ಕರ್ನಾಟಕದಲ್ಲಿ ಮತ್ತೆ ಕಮಲ ಅರಳಲಿದೆ; ಜೆ. ಪಿ. ನಡ್ಡಾ
ಚಿತ್ರದುರ್ಗ, ಜೂನ್ 18; "ಮುಂಬರುವ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೀವು ಕಮಲವನ್ನೇ ಅರಳಿಸಲಿದ್ದೀರಿ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ . ನಡ್ಡಾ ಹೇಳಿದರು.
ಶನಿವಾರ ಚಿತ್ರದುರ್ಗ ನಗರದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿರುವ ಜನಪ್ರತಿನಿಧಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಜೆ. ಪಿ. ನಡ್ಡಾ ಮಾತನಾಡಿ, "ಈ ಸಮಾವೇಶದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. ಕರ್ನಾಟಕ ಸಾಂಸ್ಕ್ರತಿಕ, ಪ್ರಾಕೃತಿಕ, ಶೌರ್ಯದ ಪ್ರತೀಕ, ಋಷಿಮುನಿಗಳ ಭೂಮಿಯಾಗಿದೆ. ಬಸವಣ್ಣ, ನಾರಾಯಣಗುರು ಅವರನ್ನು ನೆನಪಿಸಿಕೊಳ್ಳದಿದ್ದರೆ ಈ ಪ್ರವಾಸ ಅಪೂರ್ಣ" ಎಂದರು.

"15-20 ವರ್ಷದ ಹಿಂದೆ ಪಂಚಾಯತಿಗಳಿಗೆ ಎಷ್ಟು ಹಣ ಸಿಗುತ್ತಿತ್ತು?. 15 ರಿಂದ 20 ಲಕ್ಷ ಸಿಗುತ್ತಿತ್ತು. ಈಗ ಕೋಟಿ ಲೆಕ್ಕದಲ್ಲಿ ಅಭಿವೃದ್ಧಿಗಾಗಿ ಹಣ ಸಿಗುತ್ತಿದೆ. ಇದು ಪರಿವರ್ತನೆ ಪರ್ವ" ಎಂದು ಹೇಳಿದರು.
"ದೆಹಲಿಯಿಂದ ಬರುವ ಹಣ ನೇರವಾಗಿ ಪಂಚಾಯತಿ ತಲುಪುತ್ತಿದೆ. ಒಂದೂವರೆ ಲಕ್ಷ ಗ್ರಾಮಗಳ ಭೂ ದಾಖಲೆಗಳ ಸಮೀಕ್ಷೆಯಾಗಿದೆ. ಗ್ರಾಮದ ಅಭಿವೃದ್ಧಿ ಗ್ರಾಮ ಪಂಚಾಯತಿಗಳಿಂದಲೇ, ಅದನ್ನು ನಾವು ಮಾಡುತ್ತಿದ್ದೇವೆ" ಎಂದು ತಿಳಿಸಿದರು.
"ಕರ್ನಾಟಕದಲ್ಲಿ ಅಮೃತ ಕರ್ನಾಟಕ ಯೋಜನೆ ಉತ್ತಮವಾಗಿ ಅನುಷ್ಟಾನವಾಗುತ್ತಿದೆ. ಇನ್ನು ಬಯಲು ಶೌಚಮುಕ್ತ ರಾಜ್ಯವಾಗಿ ಕರ್ನಾಟಕ ಮೊದಲನೇ ಸ್ಥಾನದಲ್ಲಿರಲಿದೆ. ರಾಜ್ಯದಲ್ಲಿ ಗರೀಬ್ ಕಲ್ಯಾಣ ಯೋಜನೆಯ ಪಡಿತರದ ಅಕ್ಕಿ, ಬೇಳೆಯ ಪ್ರಮಾಣ ಹೆಚ್ಚಾಗಲಿದೆ. ಈಗಾಗಲೇ ಒಂದೂವರೆ ಕೋಟಿಗೂ ಹೆಚ್ಚು ರೇಷನ್ ಕಾರ್ಡ್ ವಿತರಣೆಯಾಗಿವೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ವಿವರಿಸಿದರು.

"ಇತ್ತ ಕರ್ನಾಟಕದಲ್ಲಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ. ಮೀನುಗಾರಿಕೆ ವಿಚಾರವಾಗಿ ದೊಡ್ಡ ಪ್ರಮಾಣದ ಉದ್ಯಮ ಕಾರವಾರದಲ್ಲಿ ತಲೆ ಎತ್ತಲಿದೆ. 4 ಬಿಲಿಯನ್ ಯುಎಸ್ ಡಾಲರ್ ಮೆಣಸು ಭಾರತದಿಂದ ರಫ್ತಾಗುತ್ತಿದೆ. ನರೇಂದ್ರ ಮೋದಿ ಸುರಕ್ಷತೆ ದೃಷ್ಟಿಯಿಂದ ಮಾಡಿದ ಕೆಲಸ ಯಾರೂ ಮಾಡಿಲ್ಲ. ಹಿಂದೆ ನಮ್ಮ ಗಡಿ ತಲುಪಲು ಮೂರು ದಿನ ತಗಲುಗುತ್ತಿತ್ತು. ಈಗ 24 ಗಂಟೆಯಲ್ಲಿ ತಲುಪಿ, ನಮ್ಮ ಸೈನಿಕರು ಯುದ್ಧಕ್ಕೆ ಸಿದ್ಧರಾಗಬಹುದು" ಎಂದು ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.
"ನಾವು ಯಾರ ನೆಲದ ಮೇಲೂ ಹೋಗುವವರಲ್ಲ, ಆದರೆ ನಮ್ಮ ಮೇಲೆ ಕೆಟ್ಟ ದೃಷ್ಟಿ ಹಾಕುವಂತಿಲ್ಲ ಎಂದು ಮೋದಿ ತೋರಿಸಿಕೊಟ್ಟಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಯಾರಾದರೂ ಮಾಡಿದ್ದರೆ?. ಪಾಕಿಸ್ತಾನದ ಮುಖ ಮೂತಿಗೆ ಹಾನಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ, ಯುವಕರು ಮೋದಿ ಮೇಲೆ ಭರವಸೆಯಿಡಬೇಕು. ಅಗ್ನಿಪಥ್ ದೇಶ ರಕ್ಷಣೆಗೆ ಸದಾ ಬದ್ಧವಾಗಿರಲಿದೆ. ಸದಾ ಯುವಕರ ಹಿತದ ಬಗೆಗೆ ಯೋಚಿಸುವ ಪಕ್ಷ ಬಿಜೆಪಿ" ಎಂದರು.












Click it and Unblock the Notifications