ಕಾಂಗ್ರೆಸ್ ಹೀಗೆ ಮುಂದುವರಿದರೆ ಲಂಗೋಟಿಯೂ ಉಳಿಯಲ್ಲ: ಆರಗ ಜ್ಞಾನೇಂದ್ರ
ಚಿತ್ರದುರ್ಗ, ಜೂನ್ 8 : ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸಗಳಿಲ್ಲ, ತಮ್ಮ ಜವಾಬ್ದಾರಿಯನ್ನು ಮರೆತು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಇಂತಹ ನಡೆಯಿಂದಲೇ ಇಡೀ ದೇಶದಲ್ಲಿ ಕಾಂಗ್ರೆಸ್ ಗೆ ಚಡ್ಡಿ ಬಿಚ್ಚಿ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷವಾಗಿ ಕೆಲಸ ಮಾಡುವ ಶಕ್ತಿ ಸಹ ಅವರಿಗಿಲ್ಲ. ಹೀಗೆ ಮಾತಾಡುತ್ತಾ, ಓಡಾಡಿಕೊಂಡು ಇದ್ದರೆ, ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಲಂಗೋಟಿಯನ್ನು ಬಿಚ್ಚಿ ಕಳಿಸಲಿದ್ದಾರೆ. ಕಾಂಗ್ರೆಸ್ ಇಷ್ಟು ದಿನ ಆಡಳಿತ ನಡೆಸಿದ ಪಕ್ಷವಾಗಿದೆ. ಆದರೆ ಅವರು ಹೊಣೆಗಾರಿಕೆ ಮರೆತಿದ್ದಾರೆ, ಮನಸೋ ಇಚ್ಛೆ ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಹಿಂದುತ್ವದ ಹೆಸರೇಳಿ ಅಧಿಕಾರ ನಡೆಸುತ್ತಿದೆ ಎಂಬ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ "ಯಾರನ್ನೋ ದುರ್ಬಳಕೆ ಮಾಡಿಕೊಂಡು ಸರ್ಕಾರ ನಡೆಸುವ ದರಿದ್ರತನ ನಮಗೆ ಇಲ್ಲ. ಸರ್ಕಾರ ನೀತಿ ನಿಯಮದ ಪ್ರಕಾರ ಬೊಮ್ಮಾಯಿ ಅವರ ನೇತೃತ್ವದಲ್ಲಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ" ಎಂದು ಹೇಳುವ ಮೂಲಕ ಮುತಾಲಿಕ್ ಹೇಳಿಕೆಗೆಲ್ಲ ಪ್ರತಿಕ್ರಿಯೆ ನೀಡಲಾಗುವುದಿಲ್ಲ" ಎಂದರು

ಜೆಡಿಎಸ್-ಕಾಂಗ್ರೆಸ್ ಜಗಳದ ಮಧ್ಯೆ ಬಿಜೆಪಿ ಸೇಫ್
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಕೇಳಿದ್ದಕ್ಕೆ, " ಅವರೆಡು ಪಕ್ಷಗಳು ಯಾವಾಗ ಜೊತೆಯಾಗುತ್ತಾರೆ, ಯಾವಾಗ ಬೇರೆ ಆಗುತ್ತಾರೋ ಗೊತ್ತಿಲ್ಲ. ಅವರು ಆಫರ್ ಕೊಡೋದು, ಇವರು ತಿರಸ್ಕಾರ ಮಾಡೋದು, ಸ್ವೀಕಾರ ಮಾಡುವುದು ಅವರಿಬ್ಬರಿಗೆ ಬಿಟ್ಟ ವಿಚಾರ, ಇವರಿಬ್ಬರ ಜಗಳದ ನಡುವೆ ನಾವಂತೂ ಸೇಫ್ ಆಗಿದ್ದೇವೆ. ಬಿಜೆಪಿ ಪಕ್ಷ ಭದ್ರವಾಗಿದೆ. ರಾಜ್ಯಸಭೆಯ 3 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮನೆಗಾಗಿ ಸಾಲ ಮಾಡಿಲ್ಲ
ರಾಜ್ಯದ ಅಭಿವೃದ್ಧಿಗಾಗಿ ಬಿಎಸ್ ಯಡಿಯೂರಪ್ಪ ಆಡಳಿತದಲ್ಲಿ ಸಾಲ ಆಗಿರಬಹುದು. ರಾಜ್ಯದ ಏಳಿಗಾಗಿ ಏನು ಬೇಕೋ ಅದನ್ನು ಯಡಿಯೂರಪ್ಪ ಮಾಡಿದ್ದಾರೆ. ಸರಕಾರ ಅಂದಮೇಲೆ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಸಾಲ ಮಾಡಲಾಗುತ್ತದೆ, ಹಾಗೆಯೇ ತೀರಿಸಲಾಗುತ್ತದೆ. ಅವರೇನು ಮನೆಗೆ ಸಾಲ ಮಾಡಿದರಾ? ರಾಜ್ಯದ ಏಳಿಗೆಗೆ ಏನೋ ಮಾಡಬೇಕು ಅದನ್ನು ಬಿಎಸ್ವೈ ಮಾಡಿದ್ದಾರೆ. ಅವರ ವಿರುದ್ಧ ಈ ರೀತಿ ಲಘುವಾಗಿ ಟೀಕಿಸಬಾರದು . ಸಿದ್ಧರಾಮಯ್ಯ ಕಾಲದಲ್ಲಿ ಸಾಲವೇ ಮಾಡಿಲ್ಲವೇ? ದೇವಲೋಕವನ್ನೇ ಇಳಿಸಿದಂತೆ ಮಾತಾಡ್ತಾರೆ. ಸಿದ್ಧರಾಮಯ್ಯ ಆಡಳಿತದಲ್ಲೂ ಟೆಂಡರ್ ಹಾಕಿ ಕೆಲಸ ಮಾಡಿಸಿದ ಗುತ್ತಿಗೆದಾರರಿಗೆ ಬಿಲ್ ಕೊಡದೆ ಸತಾಯಿಸಿದ್ದು ಜನ ಮರೆತಿಲ್ಲ ಎಂದರು.

ಬೊಮ್ಮಾಯಿಯಿಂದ ಸಮರ್ಥ ಆಡಳಿತ
ಬಿ.ವೈ.ವಿಜಯೇಂದ್ರ ಮುಂದಿನ ಸಿಎಂ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವರು, ಇದೆಲ್ಲಾ ವದಂತಿಯಷ್ಟೇ, ಸಿಎಂ ಖುರ್ಚಿ ಖಾಲಿ ಇಲ್ಲ, ಬಸವರಾಜ ಬೊಮ್ಮಾಯಿ ಇದ್ದಾರೆ. ಅವರು ಸಮರ್ಥ ಆಡಳಿತ ನೀಡುತ್ತಿದ್ದಾರೆ. ಕರ್ನಾಟಕದ ರಾಜ್ಯದ ಏಳಿಗೆಯನ್ನು ಮಾಡುತ್ತಿದ್ದಾರೆ, ನಾವೆಲ್ಲರೂ ಅವರಿಗೆ ಸಹಕಾರಿಯಾಗಿ ನಿಂತಿದ್ದೇವೆ ಎಂದು ತಿಳಿಸಿದರು.

ಭಯೋತ್ಪಾದಕನ ಬಂಧನ: ತನಿಖೆ ಚುರುಕು
ಕಳೆದ ಎರಡು ವರ್ಷಗಳಿಂದ ಆತ ಬೆಂಗಳೂರಿನಲ್ಲಿದ್ದ ಎಂದು ಹೇಳಲಾಗುತ್ತಿದೆ. ಆತನನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ, ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ. ಮತ್ತು ಇಲ್ಲಿಆತನಿಗೆ ಕಳೆದ ಎರಡು ವರ್ಷಗಳಿಂದ ಯಾರು ಆಶ್ರಯ ನೀಡಿದ್ದಾರೆ, ಆತ ಯಾರ ಜೊತೆ ಸಂಪರ್ಕದಲ್ಲಿದ್ದ, ಇಲ್ಲಿ ಏನೇನು ಮಾಡುತ್ತಿದ್ದ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಇದಕ್ಕಿಂತ ಹೆಚ್ಚಿನ ಮಾಹಿತಿ ತಿಳಿಸಲಾಗುವುದಿಲ್ಲ ಎಂದು ತಿಳಿಸಿದರು.
(ಒನ್ಇಂಡಿಯಾ ಸುದ್ದಿ)











Click it and Unblock the Notifications