ಶತಮಾನೋತ್ಸವ ಸಂಭ್ರಮದಲ್ಲಿ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ: ಅ.6ರಂದು ಬೃಹತ್ ಸಮಾವೇಶ
ಚಿತ್ರದುರ್ಗ, ಅಕ್ಟೋಬರ್ 02: ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾಗಿ 100 ವಸಂತಗಳನ್ನು ಪೂರೈಸಿದ್ದು ಶತಮಾನೋತ್ಸವ ಸಂಭ್ರಮದಲ್ಲಿದೆ.
ಈ ಸಂಭ್ರಮೊತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಇದೇ ತಿಂಗಳ ಅಕ್ಟೋಬರ್ 6 ರಂದು ಮುಖ್ಯಮಂತ್ರಿಗಳು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲಿದ್ದು ಅಂದು ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ಕರ್ನಾಟಕದ ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಆಶಯದಂತೆ 1916ರಲ್ಲಿ ಕೆನಡಾ ಕೀಟಶಾಸ್ತ್ರಜ್ಞ ವಿಜ್ಞಾನಿ ಡಾ. ಲೇಸ್ಲೀ ಕೋಲ್ ಮನ್ ನೇತೃತ್ವದಲ್ಲಿ ಬಬ್ಬೂರು ಫಾರಂ ಗ್ರಾಮದ ಬಳಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಲಾಯಿತು.
ಈ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರವಾಗಿ ಸ್ಥಾಪಿತಗೊಂಡು ರೈತರಿಗೆ ಮಾಹಿತಿಯ ಭಂಡಾರವಾಗಿ ಆರಂಭಗೊಂಡಿತು. 200 ಎಕರೆ ಭೂ ಪ್ರದೇಶದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ (2010) ನಿರ್ಮಾಣ ಮಾಡಲಾಗಿದೆ. 1965ರಲ್ಲಿ ಬೆಂಗಳೂರಿನ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿತ್ತು. ತಾಲೂಕಿನಲ್ಲಿ ವಾಣಿ ವಿಲಾಸ ಜಲಾಶಯದಲ್ಲಿ ನೀರಿನ ಸೌಲಭ್ಯವಿದ್ದರಿಂದ ಭತ್ತ, ಕಬ್ಬು ತಳಿಗಳ ಸಂಶೋಧನೆ, ಹತ್ತಿ ಬೀಜ ಉತ್ಪಾದನೆ ಹಾಗೂ ದ್ವಿದಳ ಧಾನ್ಯಗಳ ಸಂಶೋಧನೆ ಆದ್ಯತೆ ನೀಡಲಾಯಿತು.
ಬಬ್ಬೂರು ಫಾರಂ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರವು ಕೃಷಿ ವಿಶ್ವವಿದ್ಯಾಲಯ ಆಡಳಿತಕ್ಕೆ ಸೇರಿಕೊಳ್ಳಲಾಯಿತು. 1995 ಹಾಗೂ 1996ರಲ್ಲಿ ಅಖಿಲ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಗೆ ಒಳಗೊಂಡು ಕಡ್ಲೆ ಬೇಳೆ ಸಂಶೋಧನಾ ಕಾರ್ಯ ಆರಂಭಿಸಿತ್ತು. 2000ರಲ್ಲಿ ಕೃಷಿ ವಿಜ್ಞಾನ ಕೇಂದ್ರವಾಗಿ ರೈತರಿ ಹೊಸ ತಾಂತ್ರಿಕ ತಳಿಗಳನ್ನು ಪರಿಚಯಿಸಲಾಯಿತು.
ನಂತರ 2003ರಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರವಾಗಿ ರೂಪುಗೊಂಡು, 2010ರಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಯಾಯಿತು. ಈ ಕೇಂದ್ರ 2013ರಿಂದ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ವಿಜ್ಞಾನ ಕೇಂದ್ರ ಆವರಣದಲ್ಲಿ ಕೃಷಿ ಯಂತ್ರೋಪಕರಣಗಳ ಪರೀಕ್ಷೆ, ಹವಾಮಾನ ವೀಕ್ಷಣಾಲಯ ಸೇರಿದಂತೆ ತರಬೇತಿಯ ಕೇಂದ್ರವಾಗಿದೆ.
ಶತಮಾನೋತ್ಸವ ಕುರಿತು ಹಿರಿಯ ವಿಜ್ಞಾನಿ ಡಾ.ಓ ಕುಮಾರ್ ಮಾತನಾಡಿ 'ನಮ್ಮ ಕೃಷಿ ವಿಜ್ಞಾನ ಕೇಂದ್ರ 1916ರಲ್ಲಿ ಸ್ಥಾಪನೆಯಾಗಿ ನೂರು ವರ್ಷ ತುಂಬಿದ ಸಂಭ್ರಮದಲ್ಲಿದೆ. ಸಂಶೋಧನಾ ಕೇಂದ್ರದಿಂದ ಖುಷ್ಕಿ ಬೇಸಾಯ ಸಂಶೋಧನೆ, ಒಣ ಭೂಮಿಯಲ್ಲಿ ನೀರು, ಮಣ್ಣು, ಸಂರಕ್ಷಣೆಯ ಹಾಗೂ ಸಂಶೋಧನೆಯ ಪ್ರಮುಖ ಉದ್ದೇಶವಾಗಿದೆ.
ಶತಮಾನೋತ್ಸವ ಪೂರೈಸಿದ ಅಂಗವಾಗಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಉದ್ಘಾಟನೆ ಹಾಗೂ ಶತಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ನೀಡುವ ಕೇಂದ್ರವಾಗಿ ಹೊರಹೊಮ್ಮಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ ಸೇರಿದಂತೆ ರೈತರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಸೇರಿದಂತೆ ಇನ್ನಿತರ ಭಾಗಗಳಿಂದ ರೈತರು ಕಾರ್ಯಕ್ರಮಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.












Click it and Unblock the Notifications