ಕೋಟೆ ನಾಡಿನ ಒನಕೆ ಹಿಡಿದ ಕೆ. ಪೂರ್ಣಿಮಾ ಶ್ರೀನಿವಾಸ್
ಹಿರಿಯೂರು, ಮೇ. 16: ಕಾಂಗ್ರೆಸ್ ಮತ್ತು ಜೆಡಿಎಸ್ ನ ಭದ್ರ ಕೋಟೆ ಎಂದೇ ಬಿಂಬಿತವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಹೊರಗಿನವರೇ ಆಳ್ವಿಕೆ ಮಾಡೋರು ಹೆಚ್ಚು. 2008 ರಲ್ಲಿ ಚಳ್ಳಕೆರೆ ಮೀಸಲು ಕ್ಷೇತ್ರವಾದ್ದರಿಂದ ಹಿರಿಯೂರಿಗೆ ಬಂದು ಪಕ್ಷೇತರವಾಗಿ ಆಯ್ಕೆಯಾಗಿ, ಮತ್ತೆ 2013 ರಲ್ಲಿ ಕಾಂಗ್ರೆಸ್ ನಿಂದ ಗೆದ್ದು, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಡಿ. ಸುಧಾಕರ್ ಅವರಿಗೆ ಈಗ ಬ್ರೇಕ್ ಹಾಕಿದವರು ಕೆ. ಪೂರ್ಣಿಮಾ ಶ್ರೀನಿವಾಸ್.
ಹೌದು, ಸುಮಾರು 12.875 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕೇಸರಿ ಬಾವುಟ ಹಾರಿಸಿ ಕೋಟೆ ನಾಡಿನ ಓನಕೆ ಹಿಡಿದಿದ್ದಾರೆ ಪೂರ್ಣಿಮಾ. ಆದರೆ ಕಳೆದ ಬಾರಿ ಇದೇ ಹಿರಿಯೂರು ಕ್ಷೇತ್ರದಲ್ಲಿ ಅವರ ತಂದೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಕೂದಲೆಳೆ ಅಂತರದಲ್ಲಿ ಸೋತಿದ್ದರು.
ಆಗ ಇಲ್ಲಿನ ಜನರ ನಾಡಿ ಮಿಡಿತ ಅರ್ಥಮಾಡಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಳ ಮಟ್ಟದಿಂದ ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಂಡು ನೆಲೆ ಇಲ್ಲದ ಬಿಜೆಪಿಗೆ ಇಂದು ಅಧಿಕೃತವಾಗಿ ನೆಲೆ ಕಲ್ಪಿಸಿರುವ ಪೂರ್ಣಿಮಾ ಶ್ರೀನಿವಾಸ್ ಅವರ ಚಿಕ್ಕ ಪರಿಚಯ ಇಲ್ಲಿದೆ...

ರಾಜಕೀಯ ಹೊಸತಲ್ಲ
ಕೆ. ಪೂರ್ಣಿಮಾ ತಂದೆಯೂ ರಾಜಕಾರಣಿಯಾದ್ದರಿಂದ ಅವರಿಗೆ ರಾಜಕೀಯ ಹೊಸತಲ್ಲ. ಅವರ ತಂದೆ ದಿ. ಮಾಜಿ ಸಚಿವ ಎ. ಕೃಷ್ಣಪ್ಪ ನವರು ಅಕಾಲಿಕ ಮರಣ ಹೊಂದಿದರು. ಆ ನಂತರ ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ಓಡನಾಟವಿಟ್ಟುಕೊಂಡು ಜನರ ಪ್ರೀತಿ, ವಿಶ್ವಾಸ, ನಂಬಿಕೆ, ಬೆಳೆಸಿಕೊಂಡರು.
ಬಡವರಿಗೆ ಆರ್ಥಿಕ ಸಹಾಯ, ಬರಗಾಲದಲ್ಲಿ ಕುಡಿಯುವ ನೀರು ಪೂರೈಕೆ, ಗೋಶಾಲೆಗಳಲ್ಲಿ ಉಚಿತ ಊಟದ ಸಹಾಯ, ಉದ್ಯೋಗ ಮೇಳ ಏರ್ಪಡಿಸಿ ಸುಮಾರು ಎರಡು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ಅದ್ದೂರಿಯಾಗಿ ಸ್ವಾಗತಿಸಿದ ಕಾರ್ಯಕರ್ತರು
ಹಿರಿಯೂರಿನಲ್ಲಿ ಮೊದಲ ಬಾರಿಗೆ ಕೇಸರಿ ಬಾವುಟ ಹಾರಿಸಿದ ಕೀರ್ತಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಲ್ಲುತ್ತದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ , ಶಿಳ್ಳೆ , ಕೇಕೆ, ಜೈಕಾರ ಕೂಗುತ್ತಾ ಕುಣಿದು ಕುಪ್ಪಳಿಸಿದರು.
ಎನ್ ಎಚ್ 4 ರಸ್ತೆಯ ಗಣೇಶ ದೇವಸ್ಥಾನದಿಂದ ಹಿರಿಯೂರಿನ ಟಿ.ಬಿ. ಸರ್ಕಲ್ , ತಾಲೂಕು ಕಚೇರಿ, ಗಾಂಧಿ ಸರ್ಕಲ್, ರಂಜಿತ್ ಹೋಟೆಲ್ ವರೆಗೆ ರೋಡ್ ಶೋ ಮೂಲಕ ವಿಜಯೋತ್ಸವ ಆಚರಿಸಿದರು.
ಬಹುಶಃ ಇಷ್ಟೊಂದು ದೊಡ್ಡ ಪ್ರಮಾಣದ ಸ್ವಾಗತ ಯಾರಿಗೂ ಸಿಕ್ಕಿಲ್ಲ. ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು. ಪೂರ್ಣಿಮಾ ಶ್ರೀನಿವಾಸ್ ಅವರು ಹಿರಿಯೂರಿಗೆ ಆಗಮಿಸುತ್ತಿದ್ದಂತೆ ನೆಚ್ಚಿನ ನಾಯಕಿಯನ್ನು ನೋಡಲು ಟ್ಯಾಕ್ಟರ್ , ಆಟೋ, ಬೈಕ್, ಕಾರುಗಳಲ್ಲಿ ಯುವಕರು , ಮಕ್ಕಳು, ಮಹಿಳೆಯರು, ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರಿದ್ದರು.
ಎಲ್ಲಿ ನೋಡಿದರಲ್ಲಿ ಕೇಸರಿ ಬಾವುಟ ಹಿಡಿದು ನಿಂತಿದ್ದ ಜನರು ತಂಡೋಪ ತಂಡವಾಗಿ ಪೂರ್ಣಿಮಾ ಅವರನ್ನು ನೋಡಲು ಮುಗಿಬಿದ್ದ ಘಟನೆ ಹಿರಿಯೂರಿನಲ್ಲಿ ಕಂಡುಬಂತು.

ಗೆಲುವಿಗೆ ಶ್ರಮಿಸಿದ ಪತಿ ಡಿ.ಟಿ.ಎಸ್
ಹಿರಿಯೂರು ಬಿಜೆಪಿಯ ಅಶ್ವಮೇಧ ಎಂದೇ ಕರೆಸಿಕೊಳ್ಳುವ ಡಿ.ಟಿ. ಶ್ರೀನಿವಾಸ್ ತನ್ನ ಪತ್ನಿಯ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದರು. ಮಾವನವರ ಸಾವಿನ ನೋವು, ಮತ್ತೊಂದು ಕಡೆ ಕೆಲವು ದಿನಗಳ ಹಿಂದೆ ಅಳಿಯನ ಸಾವಿನ ನಡುವೆಯು ಹಿರಿಯೂರು ಕ್ಷೇತ್ರದ ಜನರಿಗೆ ಉತ್ತಮ ಆಡಳಿತ ನೀಡುವ ಸಲುವಾಗಿ ತನ್ನದೆ ಆದ ಯುವ ಪಡೆಯ ಗುಂಪು ಕಟ್ಟಿಕೊಂಡು ಕ್ಷೇತ್ರದ್ಯಾಂತ
ಸುತ್ತಾಡಿದರು.
ಹಗಲು, ಇರುಳು ಎನ್ನದೆ ಸತತ ಮೂರು ವರ್ಷಗಳಿಂದ ಪ್ರಚಾರ ಮಾಡಿ ಇಂದು ಪತ್ನಿ ಕೆ. ಪೂರ್ಣಿಮಾ ಅವರ ವಿಜಯಕ್ಕೆ ಬೆನ್ನೆಲುಬಾಗಿ ನಿಂತರು. ಜೊತೆಗೆ ಕ್ಷೇತ್ರದ ಜನ ಬದಲಾವಣೆ ಬಯಸಿದ್ದು, ಹೊಸ ಮಹಿಳಾ ಮುಖಕ್ಕೆ ಮಣೆ ಹಾಕಿದ್ದಾರೆ. ಕ್ಷೇತ್ರ ಎಷ್ಟರ ಮಟ್ಟಿಗೆ ಅಭಿವೃದ್ಧಿಯ ಕಡೆಗೆ ಸಾಗುತ್ತದೆ ಎಂದು ಕಾದು ನೋಡಬೇಕಿದೆ.

ಕಾಲ್ಕಿತ್ತ ಡಿ. ಸುಧಾಕರ್
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜಯ ಸಾಧಿಸಿದ್ದ ಡಿ. ಸುಧಾಕರ್ ಮೂರನೇ ಗೆಲುವಿಗೆ ಸಾಕಷ್ಟು ಕಸರತ್ತು ನಡೆಸಿದ್ದರು. ನಾನೇ ಗೆಲ್ಲುತ್ತೇನೆ ನನ್ನ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದ ಜನ ನನ್ನ ಅಭಿವೃದ್ಧಿ ನೋಡಿ ನನಗೆ ಮತ ಕೊಡುತ್ತಾರೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದರು.
ಜೊತೆಗೆ ನನಗೆ ಎದುರಾಳಿ ಯಾರು ಇಲ್ಲ. ಯಾರು ಎದುರಾಳಿ ತರ ಕಾಣುವುದಿಲ್ಲ ಅಂದವರು ಇಂದು ಮತ ಎಣಿಕೆ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಸೋಲನ್ನು ಮನಗಂಡು ಮತ ಕೇಂದ್ರದಿಂದ ಹೊರ ಬಂದರು. ಮತ್ತೆ ಮತ ಕೇಂದ್ರದ ಕಡೆ ತಿರುಗಲಿಲ್ಲ.
ಸುಧಾಕರ್ ಆಟ ಹಿರಿಯೂರಿನಲ್ಲಿ ಈ ಬಾರಿ ನಡೆಯಲಿಲ್ಲ. ಸುಧಾಕರ್ ಸೋತಿದ್ದರಿಂದ ಸಾಕಷ್ಟು ಜನ ನಿಟ್ಟುಸಿರು ಬಿಟ್ಟರು.

ಮಂತ್ರಿ ಪಟ್ಟ ಸಿಗುವ ಸಾಧ್ಯತೆ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಯಾಕೆಂದರೆ ಮಹಿಳಾ ಅಭ್ಯರ್ಥಿಯಾದ ಅವರು ಅಹಿಂದಾ ವರ್ಗಕ್ಕೆ ಸೇರಿದ್ದು, ಜೊತೆಗೆ ಮಹಿಳಾ ಕೋಟದಲ್ಲಿ ಸಚಿವ ಸಂಪುಟಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications