ಶಾಸಕರ ಗುದ್ದಲಿ ಪೂಜೆ, ಫೋಟೋ; ರಸ್ತೆ ಕಾಮಗಾರಿ ಯಾವಾಗ?
ಚಿತ್ರದುರ್ಗ, ಜುಲೈ 11; ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ರಸ್ತೆಯ ಭೀಮನಬಂಡೆಯಿಂದ ಚಿತ್ರದೇವರಹಟ್ಟಿ ಗ್ರಾಮಕ್ಕೆ ಹಾದು ಹೋಗುವ ಸುಮಾರು 3 ಕಿ. ಮೀ. ರಸ್ತೆಯ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ಮಾಡಿದ್ದಾರೆ. ಅದರ ಫೋಟೋಗಳು ಇವೆ. ಆದರೆ ಎರಡು ವರ್ಷ ಕಳೆಯುತ್ತಾ ಬಂದರು ರಸ್ತೆ ಅಭಿವೃದ್ಧಿಯಾಗಿಲ್ಲ.
ರಸ್ತೆಯು ಸಂಪೂರ್ಣವಾಗಿ ಜಲ್ಲಿಗಳಿಂದ ಕೂಡಿದೆ. ಸಂಚರಿಸಲು ಬಾರದಂತೆ ಕಲ್ಲುಗಳಿವೆ. ಪ್ರತಿನಿತ್ಯ ಹತ್ತಾರು ದ್ವಿಚಕ್ರ ಹಾಗೂ ಆಟೋ ಸವಾರರು ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಹೈರಾಣಾಗುತ್ತಿದ್ದಾರೆ.
ಬೈಕ್ ಗಳಲ್ಲಿ ಸಂಚರಿಸುವಾಗ ಸ್ಕಿಡ್ ಆಗಿ ಅಪಘಾತಗಳು ನಡೆದ ಘಟನೆಗಳು ನಡೆದಿವೆ. ಆಟೋ, ಬೈಕ್ ಸವಾರರು ರಸ್ತೆಯಲ್ಲಿ ಸಂಚಾರ ನಡೆಸುವಾಗ ನರಕಯಾತನೆ ಅನುಭವಿಸುವಂತಾಗಿದೆ. ಪ್ರತಿದಿನ ಕುರಿಗಾಹಿಗಳು ಸೊಪ್ಪು, ಮೇವು ತರಲು ಹೋಗುವಾಗ ಹಿಂಸೆ ಅನುಭವಿಸುತ್ತಿದ್ದಾರೆ. ಇನ್ನೆಷ್ಟು ದಿನ ಹೀಗೆ ಓಡಾಡಬೇಕು? ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.

ಶಾಲಾ ಬಸ್ ಬರಲ್ಲ; ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಶಾಲಾ ಮಕ್ಕಳನ್ನು ಕರೆದೊಯ್ಯಲು ಶಾಲಾ ಬಸ್ ಗ್ರಾಮಕ್ಕೆ ಬರುತ್ತಿಲ್ಲ. ಚಿತ್ರದೇವರಹಟ್ಟಿ ಗ್ರಾಮದಿಂದ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಹೋಗುತ್ತಾರೆ.
ಇವರನ್ನು ಕರೆದೊಯ್ಯುಲು ಬಸ್ ಬರುತ್ತಿಲ್ಲ. ನಾವು ಏನ್ ಮಾಡಬೇಕು? ಎಂಬುದು ಪೋಷಕರ ಪ್ರಶ್ನೆಯಾಗಿದೆ. ನಾವು ನಮ್ಮ ಹಟ್ಟಿಯಿಂದ 3 ಕಿ. ಮೀ. ಭೀಮನಬಂಡೆಗೆ ನಡೆದುಕೊಂಡು ಹೋಗಬೇಕು. ಇಂತಹ ಕಿತ್ತುಹೋದ ರಸ್ತೆ ನೋಡಿದರೆ ಯಾರು ಬಸ್ ಓಡಿಸುತ್ತಾರೆ. ನಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು ಸಂಬಂಧಿಸಿದವರಿಗೆ ಮನವಿ ಮಾಡಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ; ರಸ್ತೆ ಕಾಮಗಾರಿಯನ್ನು ಇನ್ನೊಂದು ವಾರದಲ್ಲಿ ಪ್ರಾರಂಭಿಸದಿದ್ದರೆ ಶಾಸಕರ ಕಛೇರಿ ಬಳಿ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆಯೇ ಪ್ರತಿಭಟಿಸಲು ಸಿದ್ಧವಾಗಿದ್ದರು. ಆದರೆ ಕೋವಿಡ್ ಕಾರಣಕ್ಕೆ ಅದು ಸಾಧ್ಯವಾಗಿಲ್ಲ.

ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕರು ಭೂಮಿ ಪೂಜೆ ನೆರವೇರಿಸಿ, ಫೋಟೋ ತೆಗೆಸಿಕೊಂಡು ಹೋದವರು ಇದುವರೆಗೂ ಗ್ರಾಮದ ಕಡೆ ತಿರುಗಿ ನೋಡಿಲ್ಲ. ಗ್ರಾಮಕ್ಕೆ ಇದುವರೆಗೂ ಒಂದು ಒಂದು ಸಿಸಿ ರಸ್ತೆಯಾಗಲಿ, ಬಾಕ್ಸ್ ಚರಂಡಿಯಾಗಲಿ, ಬೀದಿ ದೀಪವಾಗಲಿ ಯಾವುದೂ ಇಲ್ಲ.
ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವರ್ಷಗಳು ಕಳೆದಿವೆ. ನಮ್ಮ ಹಟ್ಟಿಗೆ ಶಾಸಕರ ಕಡೆಯಿಂದ ಇದುವರೆಗೂ ಯಾವುದೇ ಅನುದಾನ ನೀಡಿಲ್ಲ, ಇನ್ನಾದರೂ ಎಚ್ಚೆತ್ತುಕೊಂಡು ಒಂದು ವಾರದಲ್ಲಿ ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಸಕರ ಕಛೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಜನರು ನೀಡಿದ್ದಾರೆ.
ಹೆಸರು ಹೇಳದ ಗ್ರಾಮದ ಮುಖಂಡರೊಬ್ಬರು, "ಇವರು ಕೆಲಸ ಮಾಡುತ್ತಾರೆ ಅಂತ ನಾವು ಭಾವಿಸಿದ್ದೆವು. ಆದರೆ ಇವರು ಏನು ಪ್ರಯೋಜನ ಇಲ್ಲ. ಮಾಜಿ ಶಾಸಕರ ಕೈಹಿಡಿಯಬೇಕಿತ್ತು. ಮುಂದಿನ ಬಾರಿ ಮಾಜಿ ಶಾಸಕರನ್ನು ಬೆಂಬಲಿಸೋಣ. ಪಕ್ಕದ ಟಿ. ಬಿ. ಗೊಲ್ಲರಹಟ್ಟಿ ರಸ್ತೆಗೆ ಮೂರು ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಮಾಡಿಕೊಟ್ಟಿದ್ದಾರೆ" ಎಂದು ಹೇಳಿದ್ದಾರೆ.












Click it and Unblock the Notifications