ಸತತ ಹೋರಾಟದ ನಂತರ ಕೊನೆಗೂ ವಿವಿ ಸಾಗರಕ್ಕೆ ಹರಿದುಬಂದಳು ಭದ್ರೆ; ನಿರಾಳವಾದ ರೈತರು
ಚಿತ್ರದುರ್ಗ, ಅಕ್ಟೋಬರ್ 3: ಜಿಲ್ಲೆಯ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ನೀರನ್ನು ವಿವಿ ಸಾಗರಕ್ಕೆ ಇಂದು ಪ್ರಾಯೋಗಿಕವಾಗಿ ಹರಿಸಲಾಗಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಅಕ್ಟೋಬರ್ 1ರಂದು ವಿವಿ ಸಾಗರಕ್ಕೆ ನೀರು ಹರಿಸಬೇಕಾಗಿ ದಿನಾಂಕ ನಿಗದಿಯಾಗಿತ್ತು. ಆದರೆ ತಾಂತ್ರಿಕ ದೋಷಗಳಿಂದ ತಡವಾಗಿತ್ತು. ಆದ್ದರಿಂದ ಇಂದು ಪ್ರಾಯೋಗಿಕವಾಗಿ ಬೆಟ್ಟದ ತಾವರಕೆರೆ ಸಮೀಪ ನೀರನ್ನು ಹರಿಸಲಾಗಿದೆ. ಜಿಲ್ಲೆಯ ರೈತರು, ಹೋರಾಟಗಾರರು ಇದೀಗ ನಿರಾಳರಾದಂತೆ ಕಾಣುತ್ತಿದ್ದಾರೆ.
ಈ ಹಿಂದೆ ಭದ್ರಾ ನೀರು ಹರಿಸುವಂತೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಆದರೂ ಒಂದಿಲ್ಲೊಂದು ಕಾರಣಕ್ಕೆ ವಿಳಂಬವಾಗುತ್ತಲೇ ಇತ್ತು. ಕೃಷಿಗೆ ಭದ್ರೆ ನೀರನ್ನೇ ಅವಲಂಬಿಸಿದ್ದ ರೈತರು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ ನೀರು ಹರಿದುಬಂದಿರುವುದು ಬಹು ದೊಡ್ಡ ಆಶಾಭಾವನೆ ಮೂಡಿಸಿದೆ. ರೈತರ ಮತ್ತೆ ಹೊಸ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ, ಗುಳೆ ಹೋದವರು ವಾಪಸ್ ಬರುವ ನಿರೀಕ್ಷೆಯೂ ಇದೆ.

"ಇಂದು ಪ್ರಾಯೋಗಿಕವಾಗಿ ನೀರು ಹರಿಸಿರುವುದು ದಶಕಗಳ ಹೋರಾಟಕ್ಕೆ ಸಿಕ್ಕ ಜಯ. ಇಲ್ಲಿನ ಯುವಜನರ ಭವಿಷ್ಯದ ಕನಸು ಭದ್ರಾ" ಎಂದು ಸಂತೋಷ ವ್ಯಕ್ತಪಡಿಸಿದರು ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್.












Click it and Unblock the Notifications