ಮೋದಿಯದ್ದು 'ಖಾಲಿ ಬಾತ್' ನಮ್ಮದು 'ಕಾಮ್ ಕಿ ಬಾತ್': ಸಿಎಂ
ಚಾಮರಾಜನಗರ, ಜನವರಿ 10: ಪ್ರಧಾನಿ ಮೋದಿ 'ಮನ್ ಕಿ ಬಾತ್, ಮನ್ ಕಿ ಬಾತ್' ಅಂತಾರೆ ಆದರೆ ಅವರದು 'ಖಾಲಿ ಬಾತ್' ಅಷ್ಟೆ, ಆದರೆ ನಾವು ಹಾಗಲ್ಲ ನಮ್ಮದು ಯಾವಾಗಲೂ 'ಕಾಮ್ ಕಿ ಬಾತ್' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಿ ಅವರನ್ನು ಟೀಕಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ 436 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿ ಅವರು ಅಧಿಕಾರಕ್ಕೆ ಬಂದಿದ್ದಾಗ ಲೂಟಿ ಹೊಡೆದಿದ್ದಾರೆ ಅದನ್ನು ನೀವೆಲ್ಲಾ ನೋಡಿದ್ದೀರಿ ಈಗ ಮತ್ತೆ ಅವರಿಗೆ ಅಧಿಕಾರ ಕೊಡುತ್ತೀರಾ? ಎಂದು ಕೇಳಿದರು.
'ಬಿಜೆಪಿ, ಆರ್ ಎಸ್ ಎಸ್, ಬಜರಂಗದಳದವರೇ ಉಗ್ರಗಾಮಿಗಳು'
ಕಾಂಗ್ರೆಸ್ಗೆ ಯಾವುದೇ ಜಾತಿ, ಧರ್ಮ, ಮತದ ಹಂಗಿಲ್ಲ, ಕರ್ನಾಟಕದ ಸರ್ವರನ್ನೂ ಏಕರೀತಿಯಾಗಿ ಕಾಣುವ, ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ಪಕ್ಷ ಕಾಂಗ್ರೆಸ್ ಎಂದ ಅವರು , ನಮ್ಮ ಸರ್ಕಾರ ಬಸವಣ್ಣ, ಅಂಬೇಡ್ಕರ್, ಮಹಾತ್ಮಾ ಗಾಂಧಿ ಅವರ ವಿಚಾರಗಳ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂದರು.
ಅನಂತ್ ಕುಮಾರ್ ಹೆಗಡೆಗೆ ನೊಟೀಸ್ ನೀಡಲಿಲ್ಲ ಏಕೆ?
ಆದರೆ ಬಿಜೆಪಿ ಪಕ್ಷಕ್ಕೆ ಸಂವಿಧಾನದ ಮೇಲೆ ಗೌರವ, ನಂಬಿಕೆ ಇಲ್ಲ ಎಂದ ಅವರು ಕೇಂದ್ರ ಮಂತ್ರಿ ಅನಂತ್ಕುಮಾರ್ ಅವರು ಸಂವಿಧಾನದ ಬಗ್ಗೆ ಅಗೌರವದ ಮಾತನ್ನಾಡಿದಾಗ ಮೋದಿ ಆಗಲಿ, ಅಮಿತ್ ಶಾ ಆಗಲಿ ಅದನ್ನು ಖಂಡಿಸಲಿಲ್ಲ ಏಕೆ?, ಅವರಿಗೆ ಪಕ್ಷದಿಂದ ನೊಟೀಸ್ ಯಾಕೆ ನೀಡಲಿಲ್ಲ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಭಿಕ್ಷೆ ನೀಡುತ್ತಿಲ್ಲ, ನಮ್ಮ ಹಣವನ್ನೇ ಕೊಡುತ್ತಿದ್ದೀರಿ
ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಅಮಿತ್ ಶಾ ಅವರು ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು 'ಕೇಂದ್ರದಿಂದ ರಾಜ್ಯಕ್ಕೆ 2 ಲಕ್ಷ ಕೋಟಿ ಅನುದಾನ ನೀಡಲಾಗಿದೆ ಸಿದ್ದರಾಮಯ್ಯ ಅವರು ಅನುದಾನದ ಬಳಕೆಯ ಲೆಕ್ಕ ಕೊಡಬೇಕು ಎಂದು ಅಮಿತ್ ಶಾ ಕೇಳಿದ್ದಾರೆ, ಆದರೆ ಅವರೇನು ಆ ಹಣವನ್ನು ತಮ್ಮ ಮನೆಯಿಂದ ಕೊಟ್ಟಿದ್ದಾರೆಯೇ ಅದು ಜನರ ತೆರಿಗೆ ಹಣ ಕೇಂದ್ರ ಸರ್ಕಾರ ನಮಗೆ ಸಾಂವಿಧಾನಿಕವಾಗಿ ನಮಗೆ ಬರಬೇಕಾದ ಪಾಲನ್ನು ಕೊಟ್ಟಿದೆ ಯಾವುದೇ ಭಿಕ್ಷೆ ಕೊಟ್ಟಿಲ್ಲ ಎಂದು ಅಬ್ಬರಿಸಿದರು.
ಯಡಿಯೂರಪ್ಪಗೆ ಫಲಿತಾಂಶ ಗೊತ್ತಿದೆ
ಈಗ ಬಿಜೆಪಿ 'ಮಿಷನ್ -150' ಆದರೆ ಅದು ಆಗುವುದು 'ಮಿಷನ್-50' ಅಷ್ಟೇ ಎಂದು ಸಿದ್ದರಾಮಯ್ಯ ಅವರು ವ್ಯಂಗ್ಯ ಮಾಡಿದರು. ರಾಜ್ಯದಲ್ಲಿ ನಡೆದ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿಗೆ ಗೊತ್ತಾಗಿ ಹೋಗಿದೆ ಈ ಬಾರಿ ಬಿಜೆಪಿಗೆ ಸೋಲು ಖಚಿತ ಎಂಬುದು ಎಂದು ಸಿದ್ದರಾಮಯ್ಯ ಹೇಳಿದರು.
ಈ ವರೆಗೆ 26 ಜಿಲ್ಲೆಗಳನ್ನು ತಿರುಗಿದ್ದೇನೆ
ವೇದಿಕೆ ಮೇಲಿದ್ದ ಹಳೆಯ ಮಿತ್ರ ಕೊಳ್ಳೆಗಾಲ ಶಾಸಕ ಜಯಣ್ಣ ಅವರನ್ನು ವಯಸ್ಸು ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಜಯಣ್ಣನಿಗಿಂತಲೂ 5 ವರ್ಷ ದೊಡ್ಡವನು ನಾನು, ಈಗ 71 ವರ್ಷ ವಯಸ್ಸು ನನಗೆ, ಆದರೆ ಜಯಣ್ಣನಿಗಿಂತಲೂ ಗಟ್ಟಿ ಮುಟ್ಟಾಗಿದ್ದೇನೆ, ಅಲ್ವಾ? ಎಂದು ನೆರಿದಿದ್ದ ಜನರನ್ನು ಕೇಳಿದರು. ಡಿಸೆಂಬರ್ 13 ರಂದು ಸಾಧನಾ ಸಮಾವೇಶ ಪ್ರಾರಂಭಿಸಿ ಈವರೆಗೆ 26 ಜಿಲ್ಲೆಗಳನ್ನು ಸುತ್ತಿದ್ದೇನೆ, ಇನ್ನು ಕೆಲವೇ ದಿನದಲ್ಲಿ ಉಳಿದ ಜಿಲ್ಲೆ ಮುಗಿಸಿ, ಮಾರ್ಚ್ನಲ್ಲಿ ಮತ್ತೊಂದು ಸುತ್ತಿನ ಪ್ರಚಾರಕ್ಕೆ ಬರುತ್ತೇನೆ ಎಂದರು.
ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ 1000 ಕೋಟಿ
ಚಾಮರಾಜನಗರದ ಅಭಿವೃದ್ಧಿಗೆ 4000 ಕೋಟಿ ಅನುದಾನವನ್ನು ನಮ್ಮ ಸರ್ಕಾರ ನೀಡಿದೆ ಎಂದು ಹೇಳಿದ ಸಿದ್ದರಾಮಯ್ಯ ಅವರು ಜಿಲ್ಲೆಯ ಪ್ರತಿ ಕ್ಷೇತ್ರಕ್ಕೂ 1000 ಕೋಟಿ ಅನುದಾನ ಹಂಚಿಕೆ ಮಾಡಿದೆ. ಮುಂದಿನ ಬಾರಿ ಅನುದಾನ ಇನ್ನೂ ಹೆಚ್ಚಿಸಲಾಗುವುದು ಎಂದರು.