ಮೊಳಕಾಲ್ಮೂರು ಕ್ಷೇತ್ರ : ಉಗ್ರಪ್ಪ, ಶ್ರೀರಾಮುಲು ನೇರ ಪೈಪೋಟಿ?
Recommended Video

ಚಿತ್ರದುರ್ಗ, ಏಪ್ರಿಲ್ 09 : ಚಿತ್ರದುರ್ಗ ಜಿಲ್ಲೆಯ ಚುನಾವಣಾ ಕಣ ರಂಗೇರಿದೆ. ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಜಿಲ್ಲೆಯ ಮೊಳಕಾಲ್ಮೂರು ಕೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಪೈಪೋಟಿ ನೀರಿಕ್ಷಿಸಲಾಗಿದೆ.
ಬಿ. ಶ್ರೀರಾಮುಲು ಅವರನ್ನು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಪ್ರಚಾರವನ್ನು ತೀವ್ರಗೊಳಿಸಿದೆ. ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಬಯಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ವಿ.ಎಸ್.ಉಗ್ರಪ್ಪ ಕಳೆದ ಮೂರು ನಾಲ್ಕು ವರ್ಷಗಳಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಕ್ಷೇತ್ರದ ಮತದಾರರ ಜೊತೆಯಲ್ಲಿ ನಿರಂತರ ಸಂಪರ್ಕ ಸಾಧಿಸಿದ್ದಾರೆ. ಈಗ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದು, ಬಹುತೇಕ ಟಿಕೆಟ್ ಸಿಗುವುದು ಖಚಿತವಾಗಿದೆ.
ಬಿ. ಶ್ರೀರಾಮುಲು ಅವರು ಎದುರಾಳಿ ಎಂಬುದು ಖಚಿತವಾದ ಬಳಿಕ ಉಗ್ರಪ್ಪ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆಪ್ತರಾದ ಕಾರಣಕ್ಕೆ ಉಗ್ರಪ್ಪ ಅವರು ಟಿಕೆಟ್ ಪಡೆಯುವ ಸಾಧ್ಯತೆ ಇದೆ.

ಶ್ರೀರಾಮುಲು ಅವರು ಅಭ್ಯರ್ಥಿಯಾಗಿ ಘೋಷಣೆ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ, ಮಾಜಿ ಸಂಸದ ಎನ್.ವೈ. ಹನುಮಂತಪ್ಪ ಮತ್ತು ಅವರ ಕುಟುಂಬದ ಸದಸ್ಯರ ಜೊತೆಗಿನ ಸಂಬಂಧ ಅಷ್ಟಕಷ್ಟೇ ಇರುವಾಗ ಬಿ. ಶ್ರೀರಾಮುಲು ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟಸಾಧ್ಯ.
ತನಗೆ ಪ್ರಬಲ ಎದುರಾಳಿ ಬಿ. ಶ್ರೀರಾಮುಲು ಆಗಿರುವ ಹಿನ್ನಲೆಯಲ್ಲಿ ಕ್ಷೇತ್ರದತ್ತ ವಿ.ಎಸ್.ಉಗ್ರಪ್ಪ ಅವರು ವಿಶೇಷ ಗಮನ ಹರಿಸಿದ್ದಾರೆ. ಶನಿವಾರ ರಾತ್ರಿಯಿಂದಲೇ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಇಬ್ಬರು ಅಭ್ಯರ್ಥಿಗಳು ವಲಸಿಗರು
ಮೊಳಕಾಲ್ಮೂರು ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಇಬ್ಬರೂ ಹೊರಗಿನವರು. ಬಿ. ಶ್ರೀರಾಮುಲುಗೆ ಎನ್.ವೈ. ಕುಟುಂಬ ಬಾಲ್ಯದಿಂದ ಪರಿಚಿತ. ವಿ.ಎಸ್. ಉಗ್ರಪ್ಪಗೆ ಜಾತಿ ಸಂಬಂಧಗಳೇ ಮೂಲ.
ಇನ್ನೂ ಸ್ಥಳೀಯವಾಗಿರುವ ಶಾಸಕ ತಿಪ್ಪೇಸ್ವಾಮಿ ಮನೆ ಮನೆಯಲ್ಲೂ ಪರಿಚಿತ. ಬಿ. ಶ್ರೀರಾಮುಲು ಆಪ್ತರಾಗಿದ್ದರೂ ಅಧಿಕಾರದ ರುಚಿ, ಗತ್ತು, ಗಮ್ಮತ್ತು ಅನುಭವಿಸಿರುವ ಇವರು, ಸ್ಥಳೀಯ ಎಂಬ ಅಂಶವನ್ನು ಒಳ್ಳೆಯತನ, ಸರಳತೆ, ಭ್ರಷ್ಟಾಚಾರ ರಹಿತ, ಆಡಳಿತ ನೀಡಿದ ವಿಚಾರಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಿದ್ದಾರೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಜೆಡಿಎಸ್ನತ್ತ ಮುಖ ಮಾಡಿದ್ದಾರೆ.
ಜೆಡಿಎಸ್ ಟಿಕೆಟ್ ಸಿಗದಿದ್ದಲ್ಲಿ ಮುಂದೇನು? ಎನ್ನುವ ಪ್ರಶ್ನೆ ಅವರನ್ನು ತೀವ್ರವಾಗಿ ಕಾಡುತ್ತಿದೆ. ಭಾನುವಾರ ಮಧ್ಯಾಹ್ನದಿಂದ ಅವರು ತಮ್ಮ ಆಪ್ತರ ಸಭೆಗಳನ್ನು ನಡೆಸುತ್ತಿದ್ದಾರೆ.

ಸ್ಥಳೀಯರೇ ಅಭ್ಯರ್ಥಿಯಾಗಲಿ
ಬಳ್ಳಾರಿಯಿಂದ ಬಿ. ಶ್ರೀರಾಮುಲು, ಬೆಂಗಳೂರಿನಿಂದ ವಿ.ಎಸ್. ಉಗ್ರಪ್ಪ ಕ್ಷೇತ್ರಕ್ಕೆ ಕಾಲಿಟ್ಟರೆ ಅವರ ಜೊತೆ ಜೊತೆಯಲ್ಲಿ ಅವರ ಆಪ್ತರು, ಬೆಂಬಲಿಗರು ಕ್ಷೇತ್ರದಲ್ಲಿ ಬೀಡುಬಿಡಲಿದ್ದಾರೆ. ಆಗ, ಪರಸ್ಪರ ಕಿತ್ತಾಟ ಹೆಚ್ಚಾಗಲಿದೆ. ಆದ್ದರಿಂದ, ಸ್ಥಳೀಯರೇ ಅಭ್ಯರ್ಥಿಯಾಗಲಿ ಎಂದು ಕ್ಷೇತ್ರದ ಜನರು ಅಭಿಪ್ರಾಯ ಪಡುತ್ತಿದ್ದಾರೆ.
ವಿ.ಎಸ್. ಉಗ್ರಪ್ಪ ಮತ್ತು ಬಿ.ಶ್ರೀರಾಮುಲು ಮಧ್ಯೆ ನೇರ ಪೈಪೋಟಿ ನಿರೀಕ್ಷಿಸಲಾಗಿದೆ. ಯಾರು ಗೆಲ್ಲಲಿದ್ದಾರೆ? ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಯಾರೇ ಸೋಲಲಿ, ಗೆಲ್ಲಲಿ ಅವರ ರಾಜಕೀಯ ಭವಿಷ್ಯವೇನು? ಎನ್ನುವ ಚರ್ಚೆ ತೀವ್ರಗೊಂಡಿದೆ.

ಎಸ್.ತಿಪ್ಪೇಸ್ವಾಮಿಗೆ ಗೆಲುವು
2013ರ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿದ್ದ ಎಸ್.ತಿಪ್ಪೇಸ್ವಾಮಿ ಅವರು ಜಯಗಳಿಸಿದ್ದರು.
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎನ್.ವೈ.ಗೋಪಾಲಕೃಷ್ಣ ಸೋಲು ಕಂಡಿದ್ದರು. ಬಳಿಕ 2014ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡರು.
ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಜೊತೆ ಶ್ರೀರಾಮುಲು ಅವರು ವಿಲೀನಗೊಳಿಸಿದರೂ ತಿಪ್ಪೇಸ್ವಾಮಿ ಅವರು ಬಿಜೆಪಿ ಸೇರಿರಲಿಲ್ಲ. ಆದ್ದರಿಂದ ಈ ಬಾರಿಯ ಚುನಾವಣೆಗೆ ಶ್ರೀರಾಮುಲು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ಜೆಡಿಎಸ್ ಅಭ್ಯರ್ಥಿ ಯಾರು?
ಮೊಳಕಾಲ್ಮೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎತ್ತಿನಹಟ್ಟಿ ಗೌಡರು ಸ್ಪರ್ಧಿಸಲಿದ್ದಾರೆ. ಸುಮಾರು 30 ವರ್ಷಗಳಿಂದ ಎತ್ತಿನಹಟ್ಟಿ ಗೌಡರು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯಲ್ಲಿ ಅವರು ಕಾಂಗ್ರೆಸ್ ಮತ್ತು ಬಿಜೆಪಿಗೆ ಪೈಪೋಟಿ ನೀಡಬಲ್ಲರೇ? ಎಂದು ಕಾದು ನೋಡಬೇಕಾಗಿದೆ.












Click it and Unblock the Notifications