ಅಕ್ಟೋಬರ್ 1ರಂದು ವಿವಿ ಸಾಗರಕ್ಕೆ ಭದ್ರಾ ನೀರು: ಬಿಎಸ್ ವೈ ಭರವಸೆ
ಚಿತ್ರದುರ್ಗ, ಸೆಪ್ಟೆಂಬರ್ 4: "ಚಿತ್ರದುರ್ಗ ಜಿಲ್ಲೆಯ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ಟೋಬರ್ 1ರಂದು ವಿವಿ ಸಾಗರಕ್ಕೆ ನೀರು ಹರಿಸಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಇಂದು ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ವಿವಿ ಸಾಗರ ಹೋರಾಟ ಸಮಿತಿಯ ಪದಾಧಿಕಾರಿಗಳು ಸಿಎಂ ಭೇಟಿ ಮಾಡಿದರು. ನಂತರ ಭದ್ರಾ ಕಾಮಗಾರಿ ಕುರಿತು ರೈತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಯಡಿಯೂರಪ್ಪ, ಕಾಮಗಾರಿ ವಿಳಂಬಕ್ಕೆ ಕಾರಣಗಳನ್ನು ಕೇಳಿದರು.
ಭದ್ರಾ ಯೋಜನೆ ಮುಗಿಯುವ ಮುನ್ನವೇ ಕುಸಿದ ನಾಲೆ ತಡೆಗೋಡೆ
"ಕಾಮಗಾರಿಗೆ ಸಾಕಷ್ಟು ತೊಡಕುಗಳು ಎದುರಾದ್ದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ ನೀರು ಹರಿಸಲು ಸಾಧ್ಯವಾಗಲಿಲ್ಲ" ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, "ಅಧಿಕಾರಿಗಳು ಯಾವುದೇ ಕಾರಣಗಳನ್ನು ಹೇಳದೆ, ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ, ವಿವಿ ಸಾಗರಕ್ಕೆ ಅಕ್ಟೋಬರ್ 1 ರಂದು ನೀರು ಹರಿಸಬೇಕು. ಇದಕ್ಕೆ ನಾನೇ ಚಾಲನೆ ನೀಡುತ್ತೇನೆ" ಎಂದು ಸಿಎಂ ಖಡಕ್ ಸಂದೇಶ ನೀಡಿದರು.
ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, "ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಬಹುಬೇಗ ಪೂರ್ಣಗೊಳಿಸಿ, ತಾವೇ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಲು ಚಾಲನೆ ನೀಡಬೇಕು" ಎಂದು ಕೇಳಿಕೊಂಡರು.
ಸಭೆಯಲ್ಲಿ ಸಂಸದ ನಾರಾಯಣಸ್ವಾಮಿ ಅವರು "ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳೇ ನೇರ ಹೊಣೆ. ರೈತರಿಗೆ ಭರವಸೆ ನೀಡುವುದನ್ನು ಬಿಟ್ಟು ವಾಸ್ತವ ಸ್ಥಿತಿ ತಿಳಿಸಿ ನೀರು ಹರಿಸಲು ನಿಗದಿತ ಸಮಯವನ್ನು ಸಿಎಂ ಅವರಿಗೆ ತಿಳಿಸಿ ಅದರಂತೆ ನಡೆದುಕೊಳ್ಳಬೇಕು" ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಶಾಸಕ ಗೂಳಿಹಟ್ಟಿ ಡಿ ಶೇಖರ್, ನಾ ತಿಪ್ಪೇಸ್ವಾಮಿ, ಡಿ.ಟಿ. ಶ್ರೀನಿವಾಸ್, ಕಸವನಹಳ್ಳಿ ರಮೇಶ್, ಎಚ್.ಆರ್. ತಿಮ್ಮಯ್ಯ, ಭದ್ರಾ ಅಧಿಕಾರಿಗಳು ಸೇರಿದಂತೆ ಹಿರಿಯೂರಿನ ವಿವಿ ಸಾಗರ ಹೋರಾಟ ಸಮಿತಿಯ ಮುಖಂಡರು ಭಾಗವಹಿಸಿದ್ದರು.
ಮುಗಿಯದ ಭದ್ರಾ ಕಾಮಗಾರಿ; ಅಧಿಕಾರಿಗಳಿಗೆ ರೈತರಿಂದ ತರಾಟೆ
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ಜಾರಿಗೆ ತಂದ ನೀರಾವರಿ ಯೋಜನೆಗಳೆಲ್ಲ ಮುಗಿದಿದ್ದು, ಚಿತ್ರದುರ್ಗದ ಭದ್ರಾ ಯೋಜನೆ ಮಾತ್ರ ಮುಗಿಯದೆ, ಕಾಮಗಾರಿ ವಿಳಂಬವಾಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆರೋಪಿಸಿದ್ದರು.