ಮಂತ್ರಿಸ್ಥಾನ ಸಿಗದಿದ್ದಕ್ಕೆ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಬೇಸರ
ಚಿತ್ರದುರ್ಗ, ಫೆಬ್ರವರಿ 01: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆಯೇ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಜಾಸ್ತಿಯಾಗುತ್ತಲೇ ಇದೆ. ಸದ್ಯ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳತ್ತ ಎಲ್ಲರ ಚಿತ್ತ ನೆಟ್ಟಿದೆ.
ಅದರಲ್ಲಿ ಕೆಲವು ಹಿರಿಯ ಶಾಸಕರು ತಮ್ಮ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಇಲ್ಲದಿರುವುದಕ್ಕೆ ಬೇಸರಗೊಂಡಿದ್ದಾರೆ. ಈ ಬಾರಿಯ ಸಚಿವ ಸ್ಥಾನ ಕೈ ತಪ್ಪುವುದು ಪಕ್ಕಾ ಎಂದು ಖಚಿತ ಪಡಿಸಿಕೊಂಡಿರುವ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗಕ್ಕೆ ನೂತನ ಎಸ್ಪಿ; ಓಬವ್ವನ ಮಣ್ಣಲ್ಲಿ ಮಹಿಳಾ ಅಧಿಕಾರಿಗಳ ಆಡಳಿತ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ತಿಪ್ಪಾರೆಡ್ಡಿ, ""ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆಲವು ಹೆಸರುಗಳು ಪ್ರಸ್ತಾಪವಾಗಿದೆ. ನಮಗೂ ಅವಕಾಶ ಮಾಡಿಕೊಡಬೇಕು ಎಂದು ಪಕ್ಷದ ವೇದಿಕೆ, ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮುಂದೆ ಮನವಿ ಮಾಡಿದ್ದೇವೆ'' ಎಂದರು.
""ಜೇಷ್ಠತೆ ಆಧಾರದ ಮೇಲೆ ಮಂತ್ರಿ ಸ್ಥಾನ ನೀಡುವುದಾದರೆ, ಬಿಜೆಪಿ ಶಾಸಕರ ಪಟ್ಟಿಯಲ್ಲಿ ನಾನು ಕೂಡಾ ಹಿರಿಯವನಾಗಿದ್ದೇನೆ. ಕಳೆದ ಅವಧಿಯಲ್ಲಿದಾವಣಗೆರೆ, ಚಿತ್ರದುರ್ಗದಿಂದ ಪಕ್ಷದ ಏಕೈಕ ಅಭ್ಯರ್ಥಿಯಾಗಿ ಗೆದ್ದಿದ್ದೇನೆ'' ಎಂದು ತಿಳಿಸಿದರು.
26-27 ವರ್ಷಗಳಿಂದ ನಾವು ಗೆಲ್ಲುತ್ತಾ ಬಂದಿದ್ದೇನೆ, ನಾವೆಲ್ಲಾ ಹಿಂದುಳಿದ ವರ್ಗಕ್ಕೆ ಸೇರಿದವರು. ವಿಧಾನ ಸಭೆಯಲ್ಲಿ ಬಜೆಟ್ ಬಿಲ್ ಪಾಸ್ ಮಾಡುವುದಷ್ಟೇ ನಮ್ಮ ಕೆಲಸವಾ? ಎಂದು ಅನೇಕರು ನಮಗೆ ಈ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಹೇಳಿದರು.
"ಸಂಪುಟಕ್ಕೆ 10+3, ಆ ಮೂರರಲ್ಲಿ ನಾನೂ ಇರಬಹುದು"; ವಿಶ್ವನಾಥ್ ಭರವಸೆ
ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 85% SC, ST, ಹಿಂದುಳಿದ ವರ್ಗಗಳ ಜನ ಇದ್ದಾರೆ. ನಮ್ಮಂತಹ ಹಿರಿತನ, ಪಕ್ಷದ ನಿಷ್ಠೆ ಹೊಂದಿರುವವರಿಗೆ ಸಚಿವ ಸ್ಥಾನ ನೀಡದೇ ಇರುವಂಥದ್ದು ನಿಜಕ್ಕೂ ಮನಸ್ಸಿಗೆ ನೋವಾಗಿದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಕೇವಲ ಪಕ್ಷ ಸಂಘಟನೆಯಲ್ಲಿಯೇ ನಮ್ಮ ಶ್ರಮ ಮುಗಿದು ಹೋಗಿದೆ. ಎಲ್ಲಾ ವರ್ಗಗಳ ಸೇವೆ ಮಾಡುವ ಅವಕಾಶ ಸಿಗದಿರುವಂಥದ್ದು ನಮ್ಮ ವ್ಯಥೆ. ನಾವು ನಡೆದು ಬಂದ ಹಾದಿಯನ್ನು ನೆನಪು ಮಾಡಿಕೊಂಡರೆ ನೋವಾಗುತ್ತದೆ. ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ನಮ್ಮ ಕಡೆ ಗಮನ ಹರಿಸಿದರೆ ನಮಗೆ ನ್ಯಾಯ ಸಿಗುತ್ತದೆ ಎಂದರು.