ನೀರಿನ ಸಮಸ್ಯೆ:ಚಿತ್ರದುರ್ಗ ಶಾಸಕ, ಸಿಇಒ ನಡುವೆ ಮಾತಿನ ಜಟಾಪಟಿ
ಚಿತ್ರದುರ್ಗ, ಏಪ್ರಿಲ್ 30:ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಬಳಿ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಕೇಳಿದ್ದಕ್ಕೆ ಶಾಸಕರು ಫುಲ್ ಗರಂ ಆಗಿ ತೀವ್ರ ವಾಗ್ದಾಳಿ ನಡೆಸಿರುವ ಘಟನೆ ಸೋಮವಾರ (ಏ.30) ನಡೆದಿದೆ. ನೀರಿನ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮಹಿಳಾ ಅಧಿಕಾರಿ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ.
ಆಗಿದ್ದಿಷ್ಟು...ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಜಿಲ್ಲೆಯ ವಿವಿಧ ಹಳ್ಳಿಯ ಜನರು ಜಿಲ್ಲಾ ಪಂಚಾಯತ್ ಬಳಿ ಬಂದು ಸಿಇಒ ಸತ್ಯಭಾಮಾ ಅವರ ಬಳಿ ಮನವಿ ಮಾಡಿದ್ದಾರೆ. ಆಗ ಅಲ್ಲಿಗೆ ಬಂದಿದ್ದ ಶಾಸಕರು ಸಿಇಒ ವಿರುದ್ಧ ಮುಗಿಬಿದ್ದು, ಧಮ್ಕಿ ಕೂಡ ಹಾಕಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದೆ.

ಸಿಇಒ ವಿರುದ್ಧ ವಾಗ್ವಾದಕ್ಕಿಳಿದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ, ಚುನಾವಣಾ ನೀತಿ ಸಂಹಿತೆ ಇನ್ನು ಜಾರಿಯಲ್ಲಿರುವ ಸಂದರ್ಭದಲ್ಲಿಯೇ ಅದೇ ಜನರನ್ನು ಕಟ್ಟಿಕೊಂಡು ಜಿಲ್ಲಾ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಪ್ರಾಮಾಣಿಕ ಅಧಿಕಾರಿ ಎನಿಸಿಕೊಂಡಿರುವ ಸತ್ಯಭಾಮ ಅವರ ವಿರುದ್ಧ ಶಾಸಕರು ಹರಿಹಾಯ್ದಾಗ, ಸಿಇಒ ಕೂಡ ಏರು ಧ್ವನಿಯಲ್ಲೇ ಶಾಸಕರಿಗೆ ಉತ್ತರ ನೀಡಿದ್ದಾರೆ. ಈ ಘಟನೆಯ ವೀಡಿಯೋ ಸದ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ ಇಷ್ಟೆಲ್ಲಾ ನಡೆದ ಮೇಲೂ ಸಮಸ್ಯೆಗಳಿರುವ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಜನರಿಗೆ ಸಿಇಒ ಆಶ್ವಾಸನೆ ನೀಡಿರುವುದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications