ್ಪೂದಾರತಿ, 10ರಂದು ರಾತ್ರಿ 8ಕ್ಕೆ ಉಯ್ಯಾಲೋತ್ಸವ, ವಸಂತೋತ್ಸವ, ಓಕುಳಿ ಪಾರ್ವಟೋತ್ಸವ, ಫೆ. 11ರಂದು ಮಧ್ಯಾಹ್ನ 12ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಇನ್ನು ಈ ಜಾತ್ರಾ ಮಹೋತ್ಸವಕ್ಕೆ ಭಕ್ತರು ಧನ, ಧಾನ್ಯ ರೂಪದಲ್ಲಿ ಸಹಾಯ ಮಾಡುವ ಮೂಲಕ ಜಾತ್ರೆಯ ಯಶಸ್ಸಿಗೆ ಪಾತ್ರರಾಗಬೇಕು ಎಂದು ಪ್ರಶಾಂತ್ ಪಾಟೀಲ್ ಮನವಿ ಮಾಡಿದರು.
ಶ್ರೀ ತೇರು ಮಲ್ಲೇಶ್ವರ ದೇವಾಲಯದ ಇತಿಹಾಸ
ಪಾಳೇಗಾರ ವಂಶಸ್ಥ ರಾಜ ಕೆಂಚಪ್ಪ ನಾಯಕ 1446 ರಲ್ಲಿ ನಿರ್ಮಿಸಿರುವ ತೇರುಮಲ್ಲೇಶ್ವರ ಸ್ವಾಮಿ ದೇಗುಲದ ಮೂಲವಿಗ್ರಹ ಕಾಶಿಯಲ್ಲಿ ಇರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಕಾರಣಕ್ಕೆ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.
ಶ್ರೀಶೈಲ ಮಲ್ಲಿಕಾರ್ಜುನ ಪರಮ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀಶೈಲಕ್ಕೆ ನಡೆದುಕೊಂಡು ಹೋಗಿ ದೇವರ ದರ್ಶನ ಮಾಡಿ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕನಸಿನಲ್ಲಿ ಕಾಣಿಸಿಕೊಂಡ ಮಲ್ಲಿಕಾರ್ಜುನ ಸ್ವಾಮಿ ಮಾತು ಕೊಟ್ಟಿದ್ದರ ಪರಿಣಾಮವಾಗಿ ಮಲ್ಲೇಶ್ವರ ಸ್ವಾಮಿ ದೇಗುಲ ಇಲ್ಲಿ ನಿರ್ಮಾಣವಾಗಿದೆ ಎಂಬುದು ಜನರ ವಾಡಿಕೆಯಾಗಿದೆ.