Get Updates
Get notified of breaking news, exclusive insights, and must-see stories!

ಪ್ರಾಣಿ ಸಂಗ್ರಹಾಲಯ ಸೇರಿದ ದಳವಾಯಿಕಟ್ಟೆ ಕರಡಿ; ಅಸಹಾಯಕ ಅರಣ್ಯ ಇಲಾಖೆ

ಚಿತ್ರದುರ್ಗ, ಸೆಪ್ಟೆಂಬರ್ 13: ಕರಡಿ ದಾಳಿಗೆ ಸಿಲುಕಿದ ಬುಕ್ಕಸಾಗರ ಗ್ರಾಮದ ರಾಜಣ್ಣ (50) ಮೃತಪಟ್ಟಿದ್ದಾರೆ. ಆದರೆ ಅದಕ್ಕೂ ಮುನ್ನ ಅವರ ಸ್ಥಿತಿಯನ್ನು ನೋಡಿ ಗ್ರಾಮಸ್ಥರು ವಿಪರೀತ ಸಿಟ್ಟಾಗಿದ್ದರು. ಏಕೆಂದರೆ, ರಾಜಣ್ಣ ಅವರ ಜತೆ ಇತರ ಮೂವರಿಗೆ ತೀರಾ ಗಂಭೀರ ಗಾಯಗಳಾಗಿವೆ. ಈ ಕಾರಣಕ್ಕೆ ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದಳವಾಯಿಕಟ್ಟೆ ಗ್ರಾಮದ ಜನರಲ್ಲಿ ಆತಂಕ ಒಂದು ಕಡೆಯಾದರೆ, ಆಕ್ರೋಶ ಮತ್ತೊಂದು ಕಡೆ.

Recommended Video

      ಸತ್ತ ಮರಿಯನ್ನು ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿರುವ ಆನೆ | Oneindia Kannada

      ಗ್ರಾಮಸ್ಥರು ಸಿಟ್ಟಿನಲ್ಲಿ ದೊಣ್ಣೆಗಳಿಂದ ಕರಡಿ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ನಿತ್ರಾಣಗೊಂಡಿದ್ದ ಕರಡಿಯನ್ನು ಹಿಡಿದು, ಬೋನಿಗೆ ಹಾಕಿದ್ದಾರೆ ಅರಣ್ಯ ಇಲಾಖೆ ಸಿಬ್ಬಂದಿ. ಆ ನಂತರ ಅರವಳಿಕೆ ಮದ್ದು ನೀಡಿ, ಆಡುಮಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳಿಂದ ಮಾಹಿತಿ ಬಂದಿದೆ.

      ಈ ಪ್ರಕರಣವು ಪ್ರಾಣಿ- ಮಾನವ ಸಂಘರ್ಷಕ್ಕೆ ಮತ್ತೊಂದು ಉದಾಹರಣೆ. ರಾಜ್ಯ ಸರಕಾರಗಳಿಗೆ ಅರಣ್ಯ ಇಲಾಖೆ ಎಂಬುದೇ ಹೊರೆ. ಆದಾಯ ಬಾರದ ಇಲಾಖೆ ಎಂಬ ತಾತ್ಸಾರ. ವನ್ಯ ಪ್ರಾಣಿಗಳನ್ನು ಹಿಡಿಯುವುದಕ್ಕೆ ಸರಿಯಾದ ಬಲೆ, ಬೋನು ಕೂಡ ಇಲ್ಲದ ಸ್ಥಿತಿ ಎಂದು ಖಾಸಗಿಯಾಗಿ ಹೇಳಿಕೊಳ್ಳುವ ಅರಣ್ಯ ಸಿಬ್ಬಂದಿ ಬಹಳ ಮಂದಿ ಸಿಗುತ್ತಾರೆ.

      Bear Sent To Chitradurga Adumalleshwara Zoo

      ಸಿಬ್ಬಂದಿ, ಸೌಕರ್ಯದ ಕೊರತೆ
      ಸರಿಯಾದ ಸಿಬ್ಬಂದಿ ಕೂಡ ಇರಲ್ಲ. ಮಾಹಿತಿ ಕೊಟ್ಟ ಎಷ್ಟೋ ಹೊತ್ತಿಗೆ ಸ್ಥಳಕ್ಕೆ ಬರುತ್ತಾರೆ. ಅಷ್ಟು ಹೊತ್ತಿಗೆ ಜನರೇ ಪ್ರಾಣಿಯನ್ನು ಕೊಂದಿರುತ್ತಾರೆ. ಒಂದು ವೇಳೆ ಬೇಗನೇ ಸ್ಥಳಕ್ಕೆ ಹೋದರೂ ಸೌಕರ್ಯದ ಕೊರತೆ ಕಾರಣಕ್ಕೆ ಪರಿಣಾಮಕಾರಿಯಾದ ಕಾರ್ಯಾಚರಣೆ ಮಾಡುವ ಸ್ಥಿತಿಯಲ್ಲಿ ಸಿಬ್ಬಂದಿ ಇರುವುದಿಲ್ಲ ಎಂದು ಜನರು ಆಕ್ಷೇಪಿಸುತ್ತಾರೆ.

      ಕಾಡಂಚಿನ ಪ್ರದೇಶಗಳಲ್ಲಿ ಅಥವಾ ವನ್ಯಪ್ರಾಣಿಗಳ ಚಲನವಲನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಅದೇ ವೇಳೆ ಅಗತ್ಯ ಸಲಕರಣೆ, ಸಿಬ್ಬಂದಿ ಎಲ್ಲ ಲಭ್ಯ ಇದ್ದು, ಜನರಿಗೆ ನೆರವಾಗಬೇಕು. ಆದರೆ ಎಷ್ಟೋ ವಲಯಗಳಲ್ಲಿ ನಗರಗಳಲ್ಲಿ ಪಶು ವೈದ್ಯಾಧಿಕಾರಿಗಳಾಗಿ ಕೆಲಸ ಮಾಡುವವರಿಂದಲೇ ವನ್ಯಪ್ರಾಣಿಗಳಿಗೂ ಅರಿವಳಿಕೆ ಕೊಡಿಸಲಾಗುತ್ತದೆ. ಆ ಪ್ರಮಾಣದಲ್ಲಿ ಹೆಚ್ಚು- ಕಡಿಮೆ ಆಗಿ ಅವು ಮೃತಪಟ್ಟ ಉದಾಹರಣೆಗಳು ಸಾಕಷ್ಟಿವೆ.

      ಇನ್ನು ಪ್ರಾಣಿಗಳನ್ನು ಹಿಡಿದ ಮೇಲೆ ಬಹುತೇಕ ಸಂದರ್ಭದಲ್ಲಿ ಅವುಗಳಿಗೆ ರೂಢಿಯಾದ ಆವಾಸ ಸ್ಥಾನದಲ್ಲೇ ಬಿಡಬೇಕು. ಆದರೆ ಗಮನಿಸಿ ನೋಡಿ, ಬೆಂಗಳೂರು ಸುತ್ತ ಮುತ್ತ ಹಿಡಿದ ಪ್ರಾಣಿಗಳನ್ನೆಲ್ಲ ಬನ್ನೇರುಘಟ್ಟಕ್ಕೆ ಬಿಟ್ಟೆವು ಎಂಬ ಉತ್ತರ ನೀಡುತ್ತಾರೆ. ಅದೇ ಥರ ಆಯಾ ಪ್ರದೇಶದ ಬಳಿ ಇರುವ ಪ್ರಾಣಿ ಸಂಗ್ರಹಾಲಯದಲ್ಲಿ ಬಿಟ್ಟಿದ್ದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

      Bear Sent To Chitradurga Adumalleshwara Zoo

      ಮೃಗಾಲಯದಲ್ಲಿ ಜಾಗವೇ ಇರುತ್ತಿರಲಿಲ್ಲ
      ಆದರೆ, ಹಾಗೆ ಹಿಡಿದ ಪ್ರಾಣಿಗಳನ್ನು ಹತ್ತಿರದ ಮೃಗಾಲಯಕ್ಕೆ ಬಿಟ್ಟಿದ್ದರೆ ಇಷ್ಟು ಹೊತ್ತಿಗೆ ಅವುಗಳಲ್ಲಿ ಪ್ರಾಣಿಗಳಿಗೆ ಅಂತ ಜಾಗವೇ ಇರುತ್ತಿರಲಿಲ್ಲ ಎನ್ನುತ್ತಾರೆ ಪರಿಸರ ಪ್ರೇಮಿಗಳು.

      ಬೆಟ್ಟ- ಗುಡ್ಡ ಪ್ರದೇಶದಲ್ಲಿ, ಕಾಡುಗಳಲ್ಲಿ ಆಹಾರ- ನೀರು ಸಿಗದಂತೆ ಆದಾಗ ಅಥವಾ ದಾರಿ ತಪ್ಪಿ ವನ್ಯಜೀವಿಗಳು ಜನ ವಸತಿ ಪ್ರದೇಶಗಳಿಗೆ ಬರುತ್ತವೆ. ದಾರಿ ತಪ್ಪಿ ಬರುವ ಪ್ರಾಣಿಗಳನ್ನು ಕೊಲ್ಲಬಾರದು ಹಾಗೂ ಅವುಗಳಿಂದ ಜೋಪಾನವಾಗಿ ಇರುವುದು ಹೇಗೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.

      ಇನ್ನು ಬೆಟ್ಟ ಗುಡ್ಡ, ಕಾಡುಗಳಲ್ಲಿ ವನ್ಯ ಪ್ರಾಣಿಗಳು ತಿನ್ನುವ ಸೊಪ್ಪು, ಗಿಡ- ಮರ, ಹಣ್ಣುಗಳು ದೊರೆಯುವಂತೆ ಮಾಡಬೇಕು. ಅಂದರೆ ಅರಣ್ಯ ಇಲಾಖೆಯಿಂದಲೇ ಬೆಳೆಸಬೇಕು. ಜತೆಗೆ ನೀರು ಎಲ್ಲ ಕಾಲದಲ್ಲೂ ಸಿಗುವಂತೆ ಮಾಡಬೇಕು. ಬಲಿ ಪ್ರಾಣಿಗಳು ಸಹ ಆ ವಾತಾವರಣದಲ್ಲೇ ದೊರೆಯುವಂತಾಗಬೇಕು. ಹೀಗೆಲ್ಲ ಮಾಡುವುದಕ್ಕೆ ಸಿಬ್ಬಂದಿ, ಅನುದಾನದ ಜತೆಗೆ ಇಚ್ಛಾ ಶಕ್ತಿ ಮತ್ತು ತಜ್ಞರ ತಂಡ ಬೇಕಾಗುತ್ತದೆ.

      ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಅವುಗಳನ್ನು ಕೊಲ್ಲುವುದು ಅಪರಾಧ. ಪದೇಪದೇ ವನ್ಯಪ್ರಾಣಿಗಳ ದಾಳಿಯಿಂದ ಕಂಗಾಲಾಗಿರುವವರಿಗೆ ಈ ಮಾತು ಸಿಟ್ಟು ತರಿಸುತ್ತದೆ. ಆದರೆ ಪ್ರಕೃತಿ ಸಮತೋಲನಕ್ಕೂ ಇವುಗಳ ಉಳಿವು ನಮಗೆ ಮುಖ್ಯ. ಪ್ರಾಣಿ- ಮಾನವ ಸಂಘರ್ಷವನ್ನು ವೈಜ್ಞಾನಿಕವಾಗಿಯೇ ಪರಿಹರಿಸಿಕೊಳ್ಳಬೇಕು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+