"ಅಂದು ಚಪ್ಪಾಳೆ, ಇಂದು ದೀಪ... ಇವೆಲ್ಲ ದೇಶದ ದುರಂತ"
ಚಿತ್ರದುರ್ಗ, ಏಪ್ರಿಲ್ 03: ದೇಶಾದ್ಯಂತ ಕೊರೊನಾ ವ್ಯಾಪಿಸುತ್ತಿದ್ದು, ಈ ಕಾರಣಕ್ಕೆ ಕಳೆದ ಮಾರ್ಚ್ 22ರಂದು ಜನತಾ ಕರ್ಫ್ಯೂ ಜಾರಿ ಮಾಡಿದ್ದರು. ಅಂದು ಸಂಜೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದ್ದರು. ನಂತರ 21 ದಿನಗಳ ಕಾಲ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಯಿತು. ಇಂದು ಪ್ರಧಾನಿ ಮೋದಿ ಇದೇ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಮನೆಯ ಲೈಟ್ ಆಫ್ ಮಾಡಿ ದೀಪ ಹಚ್ಚುವ ಮೂಲಕ ಬೆಂಬಲ ಕಾರ್ಯಕ್ರಮಕ್ಕೆ ಕರೆ ನೀಡಿದ್ದಾರೆ.
ಇದನ್ನು ವಿರೋಧಿಸಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ. ಶಿವು ಯಾದವ್ ವಾಗ್ದಾಳಿ ನಡೆಸಿದ್ದಾರೆ. "ಈ ಸಮಯದಲ್ಲಿ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸುತ್ತೇನೆ ಎಂದು ಹೇಳದೆ ಜನರನ್ನು ಮನಬಂದಂತೆ ದಾರಿ ತಪ್ಪಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ದೀಪ ಹಚ್ಚುವ ಕೆಲಸವನ್ನೇ ದೊಡ್ಡ ಸಾಧನೆ ಎಂಬಂತೆ ಮಾತನಾಡಿದ್ದಾರೆ" ಎಂದು ಕಿಡಿಕಾರಿದರು.
"ಯಾರೊಬ್ಬರೂ ಇದನ್ನು ಪ್ರಶ್ನೆ ಮಾಡುವ ಧೈರ್ಯ ತೋರುತ್ತಿಲ್ಲ. ದೇಶದ ನಾಯಕರಿಗೆ, ಜನರ ಬಗ್ಗೆ ಅಲ್ಪ ಸ್ವಲ್ಪ ಕಾಳಜಿ ಇದ್ದರೆ ಮೊದಲು ದೇಶದೊಳಗೆ ಬಂದಿರುವ ವಿದೇಶಿಯರನ್ನು ಮತ್ತು ಜನವರಿ ನಂತರ ಭಾರತಕ್ಕೆ ಬಂದಿರುವ ನಮ್ಮ ಜನರನ್ನು ಹುಡುಕಿ ಅವರಿಗೆ ಒಂದು ಕಡೆ ಚಿಕಿತ್ಸೆ ಕೊಡಿ. ನೀವು ಮಾಡಬೇಕಾದ ಮೊದಲ ಕೆಲಸ ಇದು" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಭಾರತದ ಬಡ ಜನರ ಭಾವನೆ ಮತ್ತು ಜೀವದ ಜೊತೆಗೆ ಆಟವಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮೋದಿಯವರ ಇಂತಹ ಕೆಲಸಗಳು ಬಾಲಿಶವಾಗಿವೆ. ಕೊರೊನಾ ವೈರಸ್ ನಾಶ ಮಾಡುವ ಲಸಿಕೆ ಕಂಡುಹಿಡಿಯಲು ಪ್ರೇರೇಪಿಸಬೇಕಾದ ದೇಶದ ಪ್ರಧಾನಿಗಳು, ತಟ್ಟೆ, ಜಾಗಟೆ ಬಡಿಯಿರಿ, ಚಪ್ಪಾಳೆ ಹೊಡೆಯಿರಿ, ದೀಪ ಹಚ್ಚಿ, ಆರಿಸಿ ಅಂತ ಸಲಹೆ ನೀಡುವುದು ಈ ದೇಶದ ದುರಂತವಲ್ಲದೆ ಮತ್ತೇನೂ ಅಲ್ಲ" ಎಂದಿದ್ದಾರೆ.












Click it and Unblock the Notifications