ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರಿಚಯ
ಚಿತ್ರದುರ್ಗ, ಏಪ್ರಿಲ್ 04:ಹಾಲಿ ಸಂಸದರೂ ಆಗಿರುವ ಬಿ.ಎನ್. ಚಂದ್ರಪ್ಪ ಈ ಬಾರಿಯೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಬಿ.ಎನ್. ಚಂದ್ರಪ್ಪನವರು ತಮ್ಮ 25 ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ರಾಜಕೀಯ ರಂಗ ಪ್ರವೇಶಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇವರಿಗೆ ಕೇಂದ್ರದ ಮಾಜಿ ಸಚಿವೆ, ಡಿ.ಕೆ. ತಾರಾದೇವಿಯವರು ರಾಜಕೀಯ ಗುರುಗಳು. ಗುರುಗಳ ಮಾರ್ಗದರ್ಶನ ಮೂಲಕ ಪ್ರಥಮ ಬಾರಿಗೆ ಚಂದ್ರಪ್ಪ ಅವರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಆರಿಸಿ ಬಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಮಗ್ರ ಚಿತ್ರಣ
ನಂತರ ಉಪಾಧ್ಯಕ್ಷರಾಗಿದ್ದ ಚಂದ್ರಪ್ಪನವರು ಬದಲಾದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾತ್ಮಕ ಕೆಲಸ ನಿರ್ವಹಿಸಿದರು. ಕಾಂಗ್ರೆಸ್ ನಲ್ಲಿ ಬೆಳೆದ ಬಿ.ಎನ್. ಚಂದ್ರಪ್ಪ 1989 ರಲ್ಲಿ ಕೆಪಿಸಿಸಿಯಲ್ಲಿ ಜಂಟಿಕಾರ್ಯದರ್ಶಿಯಾಗಿ ಸ್ಥಾನ ಪಡೆದರು. ಆ ನಂತರ ಹಂತ ಹಂತವಾಗಿ ಹಲವಾರು ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಪಕ್ಷಕ್ಕೆ ಸೇವೆಯನ್ನ ಸಲ್ಲಿಸುತ್ತಾ ಬಂದರು.
ಲಿಡ್ಕರ್ ಅಧ್ಯಕ್ಷರಾಗಿಯೂ ಆಯ್ಕೆಯಾದ ಚಂದ್ರಪ್ಪನವರು ಸಾಮಾನ್ಯ ಕಾರ್ಯಕರ್ತನಂತೆ ಇದ್ದರು. ಆದರೆ 2008ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ಮೂಡಿಗೆರೆಯಿಂದ ಸ್ಪರ್ಧಿಸುವ ಅವಕಾಶ ದೊರೆಯಿತು. ಮುಂದೇನಾಯ್ತು ಓದಿ...

ಅನಿರೀಕ್ಷಿತವಾಗಿ ಟಿಕೆಟ್
2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಚಂದ್ರಪ್ಪ ಅವರಿಗೆ ಅನಿರೀಕ್ಷಿತವಾಗಿ ಟಿಕೆಟ್ ಸಿಕ್ಕಿತು. ಬಯಸದೆ ಬಂದ ಭಾಗ್ಯವನ್ನು ಚಂದ್ರಪ್ಪನವರು ಸದುಪಯೋಗಪಡಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಕೇವಲ ಐದಾರು ಸಾವಿರ ಮತಗಳಿಂದ ಅವರಿಗೆ ಹಿನ್ನೆಡೆ ಉಂಟಾಯಿತು.

ಚಂದ್ರಪ್ಪನವರಿಗೆ ಮತ್ತೆ ನಿರಾಸೆ
2008ರ ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಡದ ಚಂದ್ರಪ್ಪನವರು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ನಿಭಾಯಿಸಿದರು. ಮತ್ತೆ 2013ರ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆಯಿಂದ ಸ್ಪರ್ಧಿಸಲು ಅವಕಾಶ ದೊರೆಯಿತು. ಈ ಬಾರಿ ಖಂಡಿತ ಚಂದ್ರಪ್ಪ ಗೆಲ್ಲುತ್ತಾರೆ ಎಂದುಕೊಂಡಿದ್ದವರಿಗೆ ನಿರಾಸೆಯಾಯಿತು. ಏಕೆಂದರೆ ಕೇವಲ ಕೂದಲಳೆ ಅಂತರದಲ್ಲಿ 318 ಮತಗಳ ಅಂತರದಲ್ಲಿ ಚಂದ್ರಪ್ಪ ಅವರು ಸೋಲನ್ನು ಅನುಭವಿಸಿದರು.

ಅಧಿಕ ಮತಗಳ ಅಂತರದಿಂದ ಗೆಲುವು
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಚಿತ್ರದುರ್ಗದಿಂದ 2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಚಂದ್ರಪ್ಪಗೆ ಟಿಕೆಟ್ ದೊರೆಯಿತು. ಚಿತ್ರದುರ್ಗ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಇಲ್ಲಿ 2009ರಲ್ಲಿ ಬಿಜೆಪಿಯ ಜನಾರ್ದನ ಸ್ವಾಮಿ ಕಮಲ ಬಾವುಟ ಹಾರಿಸಿ, ಮರು ಆಯ್ಕೆಗೆ ಬಯಸಿದ್ದರು. ಆದರೆ ಚಿತ್ರದುರ್ಗಕ್ಕೆ ಎಂಟ್ರಿ ಕೊಟ್ಟ ಬಿ.ಎನ್.ಚಂದ್ರಪ್ಪಗೆ ಸುಮಾರು ಒಂದು ಲಕ್ಷಕ್ಕಿಂತ ಅಧಿಕ ಮತಗಳು ದೊರೆತು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಚಿತ್ರದುರ್ಗವನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡರು.

ಈ ಬಾರಿ ಗೆಲ್ಲುತ್ತಾರಾ ಚಂದ್ರಪ್ಪ?
ಈ ಬಾರಿ ಅಂದರೆ 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆದಿರುವ ಚಂದ್ರಪ್ಪ, ಗೆಲುವು ಬಯಸಿ ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೊಂದು ಕಡೆ ಬಿಜೆಪಿಯ ಎ. ನಾರಾಯಣ ಸ್ವಾಮಿ ಪ್ರಬಲ ಸ್ಪರ್ಧೆಯೊಡ್ಡಿದ್ದು, ಚಂದ್ರಪ್ಪ ಯಾವ ರೀತಿಯ ಗೆಲುವು ಪಡೆಯುತ್ತಾರೆಂಬುದು ಕಾದು ನೋಡಬೇಕಿದೆ.












Click it and Unblock the Notifications